ಕಳೆದ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ 'ಹೆವಿವೈಟ್' ನಾಯಕರು
2013ರ ಚುನಾವಣೆಗೂ ಮುನ್ನ, ಮೂರು ಮೂರು ಮುಖ್ಯಮಂತ್ರಿಗಳು, ಯಡಿಯೂರಪ್ಪ ಜೈಲು ಸೇರಿ ಹೊರಬಂದಿದ್ದು, ಕೆಜೆಪಿ ಪಕ್ಷದ ಸ್ಥಾಪನೆ ಹೀಗೆ.. ಹಲವು ರಾಜಕೀಯ ವಿದ್ಯಮಾನಗಳಿಗೆ ರಾಜ್ಯ ಸಾಕ್ಷಿಯಾಗಿತ್ತು.
ನಿರೀಕ್ಷಿಸಿದ ಮಟ್ಟಕ್ಕೆ ಯಡಿಯೂರಪ್ಪನವರ ಕೆಜೆಪಿ ಪಕ್ಷ ಸಾಧನೆ ತೋರದಿದ್ದರೂ, ಅಲ್ಲಲ್ಲಿ ಬಿಜೆಪಿ ಮತಬ್ಯಾಂಕಿಗೆ ಧಕ್ಕೆ ತಂದ ಉದಾಹರಣೆಗಳು ಸಾಕಷ್ಟಿದ್ದವು. ಪ್ರಮುಖವಾಗಿ ಬಿಜೆಪಿ ಮತ್ತು ಬಿಜೆಪಿಯಿಂದ ಕೆಜೆಪಿಗೆ ಪಕ್ಷಾಂತರ ಮಾಡಿ, ಚುನಾವಣೆಗೆ ಸ್ಪರ್ಧಿಸಿದ್ದ ಹೆಚ್ಚಿನ ಮುಖಂಡರು ಸೋಲು ಅನುಭವಿಸಿದ್ದರು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ರಾಜ್ಯದ ಹದಿನಾಲ್ಕನೇ ವಿಧಾನಸಭೆಗೆ 5 ಮೇ 2013 ರಂದು ಎಲ್ಲಾ 223 ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು ಮತ್ತು ಮೇ ಎಂಟರಂದು ಮತಎಣಿಕೆ ಕಾರ್ಯ ನಡೆದಿತ್ತು. ಕಾಂಗ್ರೆಸ್ 223, ಬಿಜೆಪಿ 222, ಜೆಡಿಎಸ್ 222, ಕೆಜೆಪಿ 204, ಬಿಎಸ್ಆರ್ 176 ಮತ್ತು ಎಸ್ಪಿ 27ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು.
ರಾಮನಗರ: 2013ರ ಚುನಾವಣಾ ಫಲಿತಾಂಶದಲ್ಲಿ ಗೆದ್ದವರು, ಸೋತವರು
ಉತ್ತಮ ಎನ್ನಬಹುದಾದ ಶೇ. 70.23 ಮತದಾನ ನಡೆದಿತ್ತು. ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಜಗದೀಶ್ ಶೆಟ್ಟರ್ ಅಂದಿನ ಗವರ್ನರ್ ಎಚ್ ಆರ್ ಭಾರದ್ವಾಜ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು.
2013ರ ಚುನಾವಣೆಯಲ್ಲಿ ಹಾಲೀ ಶಾಸಕರಾಗಿದ್ದ ಹಲವಾರು ಮುಖಂಡರು ಸೇರಿ ವಿವಿಧ ಪಕ್ಷಗಳ ಹದಿನೆಂಟು ಮುಖಂಡರು ಸೋಲು ಅನುಭವಿಸಿದ್ದರು. ಅವರೆಲ್ಲಾ ಯಾರು? ಮುಂದೆ ಓದಿ..
ಬೀಳಗಿ ಕ್ಷೇತ್ರದಿಂದ ಮುರುಗೇಶ್ ನಿರಾಣಿ ಸೋಲು
ಬಿಜೆಪಿ ಸರಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ್ ನಿರಾಣಿ, ಬೀಳಗಿ ಕ್ಷೇತ್ರದಿಂದ ಸೋಲು ಅನುಭವಿಸಿದರು. ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿದ್ದ ನಿರಾಣಿಯವರನ್ನು ಕಾಂಗ್ರೆಸ್ಸಿನ ಜೆ ಟಿ ಪಾಟೀಲ್ 11,238 ಮತಗಳ ಅಂತರದಿಂದ ಸೋಲಿಸಿದ್ದರು.
