2014: ಕಾಂಗ್ರೆಸ್ ಪಕ್ಷಕ್ಕೆ ಅಗ್ನಿಪರೀಕ್ಷೆ
ಇದು 2014ರ ರಾಜಕೀಯ ಭವಿಷ್ಯವಾಣಿ. ಇಲ್ಲಿ ಕರಾಳ ಇತಿಹಾಸ ಮತ್ತು ಕಟು ವಾಸ್ತವವನ್ನು ತೂಗಿಹಾಕಿ ನೋಡಿದರೆ ಭವಿಷ್ಯ ಏನೆಂಬುದು ಗೋಚರವಾಗುತ್ತದೆ. ಹಾಗಂತ 2013 ಸುಖಿಯಾಗಿತ್ತು ಅಂತಲ್ಲ. 2013 ಮತ್ತು ಅದಕ್ಕೂ ಮುಂಚಿನ ದಿನಗಳಲ್ಲಿ ಕರಾಳ ಹಾದಿಯಲ್ಲಿ ಸಾಗಿಬಂದಿದ್ದರ ಫಲವೇ ಈ ವರ್ಷದ ರಾಶಿ ಫಲವಾಗಲಿದೆ.
ಪುರಾತನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲಿ ಮೊದಲ ಬಾರಿಗೆ 2014ರಲ್ಲಿ ದುರ್ಗಮ ಹಾದಿಯಲ್ಲಿ ಸಾಗಲಿದೆ. ಸೋನಿಯಾ ಗಾಂಧಿ ಸಾರಥ್ಯದಲ್ಲಿ 2014ನೇ ವರ್ಷ ದುರಂತಮಯವಾಗಲಿದೆ ಎನ್ನಬಹುದು. ಮುಂದೆ ಅಗ್ನಿಪರೀಕ್ಷೆಗೊಳಗಾಲಿರುವ ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಪಂಚ ಕಜ್ಜಾಯವಾಗಿ ನಾಲ್ಕು ರಾಜ್ಯಗಳಲ್ಲಿ ಸೋಲುಂಡಿದೆ.
ಜನರ ನಾಡಿಮಿಡಿತ ನೋಡಿದರೆ ದೇಶಾದ್ಯಂತ ಕಾಂಗ್ರೆಸ್ ವಿರೋಧಿ ಸುನಾಮಿ ಅಲೆ ಎದ್ದಿರುವುದು ಸ್ಪಷ್ಟವಾಗಿದೆ. ಪ್ರಮುಖ ಪ್ರತಿಪಕ್ಷವಾಗಿರುವ ಹಳೆಯ ಬಿಜೆಪಿ ಮತ್ತು ನವನವೀನ ಎಎಪಿ ಪರ ಅಲೆ ಎದ್ದಿದ್ದು, ಮೊದಲ ಬಾರಿ ಮತ ಹಾಕಲಿರುವ ಮತದಾರರು ಶೇ. 80ರಷ್ಟು ಕಾಂಗ್ರೆಸ್ ವಿರುದ್ಧ ಮತ ಹಾಕಲಿದ್ದಾರೆ ಎನ್ನಬಹುದು.
ಇದು ನಿಜವಾದಲ್ಲಿ ಕಾಂಗ್ರೆಸ್ ಅಂದಾಜು 12 ಕೋಟಿ ಮತದಾರರನ್ನು ಕಳೆದುಕೊಳ್ಳಬಹುದು. ಗಮನಾರ್ಹವೆಂದರೆ 2009ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಒಟ್ಟಾರೆಯಾಗಿ ಗಳಿಸಿದ್ದ ಮತ ಸಂಖ್ಯೆಯೂ ಇಷ್ಟೇ ಆಗಿತ್ತು. ರಾಜಸ್ತಾನ ಮತ್ತು ದಿಲ್ಲಿ ಫಲಿತಾಂಶಗಳನ್ನು ನೋಡಿದರೆ ಈ ಭವಿಷ್ಯ ವಾಣಿ ಕರಾರುವಕ್ಕಾಗುವ ಸಾಧ್ಯತೆಗಳು ನಿಚ್ಛಳವಾಗಿವೆ.
ಹಾಗೆ ನೊಡಿದರೆ ಪ್ರಸ್ತುತ ಕಾಂಗ್ರೆಸ್ ಪಕ್ಷವೊಂದೇ ಇಡೀ ದೇಶಾದ್ಯಂತ ನೆಲೆ ಹೊಂದಿರುವುದು. 1977ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವು ಒಟ್ಟಾರೆ ಮತ ಗಳಿಕೆಯಲ್ಲಿ ಎರಡನೆಯ ಸ್ಥಾನಕ್ಕೆ ದೂಡಲ್ಪಟ್ಟಿತ್ತು. ಜನತಾ ಪಕ್ಷ ಶೇ. 41ರಷ್ಟು ಮತ ಗಳಿಸಿದ್ದರೆ ಕಾಂಗ್ರೆಸ್ ಶೇ. 31ಕ್ಕೆ ಏದುಸಿರುಬಿಟ್ಟಿತ್ತು.
ಇನ್ನು 1999ರಲ್ಲಿಯೂ ಅಟಲ್ ಬಿಹಾರಿ ವಾಜಪೇಯಿ ಸಾರಥ್ಯದಲ್ಲಿ NDA ಮೈತ್ರಿಕೂಟವು ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಶೇ. 28ರಷ್ಟು ಮತ ಗಳಿಸಿತ್ತು. ಆದರೆ ಬಿಜೆಪಿ ಶೇ. 23ರಷ್ಟೇ ಗಳಿಸಿತ್ತು. ಈ ವ್ಯತ್ಯಾಸ ಏಕೆಂದರೆ ಕಾಂಗ್ರೆಸ್ 453 ಸ್ಥಾನಗಳಿಗೆ ಸ್ಪರ್ಧಿಸಿತ್ತು. ಅದೇ ಬಿಜೆಪಿ 339 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.
ವಿಶ್ಲೇಷಕರ ಪ್ರಕಾರ 1977ರ ಫಲಿತಾಂಶ 2014ರಲ್ಲಿಯೂ ಪುನರಾವರ್ತನೆಯಾಗುವ ಅಂದಾಜಿದೆ. ಮತ್ತು ಅದು ಕಾಂಗ್ರೆಸ್ ಪಕ್ಷಕ್ಕೆ ಚರಮಗೀತೆ ಹಾಡುವ ಸಾಧ್ಯತೆಯಿದೆ.