ಬಲಿಪ ನಾರಾಯಣ ಭಾಗವತರ ಮುಡಿಗೆ ಪಾರ್ತಿಸುಬ್ಬ ಪ್ರಶಸ್ತಿ
ಬೆಂಗಳೂರು, ಸೆಪ್ಟೆಂಬರ್ 30 : ಮುಗ್ಧ ಮುಖ, ಮೃದು ಮಾತು, ಮಾತಿನ ತುಂಬಾ ಅನುಭವಗಳ ಹೂರಣ, ಬಾಯಿತುಂಬಾ ಬಚ್ಚಿರೆ ಬಜ್ಜೈ ( ಎಲೆ ಅಡಿಕೆ) ಮೆಲ್ಲುತ್ತಾ ಮಾತಿಗಿಳಿವ ಮೆಲು ಮಾತಿನ ಜ್ಞಾನ ಭಂಡಾರ. ನೈಜತೆಯನ್ನು ಅತಿರೇಕ ಮಾಡಿ ಹೇಳಲಾರರು. ಸುಳ್ಳು ಹೇಳುವುದು, ತನ್ನ ಜ್ಞಾನಕ್ಕೆ ತಿಳಿಯದ್ದನ್ನು ಹೇಳುವುದನ್ನು ಇವರು ಅರಿಯರು. ಇದು ಬಲಿಪಜ್ಜನ ಬಳಿ ಹೋದಾಗ ಅನುಭವಕ್ಕೆ ಬರುವ ಅವರ ವ್ಯಕ್ತಿತ್ವ.
ಭಾಗವತ ಭೀಷ್ಮ ವಿಶೇಷಣಕ್ಕೆ ಇವರಿಗಿಂತ ಸೂಕ್ತ ವ್ಯಕ್ತಿ ಬೇರೊಬ್ಬರಿಲ್ಲ. ಅಜ್ಜನ ಶಿಷ್ಯನಾಗಿ ಭಾಗವತಿಕೆಯನ್ನೇ ಬದುಕಿದವರು ಬಲಿಪ ನಾರಾಯಣ ಭಾಗವತರು. ಯಕ್ಷಗಾನದ ಮೇರು ಸಾಧಕರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಪ್ರದಾನ ಮಾಡಲಾಗುವ ಶ್ರೇಷ್ಠ ಪ್ರಶಸ್ತಿ ಪಾರ್ತಿಸುಬ್ಬ ಪ್ರಶಸ್ತಿ. ತಡವಾಗಿಯಾದರೂ ಬಲಿಪಜ್ಜರಿಗೆ ಸಂದಿದೆ.
ಕರಾವಳಿಯ ಗಂಡು ಕಲೆಯನ್ನು ಅಮೆರಿಕದಲ್ಲಿ ಪಸರಿಸಲಿರುವ ಕಲಾವಿದರು
ಪ್ರಶಸ್ತಿ ಸಿಕ್ಕಿದ್ದು ತಡವಾಯಿತು ಎಂದು ಹೇಳುವ ಹಾಗಿಲ್ಲ, ಏಕೆಂದರೆ ಅದನ್ನು ನೆಚ್ಚಿಕೊಂಡವರೂ ಅವರಲ್ಲ. ಬಲಿಪರ ಬಗ್ಗೆ ಹೇಳುವುದಾದದರೆ ಒಂದು ಧಾರಾವಾಹಿಯೇ ಮಾಡಿಬಿಡಬಹುದು. ಅಷ್ಟೊಂದು ಸ್ವಾರಸ್ಯ ಇದೆ. ಅವರ ಬದುಕಿನ ಮೆಲುಕಿನಲ್ಲಿ ಯಕ್ಷರಂಗದ ಮಜಲುಗಳಿವೆ. ಅಪಾರ ಅನುಭವಗಳಿಗೆ, ಸಾಧನೆಗಯ ವಿವಿಧ ಮುಖಗಳಿವೆ. ಅಜ್ಜನ ಶಿಷ್ಯನಾಗಿ ಮೊಮ್ಮಗ ಬಲಿಪರು ನಡೆಸಿದ ಕಠಿಣ ಅಭ್ಯಾಸದ ನಡೆಗಳಿವೆ.