ಬಸವನಗೌಡ ಪಾಟೀಳ್ ಯತ್ನಾಳ್ ಸೋಲು
ಕಳೆದ ಚುನಾವಣೆಯಲ್ಲಿ ಪ್ರಮುಖ ಮುಖಂಡರ ಸೋಲಿನ ಪಟ್ಟಿಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಸವನಗೌಡ ಪಾಟೀಳ್ ಯತ್ನಾಳ್ ಅವರ ಹೆಸರು ಕೂಡಾ ಒಂದು. ಬಿಜಾಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರನ್ನು ಕಾಂಗ್ರೆಸ್ಸಿನ ಮಕ್ಬುಲ್ ಎಸ್ ಭಗವಾನ್ 9,380 ಮತಗಳ ಅಂತರದಿಂದ ಸೋಲಿಸಿದ್ದರು.
ಬಂಡೆಪ್ಪ ಕಾಶೆಂಪೂರ ಸೋಲು - ಬೀದರ್ ದಕ್ಷಿಣ
ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಮತ್ತು ದೇವೇಗೌಡರ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಬಂಡೆಪ್ಪ ಕಾಶೆಂಪೂರ ಬೀದರ್ ದಕ್ಷಿಣ ಕ್ಷೇತ್ರದಿಂದ ಸೋಲು ಅನುಭವಿಸಿದ್ದರು. ಇವರನ್ನು ಕರ್ನಾಟಕ ಮಕ್ಕಳ ಪಕ್ಷದಿಂದ ಸ್ಪರ್ಧಿಸಿದ್ದ ಅಶೋಕ್ ಖೇಣಿ 15,788 ಮತಗಳಿಂದ ಸೋಲಿಸಿದ್ದರು.
ಕಾರವಾರದಲ್ಲಿ ಅಸ್ನೋಟಿಕರ್ ಸೋಲು
ಈಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಆನಂದ್ ಅಸ್ನೋಟಿಕರ್ ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ (ಕಾರವಾರ) ಸೋಲಿನ ರುಚಿ ಕಂಡಿದ್ದರು. ಅಸ್ನೋಟಿಕರ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸತೀಶ್ ಸೈಲ್, ಅಸ್ನೋಟಿಕರ್ ಅವರನ್ನು 35,880 ಮತಗಳ ಅಂತರದಿಂದ ಸೋಲಿಸಿದ್ದರು.
ಲೋಕೋಪಯೋಗಿ ಖಾತೆಯ ಸಚಿವರಾಗಿದ್ದ ಸಿ ಎಂ ಉದಾಸಿ
ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಲೋಕೋಪಯೋಗಿ ಖಾತೆಯ ಸಚಿವರಾಗಿದ್ದ ಸಿ ಎಂ ಉದಾಸಿ, ಬಿಜೆಪಿ ತೊರೆದು ಕೆಜೆಪಿ ಟಿಕೆಟಿನಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವರನ್ನು ಹಾನಗಲ್ ಕ್ಷೇತ್ರದಲ್ಲಿ ಮನೋಹರ್ ತಹಶೀಲ್ದಾರ್ ಅವರು 5.686 ಮತಗಳ ಅಂತರದಿಂದ ಸೋಲಿಸಿದ್ದರು.
ಬಿ ಸಿ ಪಾಟೀಲ್ ಕಡಿಮೆ ಅಂತರದ ಸೋಲು
ಕರ್ನಾಟಕ ರಾಜಕೀಯದ ಏಕೈಕ ಕೌರವ, ಕಾಂಗ್ರೆಸ್ ಅಭ್ಯರ್ಥಿ ಬಿ ಸಿ ಪಾಟೀಲ್ ಹಿರೇಕೆರೂರು ಕ್ಷೇತ್ರದಿಂದ ಸೋಲು ಅನುಭವಿಸಿದ್ದರು. ಇವರನ್ನು ಕೆಜೆಪಿ ಅಭ್ಯರ್ಥಿಯಾಗಿದ್ದ ಯು ಬಿ ಬಣಕರ್ 2,606 ಮತಗಳ ಅಂತರದಿಂದ ಸೋಲಿಸಿದ್ದರು.
ಕರುಣಾಕರ ರೆಡ್ಡಿ, ಹರಪನಹಳ್ಳಿ ಕ್ಷೇತ್ರದಿಂದ ಪರಾಭವ
ರಾಜ್ಯದ ತ್ರಿವಳಿ ರೆಡ್ಡಿ ಸಹೋದರರಲ್ಲಿ ಒಬ್ಬರಾದ ಕರುಣಾಕರ ರೆಡ್ಡಿ, ಹರಪನಹಳ್ಳಿ ಕ್ಷೇತ್ರದಿಂದ ಪರಾಭವಗೊಂಡಿದ್ದರು. ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿದ್ದ ರೆಡ್ಡಿಯವರನ್ನು ಕಾಂಗ್ರೆಸ್ಸಿನ ಎಂ ಪ್ರವೀಂದ್ರ 8,406 ಮತಗಳ ಅಂತರದಿಂದ ಸೋಲಿಸಿದ್ದರು.
ಎಂ ಪಿ ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರದಿಂದ ಸೋಲು
ಯಡಿಯೂರಪ್ಪನವರ ಪಕ್ಕಾ ಅನುಯಾಯಿ ಎಂ ಪಿ ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರದಿಂದ ಸೋಲು ಅನುಭವಿಸಿದ್ದರು. ಕೆಜೆಪಿ ಟಿಕೆಟಿನಿಂದ ಸ್ಪರ್ಧಿಸಿದ್ದ ಇವರನ್ನು ಕಾಂಗ್ರೆಸ್ಸಿನ ಡಿ ಜಿ ಶಾಂತನಗೌಡ 18,738 ಮತಗಳ ಅಂತರದಿಂದ ಸೋಲಿಸಿದ್ದರು.
ಕೆಜೆಪಿ ಟಿಕೆಟಿನಿಂದ ಸ್ಪರ್ಧಿಸಿದ್ದ ಹರತಾಳು ಹಾಲಪ್ಪ
ಸೊರಬ ಕ್ಷೇತ್ರದಿಂದ ಕೆಜೆಪಿ ಟಿಕೆಟಿನಿಂದ ಸ್ಪರ್ಧಿಸಿದ್ದ ಹರತಾಳು ಹಾಲಪ್ಪ, ಜೆಡಿಎಸ್ ಪಕ್ಷದ ಮಧು ಬಂಗಾರಪ್ಪ ವಿರುದ್ದ ಸೋಲು ಅನುಭವಿಸಿದ್ದರು. ಹಾಲಪ್ಪ ಅವರನ್ನು ಮಧು, 21,225 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
ಕಳೆದ ಚುನಾವಣೆಯಲ್ಲಿ ಬಿಜೆಪಿಗಾದ ದೊಡ್ಡ ಮುಖಭಂಗದ ಫಲಿತಾಂಶ
ಕಳೆದ ಚುನಾವಣೆಯಲ್ಲಿ ಬಿಜೆಪಿಗಾದ ದೊಡ್ಡ ಮುಖಭಂಗದ ಫಲಿತಾಂಶವೆಂದರೆ ಅದು ಶಿವಮೊಗ್ಗ ಕ್ಷೇತ್ರದ್ದು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ ಎಸ್ ಈಶ್ವರಪ್ಪ ಅಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಕಾಂಗ್ರೆಸ್ ಪಕ್ಷದ ಕೆ ಬಿ ಪ್ರಸನ್ನ ಕುಮಾರ್, ಕೆಜೆಪಿಯ ರುದ್ರೇಗೌಡ ಅವರನ್ನು ಕೇವಲ 278 ಮತಗಳ ಅಂತರದಿಂದ ಸೋಲಿಸಿದ್ದರು.
ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ಸೋಲು
ಕಾಂಗ್ರೆಸ್ಸಿನ ಸಿಎಂ ಆಕಾಂಕ್ಷಿಯಾಗಿದ್ದ ಡಾ. ಪರಮೇಶ್ವರ್ ಅವರಿಗೆ ರಾಜಕೀಯ ವೃತ್ತಿ ಜೀವನದಲ್ಲಾದ ಬಹುದೊಡ್ಡ ಹಿನ್ನಡೆ. ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್, ಜೆಡಿಎಸ್ ಪಕ್ಷದ ಸುಧಾಕರ್ ಲಾಲ್ ವಿರುದ್ದ 18,155 ಮತಗಳ ಅಂತರದಿಂದ ಸೋಲು ಅನುಭವಿಸಿದರು.
