2018ರಲ್ಲಿ ನಿಧನರಾದ ನಾಡಿನ ಪೀಠಾಧಿಪತಿಗಳು, ಧಾರ್ಮಿಕ ಮುಖಂಡರು
ಕಳೆದ ವರ್ಷ ಹಲವು ಪೀಠಾಧಿಪತಿಗಳು, ಧಾರ್ಮಿಕ ಮುಖಂಡರು ಇಹಲೋಕವನ್ನು ತ್ಯಜಿಸಿದ್ದರು. ಅದರಲ್ಲಿ ಕೆಲವರದ್ದು ವಯೋಸಹಜ ಸಾವಾಗಿದ್ದರೆ, ಕೆಲವು ಸ್ವಾಮೀಜಿಗಳದ್ದು ಅಕಾಲಿಕ ನಿಧನ.
ಹಲವು ಸಮಾಜಮುಖಿ, ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಈ ಧಾರ್ಮಿಕ ಮುಖಂಡರ ನಿಧನ, ಭಕ್ತವಲಯವನ್ನು ಶೋಕಸಾಗರದಲ್ಲಿ ಮುಳುಗಿಸಿತ್ತು.
2018ರಲ್ಲಿ ನಿಧನರಾದ ನಾಡಿನ ಪ್ರಮುಖ ಮಾಧ್ವಪೀಠದ ಸ್ವಾಮೀಜಿಯೊಬ್ಬರ ನಿಧನ, ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು, ಜೊತೆಗೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಮಡಿಕೇರಿ ರಾಮಕೃಷ್ಣಮಠದ ಸ್ವಾಮಿ ಜಗದಾತ್ಮನಂದಜೀ ವಿಧಿವಶ
ಕಳೆದ ಒಂದು ವರ್ಷದಲ್ಲಿ ಅಗಲಿದ ಪ್ರಮುಖ ಎಂಟು ಪೀಠಾಧಿಪತಿಗಳು, ಧಾರ್ಮಿಕ ಮುಖಂಡರ ಪಟ್ಟಿ ಇಂತಿದೆ:
ಶ್ರೀಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ
ಗಂಗಾ ನದಿ ಉಳಿವಿಗಾಗಿ ಆಗ್ರಹಿಸಿ ಸತತ 109 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶ್ರೀಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ (ಜಿ ಡಿ ಅಗರವಾಲ್) ಹೃಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಆಸ್ಪತ್ರೆಯಲ್ಲಿ ಅಕ್ಟೋಬರ್ 11ರಂದು ಮೃತಪಟ್ಟರು. ಸ್ವಾಮೀಜಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೇಳಿಕೆಯನ್ನು ನೀಡಿದ್ದರು. ಐಐಟಿ ಕಾನ್ಪುರದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿ ಬಳಿಕ ಸನ್ಯಾಸ ಸ್ವೀಕರಿಸಿದ್ದ ಸ್ವಾಮೀಜಿ, ತಮ್ಮ ಬದುಕನ್ನು ನದಿ ರಕ್ಷಣೆ ಹೋರಾಟಕ್ಕೆ ಮುಡಿಪಾಗಿಟ್ಟಿದ್ದರು. 20.07.1932ರಲ್ಲಿ ಜನಿಸಿದ್ದ ಅಗರವಾಲ್ ಅವರಿಗೆ 87 ವರ್ಷ ವಯಸ್ಸಾಗಿತ್ತು.