ಯಕ್ಷಗಾನ ಪ್ರಿಯರೆ, ವೆಬ್ಸೈಟ್ಲ್ಲಿ ಸಿಗಲಿವೆ 5 ಸಾವಿರ ಯಕ್ಷಗಾನ ಪ್ರಸಂಗ
ಬಲಿಪ ಭಾಗವತರಿಗೆ ಅಂಟಿದ ಆಟದ ನಂಟಿನ ನೆನಪುಗಳಿವೆ. ಯಕ್ಷಗಾನದ ಮೊದಲ ರಂಗಪ್ರವೇಶದ ಅನುಭವಗಳಿವೆ. ಭಾಗವತಿಕೆಯಲ್ಲಿ ಪ್ರಯೋಗಗಳನ್ನು ನಡೆಸುತ್ತಾ, ಬಂದ ಉತ್ಸಾಹದ ಹೆಜ್ಜೆ ಗುರುತುಗಳಿವೆ. ತಾರುಣ್ಯದ ಸಾಹಸ ಮತ್ತು ಹೋರಾಟದ ಚಿತ್ರಣಗಳಿವೆ. ಬಲಿಪರ ಯಕ್ಷಗಾನದ ಬದುಕನ್ನು ರೂಪಿಸಿದ ಚಾರಿತ್ರಿಕ ಸನ್ನಿವೇಶಗಳ ನಿರೂಪಣೆಗಳಿವೆ. ಯಕ್ಷಗಾನ ಮೇಳಗಳ ತಿರುಗಾಟದ ಚಾರಿತ್ರಿಕ ಸಂಗತಿಗಳಿವೆ. ಒಟ್ಟಿನಲ್ಲಿ ಬಹುಮುಖಿ ದರ್ಶನ ಅವರ ಜೀವನ...
ದುಬೈಯಲ್ಲಿ ಯಕ್ಷಗಾನ ಅಭ್ಯಾಸ ತರಗತಿ 2018 ಪ್ರಾರಂಭ
21 ಯಕ್ಷಗಾನ ಪ್ರಸಂಗಗಳು
ಕುಂಬ್ಳೆ ಸೀಮೆಯ ಫಡ್ರೆ ಬಲಿಪ ನಾರಾಯಣ ಭಾಗವತರ ಹುಟ್ಟೂರು. ಮಾಧವ ಭಟ್ಟ ಸರಸ್ವತೀ ದಂಪತಿಗಳ 8 ಜನ ಮಕ್ಕಳಲ್ಲಿ ಹಿರಿಯವರು ಬಲಿಪ ನಾರಾಯಣ ಭಟ್ಟರು. ಇವರ ಮಾತೃಭಾಷೆ ಕರ್ಹಾಡ. ಇವರ ಭಾಗವತಿಕೆಗೆ ಅಜ್ಜ ಬಲಿಪ ನಾರಾಯಣ ಭಾಗವತರೇ ಮೊದಲ ಗುರುಗಳು.
ಯಕ್ಷಗಾನ ಅಥಧಾರಿಗಳಲ್ಲಿ ದಿಗ್ಗಜರೆನಿಸಿಕೊಂಡ, ಮುಳಿಯ ಮಹಾಬಲ ಭಟ್ಟ, ಪೆಲ ಕೃಷ್ಣ ಭಟ್ಟರು ಇವರ ಯಕ್ಷಗಾನದ ಗುರುಗಳು. ಶ್ರೀಮತಿ ಜಯಲಕ್ಷ್ಮಿ ಇವರ ಬದುಕಿಗೆ ಒಲಿದ ವಿಜಯಲಕ್ಷ್ಮಿ. ಮಾಧವ ಶಿವಶಂಕರ, ಶಶಿಧರ, ಪ್ರಸಾದ ಮಕ್ಕಳು.
ಬಲಿಪರ ಅಭಿಮಾನಿಗಳೇ ಸೇರಿ ಸುಮಾರು 12 ಲಕ್ಷ ವೆಚ್ಚದಲ್ಲಿ ಮಾರೂರಿನ ನೂಯಿಯಲ್ಲಿ ಅಮೃತ ಭವನ ನಿರ್ಮಾಣಸ ಮಾಡಿಸಿದ್ದಾರೆ. ಇಲ್ಲಿ ಬಲಿಪರ ಯಕ್ಷಗಾನಕ್ಕೆ ಸಂಬಂಧಿಸಿದ ಚಿತ್ರಣಗಳು ಮತ್ತು ಪ್ರಶಸ್ತಿಗಳ ಸಂಗ್ರಹ ಗ್ರಂಥ ಭಂಡಾರವೇ ಇಲ್ಲಿದೆ. ಇದು ಅವರ ಖ್ಯಾತಿಗೆ ಒಂದು ನಿದರ್ಶನ.
