20 ವರ್ಷದ ಯುವತಿಯರಿಗೆ ಅರ್ಥವಾಗಿದ್ದು, ಪ್ರಧಾನಿಗೆ ಅರ್ಥವಾಗಿಲ್ಲ: ರಾಹುಲ್
ಚಾಮರಾಜನಗರ, ಮಾರ್ಚ್ 24: ಪ್ರಧಾನಿ ನರೇಂದ್ರ ಮೋದಿಯವರೇ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ರಿ. ನೋಟ್ ಬ್ಯಾನ್ ಮಾಡಿದ್ರಿ. ಇದರಿಂದ ಏನೂ ಆಗಿಲ್ಲ. ಮೈಸೂರಿನ ಮಹಾರಾಣಿ ಕಾಲೇಜಿನ 20 ವರ್ಷದ ಯುವತಿಯರಿಗೆ ಇದು ಅರ್ಥವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಚಾಮರಾಜನಗರದಲ್ಲಿ ಜನಾಶೀರ್ವಾದ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.
ಚೌಕಿದಾರರಾಗಿ ಏನು ಮಾಡಿದ್ರಿ ಮೋದಿಯವರೇ? ಸಿದ್ದರಾಮಯ್ಯ ಪ್ರಶ್ನೆ
ಭಾಷಣ ಆರಂಭಿಸುವ ಮೊದಲು ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪು, ವಿಶ್ವೇಶ್ವರಯ್ಯರನ್ನ ಸ್ಮರಣೆ ಮಾಡುತ್ತಿದ್ದೇನೆ. ಮತ್ತು ಅವರ ಕೊಡುಗೆಗಳಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು. ಇದೇ ವೇಳೆ ಎಂದಿನಂತೆ ಅವರು ಜಗಜ್ಯೋತಿ ಬಸವಣ್ಣನನ್ನು ನೆನೆದರು.
In Pics: ರಾಣಿ 'ಮಹಾರಾಣಿ'ಯರ ಜತೆ ಸೆಲ್ಫಿ ತೆಗೆಸಿಕೊಂಡ ಕಾಂಗ್ರೆಸ್ ಮಹಾರಾಜ
ನುಡಿದಂತೆ ನಡೆ
ಜಗಗ್ಯೋತಿ ಬಸವಣ್ಣನವರ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯದ ತತ್ವಕ್ಕೂ ನಮ್ಮ ಕಾಂಗ್ರೆಸ್ ಸಿದ್ಧಾಂತಕ್ಕೂ ಹೋಲಿಕೆ ಇದೆ. ನಾವು ಇದೇ ಹಾದಿಯಲ್ಲಿ ನಡೆಯುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ ಬಸವಣ್ಣವರ ತತ್ತ್ವದಂತೆ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
'ನುಡಿದಂತೆ ನಡೆ' ಎಂಬುದು ಬಸವಣ್ಣನವರ ಪ್ರಮುಖ ಮಾತಾಗಿದ್ದು, ನಾವು ಅದೇ ಮಾತಿನಂತೆ ಕೆಲಸ ಮಾಡುತ್ತಿದ್ದೇವೆ. ನುಡಿದಂತೆ ನಡೆ ಎಂದರೆ ಹೇಳಿದ್ದನ್ನು ಮಾಡಿ ತೋರಿಸು ಅಂತ ಅರ್ಥ. ಅದರಂತೆ ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ಮುಂದೆಯೂ ಮಾಡಿ ತೋರಿಸುತ್ತೇವೆ. ಮಾಡದೇ ಇರುವುದನ್ನು ನಾನು ಹೇಳುವುದೇ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಪ್ರಧಾನಿಗೆ ಇನ್ನೂ ಅರ್ಥವಾಗಿಲ್ಲ
ಕೆಲವೇ ಕ್ಷಣದ ಮುಂದೆ ನಾನು ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಗಳ ಜತೆ ಸಂವಾದ ಮುಗಿಸಿ ಬಂದೆ. ಇಲ್ಲಿ ವಿದ್ಯಾರ್ಥಿಯರು ನನಗೆ ನೋಟ್ ಬ್ಯಾನ್, ಉದ್ಯೋಗ ಸೃಷ್ಟಿ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ನೋಟ್ ಬ್ಯಾನ್ ಮಾಡಿದ್ದರಿಂದ ಜನರಿಗೆ ಸಾಕಷ್ಟು ತೊಂದರೆ ಉಂಟಾಯಿತು. 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ್ದರು. ಆದರೆ ಇದರಿಂದ ಏನೂ ಆಗಿಲ್ಲ ಎಂಬುದು 20 ವರ್ಷದ ವಿದ್ಯಾರ್ಥಿನಿಯರಿಗೆ ಅರ್ಥವಾಗಿದೆ. ಪ್ರಧಾನಿ ಮಾತ್ರ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.