ಕಾಂಗ್ರೆಸ್ಸಿನ ಬಿ ಎಲ್ ಶಂಕರ್ ಸೋಲು
ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಬಿ ಎಲ್ ಶಂಕರ್ ಸೋಲು ಅನುಭವಿಸಿದರು. ಅವರನ್ನು ಬಿಜೆಪಿಯ ಎಸ್ ಮುನಿರಾಜು 10,828 ಮತಗಳ ಅಂತರದಿಂದ ಸೋಲಿಸಿದ್ದರು.
ಗಾಂಧಿನಗರದಿಂದ ಪಿ ಸಿ ಮೋಹನ್ ಗೆ ಪರಾಭವ
ಕಳೆದ ಚುನಾವಣೆಯಲ್ಲಿ ಮತ್ತೊಂದು ಪ್ರಮುಖ ಮುಖಂಡನ ಸೋಲೆಂದರೆ ಅದು ಬೆಂಗಳೂರಿನ ಗಾಂಧಿನಗರ ಕ್ಷೇತ್ರದ್ದು. ಅಲ್ಲಿ ಬಿಜೆಪಿಯ ಪಿ ಸಿ ಮೋಹನ್, ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ವಿರುದ್ದ 22,607 ಮತಗಳ ಅಂತರದಿಂದ ಸೋಲು ಅನುಭವಿಸಿದರು.
ವಿ ಸೋಮಣ್ಣಗೆ ಭಾರೀ ಸೋಲು
ಬೆಂಗಳೂರಿನ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿಯ ವಿ ಸೋಮಣ್ಣ, ಕಾಂಗ್ರೆಸ್ಸಿನ ಎಂ ಕೃಷ್ಣಪ್ಪ ವಿರುದ್ದ 32,642 ಮತಗಳ ಅಂತರದಿಂದ ಸೋಲು ಅನುಭವಿಸಿದರು.
ಕಾರ್ಮಿಕ ಸಚಿವರಾಗಿದ್ದ ಬಿ ಎನ್ ಬಚ್ಚೇಗೌಡ ಸೋಲು
ಈ ಹಿಂದೆ ಕಾರ್ಮಿಕ ಸಚಿವರಾಗಿದ್ದ ಬಿ ಎನ್ ಬಚ್ಚೇಗೌಡ, ಬಿಜೆಪಿ ಟಿಕೆಟಿನಿಂದ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಚ್ಚೇಗೌಡ್, ಕಾಂಗ್ರೆಸ್ಸಿನ ಎಂಟಿಬಿ ನಾಗರಾಜ್ ವಿರುದ್ದ 7,139 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಡಿ ಕೆ ಶಿವಕುಮಾರ್ ಭಾರೀ ಗೆಲುವು
ಕನಕಪುರ ಕ್ಷೇತ್ರದಿಂದ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಪಿಜಿಆರ್ ಸಿಂಧ್ಯಾ, ಕಾಂಗ್ರೆಸ್ಸಿನ ಹೆವಿವೈಟ್ ಡಿ ಕೆ ಶಿವಕುಮಾರ್ ವಿರುದ್ದ ಸೋಲು ಅನುಭವಿಸಿದ್ದರು. ಡಿಕೆಶಿ, ಸಿಂಧ್ಯಾ ಅವರನ್ನು 31,424 ಮತಗಳ ಅಂತರದಿಂದ ಸೋಲಿಸಿದ್ದರು.
ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ
ಕಳೆದ ಚುನಾವಣೆಯಲ್ಲಿನ ಮತ್ತೊಂದು ಆಶ್ಚರ್ಯಕಾರಿ ಫಲಿತಾಂಶವೆಂದರೆ ಅದು ಚನ್ನಪಟ್ಟಣ ಕ್ಷೇತ್ರದ್ದು. ಅಲ್ಲಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ, ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಸಿ ಪಿ ಯೋಗೀಶ್ವರ್ ವಿರುದ್ದ 6,464 ಮತಗಳ ಅಂತರದಿಂದ ಸೋತಿದ್ದರು.
ಬಿಜೆಪಿಯ ಎಸ್ ರಾಮದಾಸ್ ಸೋಲು
ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿಯ ಎಸ್ ರಾಮದಾಸ್ ಸೋಲು ಅನುಭವಿಸಿದ್ದರು. ಅವರನ್ನು ಕಾಂಗ್ರೆಸ್ಸಿನ ಎಂ ಕೆ ಸೋಮಶೇಖರ್ 6,065 ಮತಗಳ ಅಂತರದಿಂದ ಸೋಲಿಸಿದ್ದರು.