ಕಟೀಲು ಮೇಳ, ಮೂಲ್ಕಿ ,ಕೂಡ್ಲು, ಭಗವತಿ ಮೇಳ ಸಸಿಹಿತ್ಲು ಮೇಳ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಮೇಳಗಳಲ್ಲಿ ಬಲಿಪ ಭಾಗವತರು ಸೇವೆ ಸಲ್ಲಿಸಿದ್ದಾರೆ.
ಬಲಿಪ ನಾರಾಯಣ ಭಾಗವತರ ಕವಿತಾ ಜ್ಞಾನಕ್ಕೆ ಬಲಿಪರಿಗೆ ಬಲಿಪರೇ ಸಾಟಿ. ಕವಿತಾ ಜ್ಞಾನದ ಜತೆಗೆ ಪೌರಾಣಿಕ ಪ್ರಸಂಗಗಳು, ಯಕ್ಷಗಾನದ ಎಲ್ಲಾ ವಿಭಾಗಗಳನ್ನು ಅರೆದು ಕುಡಿದವರು ಇವರು. ಪಾತಿಸುಬ್ಬನ ಪ್ರಸಂಗಗಳ ಎಲ್ಲಾ ಭಾಗಗಳು ಮತ್ತು ಹಾಡುಗಳು ಇವರಿಗೆ ಕಂಠಪಾಠ. ಬಲಿಪ ನಾರಾಯಣ ಭಾಗವತರು ಹಾಡುವ ಶೈಲಿ ಬಲಿಪ ಶೈಲಿ ಎಂದೇಪ್ರಸಿದ್ಧವಾಗಿದೆ.
ಬಲಿಪರ ರಚಿಸಿರುವ 21 ಯಕ್ಷಗಾನ ಪ್ರಸಂಗಗಳು 'ಬಲಿಪರ ಜಯಲಕ್ಷ್ಮೀ' ಎಂಬ ಹೆಸರಿನಲ್ಲಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿಯವರು ಅಚ್ಚು ಹಾಕಿಸಿದ್ದಾರೆ. ಅಲ್ಲದೆ ಅಚ್ಚಾಗದ ಕೃತಿಗಳೇ ಸುಮಾರು 13 ರಷ್ಟಿವೆ.
ಬಲಿಪರ ಜೀವನ ಭಾಗವತಿಕೆಯ ಬದುಕಿನ ಆತ್ಮಚರಿತ್ರೆಯನ್ನು ಬಲಿಪ ಗಾನ ಯಾನ ಎಂಬ ಪುಸ್ತಕದಲ್ಲಿ ಡಾ. ನಾಗವೇಣಿ ಮಂಚಿ ಸೊಗಸಾಗಿ ನಿರೂಪಿಸಿದ್ದಾರೆ. ಬಲಿಪ ನಾರಾಯಣ ಭಾಗವತರನ್ನು ಅಭಿನಂದಿಸಿ ಮಾತನಾಡಿಸಿದಾಗ ನಮ್ಮ ಬೊಗಸೆಯೊಳಗೆ ದಕ್ಕಿದ ಅವರ ಬದುಕಿನ ಒಂದಿಷ್ಟು ಮೆಲುಕು ಇಲ್ಲಿದೆ.
