ಬೆಂಗಳೂರು-ಮೈಸೂರು ಮಾರ್ಗಕ್ಕಾಗಿ 200 ಮರಗಳಿಗೆ ಕೊಡಲಿ?
ಬೆಂಗಳೂರು, ಜೂನ್ 21 : ಬೆಂಗಳೂರು-ಮೈಸೂರು ರಸ್ತೆ ಅಗಲೀಕರಣಕ್ಕೆ ಪ್ರಕ್ರಿಯೆ ಆರಂಭವಾಗಿದೆ. ಸುಮಾರು 200 ಮರಗಳನ್ನು ಇದಕ್ಕಾಗಿ ಕತ್ತರಿಸಲು ಯೋಜಿಸಲಾಗಿದ್ದು, ಪರಿಸರ ಪ್ರೇಮಿಗಳು ಹೋರಾಟ ಮಾಡಲು ನಿರ್ಧರಿಸಿದ್ದಾರೆ.
ಬೆಂಗಳೂರು ಮತ್ತು ಮೈಸೂರಿನ ಪರಿಸರ ಹೋರಾಟಗಾರರು ಮರಗಳನ್ನು ಕಡಿಯದಂತೆ ಜನಜಾಗೃತಿ ಮೂಡಿಸಲು ನಿರ್ಧರಿಸಿದ್ದಾರೆ. 4.2 ಕಿ.ಮೀ. ರಸ್ತೆಯ ಅಗಲೀಕರಣಕ್ಕಾಗಿ ಸುಮಾರು 200 ಮರಗಳಿಗೆ ಕೊಡಲಿ ಹಾಕಲಾಗುತ್ತದೆ.
ಬೆಂಗಳೂರಲ್ಲಿ 50 ಸಾವಿರ ಸಸಿಗಳನ್ನು ನೆಡಲು ಬಿಡಿಎ ಸಿದ್ಧತೆ
ಮರಗಳನ್ನು ಕಡಿಯುವ ಮೊದಲು ಅರಣ್ಯ ಇಲಾಖೆ ಜನರ ಜೊತೆ ಸಭೆ ನಡೆಸಬೇಕು. ಆದರೆ, ಕಾಟಾಚಾರಕ್ಕೆ ಎಂಬಂತೆ ಇಲಾಖೆ ಸಭೆ ನಡೆಸಿದ್ದು, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರು ಸರ್ಕಲ್ (ಕೊಲಂಬಿಯಾ ಏಷ್ಯಾ ಆಸ್ಪತ್ರೆ) ಯಿಂದ ಕಳಸವಾಡಿ ಗ್ರಾಮದ ತನಕ ಸುಮಾರು 209 ಮರಗಳಿವೆ. ಅವುಗಳನ್ನು ಕತ್ತರಿಸಿ, ರಸ್ತೆ ಅಗಲೀಕರಣ ಮಾಡಲು ಯೋಜನೆ ರೂಪಿಸಲಾಗಿದೆ.
ಬೆಂಗಳೂರು-ಮೈಸೂರು 6 ಪಥ ರಸ್ತೆ ನಿರ್ಮಾಣ
'ಈ ಮಾರ್ಗದಲ್ಲಿ ನೂರಾರು ಮರಗಳಿವೆ. 40 ರಿಂದ 50 ವರ್ಷ ಹಳೆಯ ಮರಗಳನ್ನು ಇಲ್ಲಿ ಕಾಣಬಹುದಾಗಿದೆ. ಅರಣ್ಯ ಇಲಾಖೆ ಕರೆದ ಸಭೆಗೆ ಕಡಿಮೆ ಜನರು ಹಾಜರಾಗಿದ್ದರು. ಬೆಂಗಳೂರು ಮತ್ತು ಮೈಸೂರಿನ ಪರಿಸರ ಪ್ರೇಮಿಗಳು ಇದರ ವಿರುದ್ಧ ಹೋರಾಟ ಮಾಡುತ್ತೇವೆ' ಎಂದು ಪರಿಸರ ಹೋರಾಟಗಾರ ವಿಜಯ್ ನಿಶಾಂತ್ ಹೇಳಿದ್ದಾರೆ.
'ಅರಣ್ಯ ಇಲಾಖೆ ಕೊನೆ ಕ್ಷಣದಲ್ಲಿ ಜನರಿಗೆ ಈ ಕುರಿತು ಮಾಹಿತಿ ನೀಡಿದೆ. ಸಭೆಯಲ್ಲಿ ಪಾಲ್ಗೊಂಡ ಹಲವು ಜನರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದೆ. ಯಾವುದೇ ಸಿದ್ಧತೆ ಇಲ್ಲದೇ ಜನರ ಜೊತೆ ಕಾಟಚಾರಕ್ಕೆ ಸಭೆ ನಡೆಸಲಾಗಿದೆ' ಎಂದು ಪರಿಸರ ಪ್ರೇಮಿ ತೇಜಸ್ವಿನಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಪರ್ಯಾಯವಾದ ಮಾರ್ಗಗಳ ಬಗ್ಗೆ ಆಲೋಚನೆ ನಡೆಸುತ್ತಿಲ್ಲ. 50 ವರ್ಷ ಹಳೆಯ ಪದ್ಧತಿಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಮೊದಲು ಸರಿಯಾದ ರೀತಿಯಲ್ಲಿ ಸರ್ವೆ ಕಾರ್ಯ ನಡೆಸಲಿ ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಬೆಂಗಳೂರು ಮತ್ತು ಮೈಸೂರಿನ ಪರಿಸರ ಪ್ರೇಮಿಗಳು ಒಂದಾಗಿ ಮರಗಳನ್ನು ಕಡಿಯುವುದನ್ನು ತಡೆಯಲು ಹೋರಾಟ ರೂಪಿಸಲು ಚಿಂತನೆ ನಡೆಸಿದ್ದಾರೆ. ಮೊದಲ ಹಂತವಾಗಿ ಹೋರಾಟಗಾರರು ಪಿಟೀಷನ್ ಸಲ್ಲಿಸುವ ಸಾಧ್ಯತೆ ಇದೆ.