ಉಪವಾಸ ಸತ್ಯಾಗ್ರಹ ಕೈ ಬಿಟ್ಟ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
ಕೋಟಿ ಲಿಂಗೇಶ್ವರ ದೇವಾಲಯದ ಸಂಸ್ಥಾಪಕರಾದ ಸಾಂಬಶಿವ ಸ್ವಾಮಿ
ಕೋಲಾರ ಕೋಟಿ ಲಿಂಗೇಶ್ವರ ದೇವಾಲಯದ ಸಂಸ್ಥಾಪಕರಾದ ಸಾಂಬಶಿವಸ್ವಾಮಿಯವರು ಡಿಸೆಂಬರ್ 14ರಂದು ನಿಧನರಾಗಿದ್ದರು. ಮದರ್ ತೆರೇಸಾ ಹೆಸರಿನಲ್ಲಿ ವಿದ್ಯಾಸಂಸ್ಥೆ ಕಟ್ಟಿದ್ದ ಸಾಂಬಶಿವಸ್ವಾಮಿಗಳು, 1979ರಲ್ಲಿ ಸುಮಾರಿನಲ್ಲಿ ಕಮ್ಮಸಂದ್ರದ ತಮ್ಮ ಸ್ವಂತ ಜಮೀನಿನಲ್ಲಿ ದೇವಾಲಯ ನಿರ್ಮಾಣ ಮಾಡುವ ಸಂಕಲ್ಪ ಹೊಂದಿ ಕೋಟಿಲಿಂಗೇಶ್ವರ ದೇವಾಲಯಕ್ಕೆ ಅಡಿಪಾಯ ಹಾಕಿದರು. ದೇವಾಲದ ಆವರಣದಲ್ಲಿ ಕೋಟಿ ಲಿಂಗ ಪ್ರತಿಷ್ಟಾಪಿಸಬೇಕು ಎನ್ನುವ ಇವರ ಕನಸು ಅವರ ಜೀವಿತಾವಧಿಯಲ್ಲಿ ಈಡೇರಲಿಲ್ಲ.
ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀಸದಾಶಿವ ಸ್ವಾಮೀಜಿ
ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀಸದಾಶಿವ ಸ್ವಾಮೀಜಿ (60) ಅವರು ಜುಲೈ ಐದರಂದು ಮುಂಜಾನೆ 5.30ರಲ್ಲಿ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದರು. ಬೆಂಗಳೂರಿನ ಭಕ್ತರ ಮನೆಗೆ ತೆರಳಿದ ಸಂದರ್ಭದಲ್ಲಿ ಸ್ವಾಮೀಜಿ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದರು. 1979-80ರಲ್ಲಿ ಬೇಬಿಬೆಟ್ಟದ ಶ್ರೀರಾಮಯೋಗಿಮಠದ ಪೀಠಾಧ್ಯಕ್ಷರಾದ ನಂತರ, ಸುತ್ತಮುತ್ತಲಿನ ಗ್ರಾಮಗಳಲ್ಲಿ ತೆರಳಿ ಧರ್ಮಪ್ರಚಾರ ಮಾಡುವ ಮೂಲಕ ಅಪಾರ ಭಕ್ತರನ್ನು ಹೊಂದಿದ್ದರು.
ಶ್ರೀ ಶಂಕರಾನಂದ ಸರಸ್ವತಿ ಸ್ವಾಮೀಜಿ
ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದ ಆತ್ಮಾನಂದ ಆಶ್ರಮದ ಪೀಠಾಧ್ಯಕ್ಷ ಶ್ರೀ ಶಂಕರಾನಂದ ಸರಸ್ವತಿ ಸ್ವಾಮೀಜಿ (83) ಅನಾರೋಗ್ಯದಿಂದ ನವೆಂಬರ್ 21ರಂದು ನಿಧನರಾಗಿದ್ದರು. ಹಲವು ವರ್ಷದಿಂದ ಗ್ರಾಮದಲ್ಲಿರುವ ಆಶ್ರಮದ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಕಂಚಿ ಪೀಠದ ಹಿರಿಯ ಯತಿಗಳಾದ ಜಯೇಂದ್ರ ಸರಸ್ವತಿ ಸ್ವಾಮೀಜಿ
ಕಂಚಿ ಕಾಮಕೋಟಿ ಪೀಠದ ಹಿರಿಯ ಯತಿಗಳಾದ ಜಯೇಂದ್ರ ಸರಸ್ವತಿ ಸ್ವಾಮೀಜಿಯವರು ಫೆಬ್ರವರಿ 28ರಂದು ವಿಧಿವಶರಾಗಿದ್ದರು. ಪಾರ್ಶ್ವವಾಯುಗೆ ತುತ್ತಾಗಿದ್ದ ಇವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಿದ್ದರು. ಶ್ರೀಗಳಿಗೆ 82ವರ್ಷ ವಯಸ್ಸಾಗಿತ್ತು. ಕಂಚಿ ಕಾಮಕೋಟಿ ಪೀಠದ 69ನೇ ಪೀಠಾಧಿಪತಿಗಳಾಗಿದ್ದ ಜಯೇಂದ್ರ ಸರಸ್ವತಿ ಸ್ವಾಮೀಜಿ ಜನಿಸಿದ್ದು 18.07.1935ರಂದು.
ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು
ಉಡುಪಿಯ ಅಷ್ಠಮಠಾಧೀಶರಲ್ಲೊಬ್ಬರಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು (55) ಜುಲೈ 19ರಂದು ಇಹಲೋಕ ತ್ಯಜಿಸಿದ್ದರು. ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಕೆಲ ತಿಂಗಳುಗಳಿಂದ ಶ್ರೀಗಳಿಗೆ ಆಗಾಗ ಆರೋಗ್ಯ ಸಮಸ್ಯೆ ಎದುರಾಗುತ್ತಲೇ ಇತ್ತು.ಈ ಹಿಂದೆ ಥೈರಾಯ್ಡ್ ಸಮಸ್ಯೆ ಇದ್ದಿದ್ದರಿಂದ ಶೀರೂರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಶ್ರೀಗಳದ್ದು ಅಸಹಜ ಸಾವು ಎಂದು ಭಾರೀ ಗುಲ್ಲೆಬ್ಬಿತ್ತು.
ಪ್ರಖ್ಯಾತ ಜೈನ ಮುನಿ ಶ್ರೀ ತರುಣ ಸಾಗರ
ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಖ್ಯಾತ ಜೈನ ಮುನಿ ಶ್ರೀ ತರುಣ ಸಾಗರ ಅವರು ಸೆಪ್ಟಂಬರ್ ಒಂದರಂದು ಇಹಲೋಕ ತ್ಯಜಿಸಿದ್ದರು, ಅವರಿಗೆ 51 ವರ್ಷ ವಯಸ್ಸಾಗಿತ್ತು. ಬಹಳ ದಿನಗಳಿಂದ ಜಾಂಡೀಸ್ ನಿಂದ ಬಳಲುತ್ತಿದ್ದ ಅವರನ್ನು 20 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆರೋಗ್ಯ ತೀರಾ ಹದಗೆಟ್ಟಿದ್ದರೂ ಕಳೆದ ಎರಡು ದಿನಗಳಿಂದ ಔಷಧವನ್ನೂ ಸೇವಿಸದೆ ಇದ್ದರು. ಜೊತೆಗೆ ಜೈನ ಮಂದಿರಕ್ಕೆ ತಮ್ಮನ್ನು ಕರೆದೊಯ್ಯುವಂತೆ ಅವರೇ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಜೈನ ಮಂದಿರಕ್ಕೆ ಕರೆದುಕೊಂಡು ಬರಲಾಗಿತ್ತು.
ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ
ಗದಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿಯವರು ಅಕ್ಟೋಬರ್ 20ರಂದು ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದರು. ಸಿದ್ದಲಿಂಗ ಸ್ವಾಮೀಜಿ ಅವರಿಗೆ ಹೃದಯಘಾತವಾದ ನಂತರ, ಜಿಲ್ಲೆಯ ಚೀರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸ್ವಾಮೀಜಿ ನಿಧನರಾದರು.