12 ವರ್ಷಗಳ ಕಲಿಕೆ ಅಗತ್ಯ
ಯಕ್ಷಗಾನದ ಯಾವುದೇ ವಿಭಾಗಗಳಿರಲಿ ಭಾಗವತಿಕೆ, ಚೆಂಡೆ ಮದ್ದಳೆ, ವೇಷಧಾರಿಯಾಗಿ ಗುರುತಿಸಿಕೊಂಡು ಕಲಾವಿದ ಎಂಬ ಅರ್ಹತೆ ಬರಬೇಕೆಂದಾದರೆ ಕನಿಷ್ಟ 12 ವರ್ಷಗಳ ಕಲಿಕೆ ಅಗತ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಮುಖಕ್ಕೆ ವೇಷ ಬಳಿದ್ರೆ ಸಾಕು ಅವನೊಬ್ಬ ವೇಷಧಾರಿ ಅಂತನಿಸಿಕೊಂಡುಬಿಡ್ತಾನೆ. ಅವನಿಗೆ ಕುಣಿತ ಬರದಿದ್ರೂ ಸರಿ, ನಾಟ್ಯಗಾರಿಕೆ ಗೊತ್ತಿಲ್ಲದಿದ್ದರೂ ಸರಿ, ವೇಷಗಾರಿಕೆಯ ಜ್ಞಾನವಿಲ್ಲದಿದ್ದರೂ ಸರಿ ಅವನೊಬ್ಬ ವೇಷಧಾರಿ ಎಂಬುದು ಬಲಿಪ ನಾರಾಯಣ ಭಾಗವತರ ಮಾತು.
ತಿದ್ದುಪಡಿ ಮಾಡುವ ಮಹಾನುಭಾವರು
ಇತ್ತೀಚಿಗೆ ಯುವ ಕಲಾವಿದರು ಭಾಗವತರು, ಶಾಸ್ತ್ರೀಯ, ಪೌರಾಣಿಕ ಪ್ರಸಂಗಗಳನ್ನು ಅವರಿಗೆ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಿಕೊಂಡು ಬಿಡುತ್ತಾರೆ. ಇದು ಖಂಡಿತವಾಗಿ ಮೂಲ ಕವಿಗೆ ನೀಡುವ ಗೌರವವಲ್ಲ. ಇದರಿಂದ ಒಂದು ಅರ್ಥ ಹೋಗಿ ಇನ್ನೊಂದಾಗುತ್ತದೆ. ಶಬ್ಧ ಸಾಲುಗಳನ್ನೇ ಅದಲು ಬದಲು ಮಾಡಿ ಮೂಲ ರೂಪವನ್ನು ಕೆಡಿಸಿದ್ದೂ ಇದೆ ಎನ್ನುತ್ತಾರೆ ಬಲಿಪ ನಾರಾಯಣ ಭಾಗವತರು.
ಯಕ್ಷಗಾನ ಅಂದು-ಇಂದು
ಹಿಂದೆ ಯಕ್ಷಗಾನದಲ್ಲಿ ಶೇಣಿ ಸಾಮಗರ ಅರ್ಥಗಾರಿಕೆ ಅಂದ್ರೆ ಕಣ್ಣೆವೆ ಮಿಸುಕಾಡಿಸದೇ ಯಕ್ಷಗಾನವನ್ನು ಆಸ್ವಾದಿಸುತ್ತಿದ್ದರು ಜನ. ಇಂಥಹಾ ಒಂದು ಅರ್ಥಗಾರಿಕೆಯ ಕಲಾವಿದರಾಗಿದ್ದರು. ಆಗಿನ ದಿನಗಳಲ್ಲಿ ಯಕ್ಷಗಾನ ತಾಳ ಮದ್ದಳೆಗೆ ಬಂದವ ಮಧ್ಯೆ ಎದ್ದು ಹೋಗ್ತಿರ್ಲಿಲ್ಲ. ಈಗ ಯಕ್ಷಗಾನದ ಅಭಿರುಚಿಗಳು ಹೇಗೆ ಬದಲಾಗಿದೆ ಅಂದ್ರೆ, ಆಟ ಆಡಿಸುವವರ ಒತ್ತಾಯಕ್ಕೆ ಕಾಟಾಚಾರಕ್ಕೆ ಪ್ರೇಕ್ಷಕ ಬಂದು ಕೂರ್ತಾನೆ. 10 -15 ನಿಮಿಷ ಒತ್ತಾಯಕ್ಕೆ ಕೂತು ಜಾಗ ಕಾಲಿ ಮಾಡ್ತಾರೆ. ಯಕ್ಷಗಾನಕ್ಕೆ ಜನ ಸೇರೋದೇ ಕಡಿಮೆ. ಸೇರಿದ ಜನರಲ್ಲೂ ಮಧ್ಯರಾತ್ರೆಯಷ್ಟು ಹೊತ್ತಿಗೆ ಎದ್ದು ಹೋಗ್ತಾರೆ. ಶೇಣಿ ಸಾಮಗರಂತೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲಾವಿದರಿಲ್ಲ. ಪೌರಾಣಿಕ ಪ್ರಸಂಗಗಳಲ್ಲಿ ಮಾತ್ರ ನೀತಿ ಬೋಧೆಗಳು, ಜೀವನಕ್ಕೆ ಬೇಕಾಗುವ ಸಂದೇಶಗಳು ಸಿಗುತ್ತವೆ. ಮನರಂಜನೆಗಾಗಿ ಮಾಡುವ ಯಕ್ಷಗಾನಗಳಲ್ಲಿ ಇವು ಕಾಣಸಿಗುವುದಿಲ್ಲ ಎನ್ನುತ್ತಾರೆ ಬಲಿಪ ನಾರಾಯಣ ಭಾಗವತರು.