15 ಲಕ್ಷದ ಬದಲು 10 ರೂಪಾಯಿಯನ್ನೂ ನಿಮ್ಮ ಖಾತೆಗೆ ಹಾಕಿದ್ದಾರಾ ಎಂದು ನಾನು ಕೇಳುತ್ತಿದ್ದೇನೆ. 10 ಪೈಸೆಯನ್ನೂ ಹಾಕಲಿಲ್ಲ. ಅದರ ಬದಲು 500, 1000 ರೂಪಾಯಿ ನೋಟುಗಳನ್ನು ನಿಷೇಧಿಸಿ ನಿಮ್ಮನ್ನು ಬ್ಯಾಂಕ್ ಮುಂದೆ ಸಾಲು ನಿಲ್ಲುವಂತೆ ಮಾಡಿದರು. ಆದರೆ ಶ್ರೀಮಂತರು ಬ್ಯಾಂಕಿನ ಹಿಂಬದಿಯಿಂದ ಕಪ್ಪು ಹಣವನ್ನು ಬಿಳಿ ಮಾಡಿಕೊಂಡು ತೆರಳಿದರು. ಈ ಸಾಲಿನಲ್ಲಿ ದರೋಡೆಕೋರರು, ಕಪ್ಪು ಹಣ ಹೊಂದಿದವರು, ಶ್ರೀಮಂತರು, ಯಾರಾದರೂ ನಿಂತಿದ್ದರಾ ಎಂದು ಅವರು ಪ್ರಶ್ನಿಸಿದ್ದಾರೆ.
ರೈತರ ಸಾಲಮನ್ನಾಕ್ಕೆ ಹಿಂದೇಟು
ದೇಶದ ರೈತರು ಸಂಕಷ್ಟದಲ್ಲಿದ್ದಾರೆ ರೈತರ ಸಾಲ ಮನ್ನಾ ಮಾಡಿ ಎಂದಾಗ ಪ್ರಧಾನಿ ಅದಕ್ಕೆ ಸಿದ್ದವಿರಲಿಲ್ಲ. ಅದರ ಬದಲು ಉದ್ಯಮಿಗಳ 2.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಅದೇ ನಾನು ಕೇಳಿದ ಕೇವಲ 10 ದಿನಗಳೊಳಗೆ 8 ಸಾವಿರ ಕೋಟಿ ರೂಪಾಯಿ ರೈತರ ಸಾಲವನ್ನು ಸಿದ್ದರಾಮಯ್ಯ ಮನ್ನಾ ಮಾಡಿದರು.
ರಾಜ್ಯ ಸರಕಾರ ಇದೇ ಅವಧಿಯಲ್ಲಿ 2 ಲಕ್ಷ ಕೃಷಿ ಹೊಂಡ ನಿರ್ಮಾಣ, ಕ್ಷೀರಭಾಗ್ಯ, ಅನ್ನಭಾಗ್ಯ, ವಿದ್ಯಾರ್ಥಿನಿಯರಿಗೆ ಸ್ನಾತಕೋತ್ತರದವರೆಗೆ ಉಚಿತ ಶಿಕ್ಷಣ, 5 ಲಕ್ಷ ಉಚಿತ ಸೈಕಲ್ ವಿತರಣೆ ಹೀಗೆ ನಾವು ನಿಮ್ಮ ಹಣವನ್ನು ಪಡೆದುಕೊಂಡು ನಿಮಗೇ ವಾಪಸ್ ನೀಡಿದ್ದೇವೆ ಎಂದು ರಾಹುಲ್ ಗಾಂಧಿ ಬಣ್ಣಿಸಿದರು.
ಮುಂದೆ ಕಾಂಗ್ರಸ್ ಅಧಿಕಾರಕ್ಕೆ ಬಂದಾಗ ಇದಕ್ಕಿಂತ ಹೆಚ್ಚಿನ ಅಭಿವೃದ್ಧಿ ಮಾಡುತ್ತೇವೆ. ಜತೆಗೆ ಕಾಂಗ್ರೆಸ್ ಕಾರ್ಯರ್ತರನ್ನು ನನ್ನ ನಾಯಕತ್ವದಲ್ಲಿ ಗೌರವದಿಂದ ನೋಡಿಕೊಳ್ಳುತ್ತೇನೆ. ಪಕ್ಷಕ್ಕಾಗಿ ತ್ಯಾಗ ಮಾಡುವವರಿಗೆ ನಾನು ರಕ್ಷಣೆ ನೀಡುವ ಭರವಸೆ ನೀಡುತ್ತಿದ್ದೇನೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ಸಂವಿಧಾನ ಬದಲಾಯಿಸಲು ಬಿಡುವುದಿಲ್ಲ
ಇದೀಗ ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ. ಈ ಸಂವಿಧಾನಕ್ಕಾಗಿ ಬಿ.ಆರ್. ಅಂಬೇಡ್ಕರ್, ಕಾಂಗ್ರೆಸ್ ನವರು ಹೋರಾಡಿದ್ದರು. ಇದೀಗ ಇದೇ ಸಂವಿಧಾನ ಬದಲಿಸಲು ಬಿಜೆಪಿಯವರು ಹೊರಟಿದ್ದಾರೆ. ನಿಮಗೆ ಪವಿತ್ರ ಸಂವಿಧಾನ ಬದಲಿಸಲು ನಾವು ಕಾಂಗ್ರೆಸಿಗರು ಬಿಡುವುದಿಲ್ಲ ಎಂದು ರಾಹುಲ್ ಗುಡುಗಿದರು.
ಇದೇ ಜನಾಶೀರ್ವಾದ ಯಾತ್ರೆಯಲ್ಲಿ ರಾಹುಲ್ ಗಾಂಧಿ ಬಿ. ರಾಚಯ್ಯ ಪುತ್ರ, ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು. ನಗರಸಭಾ ಸದಸ್ಯ ಜಂಗಮನಿ ಕೂಡ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದರು.