2020ರಲ್ಲಿ ಭಾರೀ ಸುದ್ದಿಯಲ್ಲಿದ್ದ ರಾಜ್ಯದ ನಾಲ್ವರು ಈ ಬಿಜೆಪಿ ಮುಖಂಡರು
ಪ್ರಸಕ್ತ ವರ್ಷದಲ್ಲಿ ಯಡಿಯೂರಪ್ಪನವರ ಸರಕಾರ ಹಲವು ಕಾರಣಗಳಲ್ಲಿ ಸದ್ದನ್ನು ಮಾಡಿತ್ತು. ಒಂದು ಕಡೆ ಕೊರೊನಾ ನಿರ್ವಹಣೆ, ಅದರಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಮತ್ತೊಂದೆಡೆ ಸಂಪುಟ ಪುನರ್ ರಚನೆ ಎನ್ನುವ ಗುಮ್ಮ.
ಯಡಿಯೂರಪ್ಪನವರ ಯಾವುದೇ ಒತ್ತಡಕ್ಕೆ ಮಣಿಯದ ಬಿಜೆಪಿ ವರಿಷ್ಠರು, ಎರಡನೇ ಹಂತದ ಸಂಪುಟ ವಿಸ್ತರಣೆಯ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಬಿಹಾರ, ಗ್ರೇಟರ್ ಹೈದರಾಬಾದ್ ಚುನಾವಣೆಯಲ್ಲಿ ಹೆಚ್ಚಾಗಿ ಬ್ಯೂಸಿಯಾಗಿದ್ದ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಬಿಎಸ್ವೈ ಮಾತಿಗೆ ಸೊಪ್ಪು ಹಾಕಲಿಲ್ಲ.
2020 ಹಿನ್ನೋಟ: ಭಾರತದ ರಾಜಕಾರಣಿಗಳ ವಿವಾದದ ಬೆನ್ನೇರಿದ ಹೇಳಿಕೆಗಳು
ಕೊರೊನಾ ದೇಶವನ್ನೆಲ್ಲಾ ಆವರಿಸಿದ್ದರೂ, ಬಿಜೆಪಿ, ರಾಜ್ಯ ಮತ್ತು ಕೇಂದ್ರದಲ್ಲಿ ಸಂಘಟನಾತ್ಮಕವಾಗಿ ಹಲವು ಬದಲಾವಣೆಗಳನ್ನು ಮಾಡಿತ್ತು. ಈ ಬದಲಾವಣೆಗಳನ್ನು, ಯಡಿಯೂರಪ್ಪನವರ ವಿರುದ್ದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಾಧಿಸಿದ ಮೇಲುಗೈ ಎಂದು ವ್ಯಾಖ್ಯಾನಿಸಲಾಗಿತ್ತು.
Unforgettable 2020: ವರ್ಷದ ವಿವಾದಾತ್ಮಕ ಸುದ್ದಿಗಳು
ಹಾಲೀ ವರ್ಷದಲ್ಲಿ ರಾಜ್ಯದ ನಾಲ್ಕು ಪ್ರಮುಖ ಮುಖಂಡರು ಭಾರೀ ಸದನ್ನು ಮಾಡಿದ್ದರು. ಒಂದು ತಮ್ಮ ಇಲಾಖೆಯ ಕಾರ್ಯವೈಖರಿ, ಇನ್ನೊಂದು, ತಮಗೆ ಪಕ್ಷ ವಹಿಸಿದ ಕೆಲಸವನ್ನು ನಿಭಾಯಿಸಿದ ರೀತಿ. ಆ ನಾಲ್ವರು ಮುಖಂಡರು ಯಾರು?
ಶಿಕ್ಷಣ ಸಚಿವ ಸುರೇಶ್ ಕುಮಾರ್
ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೊರೊನಾ ಹಾವಳಿಯ ನಡುವೆಯೂ ತಮ್ಮ ಇಲಾಖೆಯ ಕೆಲಸವನ್ನು ನಿಭಾಯಿಸಿದ ರೀತಿ ಭಾರೀ ಪ್ರಶಂಸನೆಗೆ ಒಳಗಾಯಿತು. ಜೊತೆಗೆ, ಸ್ವಾಭಾವಿಕವಾಗಿ ಅಲ್ಲಲ್ಲಿ ಟೀಕೆಗೂ ಗುರಿಯಾಯಿತು. ವೈರಸ್ ಹಾವಳಿಯ ನಡುವೆಯೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯನ್ನು ಸಸೂತ್ರವಾಗಿ ನಡೆಸಿದರು. ಜೊತೆಗೆ, ಫಲಿತಾಂಶವನ್ನು ಸರಿಯಾದ ಸಮಯದಲ್ಲಿ ಪ್ರಕಟವಾಗುವಂತೆ ಮಾಡಿದರು. ಲಕ್ಷಾಂತರ ವಿದ್ಯಾರ್ಥಿಗಳು ಬರೆಯುವ ಈ ಎರಡು ಪಬ್ಲಿಕ್ ಎಕ್ಸಾಂಗಳನ್ನು ಬಹುತೇಕ ಅಚ್ಚುಕಟ್ಟಾಗಿ ನಡೆಸಿದರು. ಸುರೇಶ್ ಕುಮಾರ್ ಈ ಕಾರ್ಯವೈಖರಿ ದೇಶದೆಲ್ಲಡೆ ಸುದ್ದಿಯಾಗಿತ್ತು.
ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದ ಸಿ.ಟಿ.ರವಿ
ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದ ಸಿ.ಟಿ.ರವಿ ಅವರಿಗೆ ಅನಿರೀಕ್ಷಿತವಾಗಿ ಕೇಂದ್ರ ಮಟ್ಟದಲ್ಲಿ ಸ್ಥಾನ ಲಭಿಸಿತು. ರಾಜ್ಯ ಸರಕಾರದ ಸಕ್ರಿಯ ಮಂತ್ರಿಗಳಲ್ಲಿ ಒಬ್ಬರಾಗಿದ್ದ ರವಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ಒಲಿಯಿತು. ಇದರಿಂದ ಸಚಿವ ಸ್ಥಾನವನ್ನು ತೊರೆದು, ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡ ರವಿ ಅವರನ್ನು ತಮಿಳುನಾಡು ಉಸ್ತುವಾರಿಯನ್ನಾಗಿಯೂ ಮಾಡಲಾಯಿತು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯ ಸಚಿವ ಡಾ.ಸುಧಾಕರ್
ಪ್ರಸಕ್ತ ವರ್ಷದಲ್ಲಿ ಭಾರೀ ಸದ್ದು ಮಾಡಿದ ಇನ್ನೋರ್ವ ಬಿಜೆಪಿ ಮುಖಂಡರು ಎಂದರೆ ಅದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯ ಸಚಿವ ಡಾ.ಸುಧಾಕರ್. ಕೊರೊನಾ ನಿರ್ವಹಣೆಯ ಜವಾಬ್ದಾರಿ ಅರ್ಧ ಶ್ರೀರಾಮುಲುಗೆ, ಇನ್ನರ್ಧ ಸುಧಾಕರ್ ಹೆಗಲ ಮೇಲೆ ಇದ್ದ ಸಮಯದಲ್ಲಿ ಇಬ್ಬರ ನಡುವೆ ಸಂವಹನದ ಕೊರತೆ ಕಾಡಿತು. ಇದನ್ನರಿತ ಸಿಎಂ ಬಿಎಸ್ವೈ ಸಂಪೂರ್ಣ ಜವಾಬ್ದಾರಿಯನ್ನು ಸುಧಾಕರ್ ಅವರಿಗೆ ವಹಿಸಿದರು. ಇದಾದ ನಂತರ, ಇಲಾಖೆ ಸರಿಯಾದ ದಾರಿಯಲ್ಲಿ ಸಾಗಲಾರಂಭಿಸಿತು. ಇದರ ಜೊತೆಗೆ, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಚುನಾವಣೆಯ ಉಪಪ್ರಭಾರಿಯನ್ನಾಗಿ ಸುಧಾಕರ್ ಅವರನ್ನು ವರಿಷ್ಠರು ನೇಮಿಸಿದ್ದರು.
Recommended Video
ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಪಡೆದಿದ್ದ ತೇಜಸ್ವಿ ಸೂರ್ಯ, ಗೆದ್ದಮೇಲೆ ಹಿಂದಿರುಗಿ ನೋಡದಷ್ಟು ಜನಪ್ರಿಯರಾಗುತ್ತಾ ಸಾಗಿದರು. ಸರಕಾರದ ಕೆಲಸ/ಯೋಜನೆಗಳನ್ನು ಸಮರ್ಥವಾಗಿ ನಿಭಾಯಿಸಿದ ತೇಜಸ್ವಿ ಸೂರ್ಯ ಅವರಿಗೆ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾದ ಅಧ್ಯಕ್ಷ ಸ್ಥಾನ ದಕ್ಕಿತು. ಇದಲ್ಲದೇ, ಪಶ್ಚಿಮ ಬಂಗಾಳದಲ್ಲಿ ಮಮತಾ ಸರಕಾರದ ವಿರುದ್ದ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳು, ಹೋರಾಟಗಳು ರಾಷ್ಟ್ರಾದ್ಯಂತ ಸುದ್ದಿಯಾಯಿತು.