ಕಲಾವಿದನ ಜವಾಬ್ದಾರಿ ಏನು?
ಇಂದಿನ ಕಲಾವಿದ ಪರಂಪರೆಯ ಸನ್ನಿವೇಷಕ್ಕೆ ತಯಾರಾಗೋದಿಲ್ಲ. ಕಲಾವಿದನಾದವ ಯಕ್ಷಗಾನದ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು. ರಂಗದ ಮೇಲೆ ಬಂದು ಭೂತ ಕುಣಿದು ಹೋದ ಹಾಗೆ ಹೋಗ್ಬಾರ್ದು. ವೇಷಧಾರಿ, ಭಾಗವತ ಯಾರೇ ಇರಬಹುದು ರಂಗದ ಕ್ರಮಗಳು ಹೀಗೇ ಅಂತ ಇವೆ.. ಅದನ್ನು ಪಾಲಿಸಬೇಕು.
ಇದು ಈಗಿನ ವೇಷಧಾರಿಗಳಿಗಾಗಲೀ, ಭಾಗವತರಿಗಾಗಲೀ ಎಷ್ಟು ತಿಳಿದಿದೆಯೋ ಗೊತ್ತಿಲ್ಲ. ಒಂದು ಕಥೆ ಅಥವಾ ಪ್ರಸಂಗ ಬರೆದ ಕವಿಯ ಮೂಲ ಆಶಯವೊಂದಿರುತ್ತದೆ. ಯಕ್ಷಗಾನದ ಪ್ರಸ್ತುತಿ ಅದೇ ರೀತಿ ಸಾಗಬೇಕೇ ಹೊರತು ತಮಗೆ ಬೇಕಾದಂತೆ ಪರಿವರ್ತಿಸುವುದು ಉಚಿತವಲ್ಲ. ಭಾಗವತರು ಪದ ಹೇಳ್ತಾರೆ. ಅದರರ್ಥ ಅವರಿಗೆ ಮಾತ್ರ ಗೊತ್ತಿರುತ್ತದೆ. ರಂಗದ ಮೇಲೆ ಪಾತ್ರ ಮಾಡುವ ವೇಷಧಾರಿಗೆ ಅದರ ಅರ್ಥವೇ ತಿಳಿದಿರುವುದಿಲ್ಲ.
ಭಾಗವತರು ಹೇಳುವ ಪದ್ಯಕ್ಕೂ ಅರ್ಥದಾರಿ ಹೇಳುವ ಅರ್ಥಕ್ಕೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಈಗಿನ ಕಲಾವಿದರಿಗೆ ಪರಂಪರೆಯ ಬಗ್ಗೆ ತಿಳುವಳಿಕೆ ಇರಬಹುದು ಆದರೆ ಅದನ್ನು ರಂಗದ ಮೇಲೆ ಆಚರಣೆಗೆ ತರುವಲ್ಲಿ ಮಾರ್ಗದರ್ಶನ ನೀಡುವವರು ಯಾರೂ ಇಲ್ಲ. ಯಕ್ಷಗಾನದ ಪರಂಪರೆ ಈ ರೀತಿ ಇರಬೇಕು ಅಂತ ಹೇಳ್ತಾರೆ. ಆದ್ರೆ ಅದನ್ನು ಆಚರಣೆಗೆ ತರುತಿಲ್ಲ. ಪ್ರೇಕ್ಷಕರಿಗೆ ಅದರ ಬಗ್ಗೆ ಗೊತ್ತಿಲ್ಲ.