ದೊಡ್ಡಬಳ್ಳಾಪುರದಲ್ಲಿ 20 ವರ್ಷದ ಯುವತಿ ಮೇಲೆ ಅತ್ಯಾಚಾರ, ಕೊಲೆ
ದೊಡ್ಡಬಳ್ಳಾಪುರ, ಮಾರ್ಚ್ 13 : ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ, ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಆರೋಪಿ ತಲೆಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಪಚ್ಚಾರಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಗೀತಾ (20) ಎಂಬ ಯುವತಿ ಮೇಲೆ ಅದೇ ಗ್ರಾಮದ ಜಯರಾಮ್(30) ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದಾನೆ. ಗೀತಾ ದ್ವಿತೀಯ ಪಿಯುಸಿ ಮುಗಿಸಿದ್ದು ಗೀತಾ ಮನೆಯಲ್ಲಿದ್ದಳು.
ಅತ್ಯಾಚಾರ ಸಂತ್ರಸ್ತರಿಗೆ ಶೀಘ್ರ 'ಗೆಳತಿ' ವಿಶೇಷ ಚಿಕಿತ್ಸಾ ಘಟಕ
ತನ್ನನ್ನು ಪ್ರೀತಿಸುವಂತೆ ಜಯರಾಮ್ ಗೀತಾಳ ಬೆನ್ನು ಬಿದ್ದಿದ್ದ. ಪದೇ-ಪದೇ ಗೀತಾಳ ಮನೆ ಬಳಿಗೆ ಬಂದು ಹೋಗುತ್ತಿದ್ದ. ಜಯರಾಮ್ಗೆ ಮದುವೆ ಆಗಿ ಇಬ್ಬರು ಮಕ್ಕಳು ಇದ್ದಾರೆ. ಗೀತಾ ಮನೆಯವರು ಸಹ ಜಯರಾಮ್ಗೆ ಎರಡು ಬಾರಿ ಎಚ್ಚರಿಕೆ ನೀಡಿದ್ದರು.
ಆರಂಭದಲ್ಲಿ ಗೀತಾ ಜಯರಾಮ್ ಮಾತುಗಳನ್ನು ನಂಬಿರಲಿಲ್ಲ. ನಂತರ ದಿನಗಳಲ್ಲಿ ಆತನ ಬಣ್ಣದ ಮಾತಿಗೆ ಮರುಳಾಗಿದ್ದಾಳೆ. ಶನಿವಾರ ರಾತ್ರಿ ಗೀತಾಳನ್ನು ಯಾರಿಗೂ ತಿಳಿಯದಂತೆ ಜಯರಾಮ್ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ.
ಊರಿನ ಹೊರವಲಯದ ಗುಡಿಸಿಲಿಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ನಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ಇಲ್ಲ, ನಾವಿಬ್ಬರೂ ಸಾಯೋಣ ಎಂದು ಗೀತಾಳಿಗೆ ಮೊದಲು ವಿಷದ ಮಾತ್ರೆ ತಿನ್ನಿಸಿದ್ದಾನೆ.
ಗೀತಾ ಪ್ರಜ್ಞೆ ತಪ್ಪುತ್ತಿದ್ದಂತೆ ಜಯರಾಮ್ ಅಲ್ಲಿಂದ ಪರಾರಿಯಾಗಿದ್ದಾನೆ. ಬೆಳಗ್ಗೆ ಗೀತಾಳನ್ನು ನೋಡಿದ ಜನರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗೀತಾ ಮೃತಪಟ್ಟಿದ್ದಾಳೆ.
ಗೀತಾ ಪೋಷಕರು ಜಯರಾಮ್ ವಿರುದ್ಧ ಅತ್ಯಾಚಾರ ಮತ್ತು ಕೊಲೆ ದೂರು ನೀಡಿದ್ದರು. ಆದರೆ, ಪೊಲೀಸರು ಇದು ಅಸಹಜ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡು ಸುಮ್ಮನಾಗಿದ್ದರು. ಪೋಷಕರು ಕೊಲೆ ಪ್ರಕರಣ ದಾಖಲು ಮಾಡುವ ತನಕ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಜನರ ಮತ್ತು ಪೋಷಕರ ಒತ್ತಾಯಕ್ಕೆ ಮಣಿದ ಪೊಲೀಸರು ಜಯರಾಮ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮಗಳನ್ನು ಶ್ರೀಮಂತ ವರನಿಗೆ ಕೊಟ್ಟು ಮದುವೆ ಮಾಡಬೇಕು ಎಂದು ಕನಸು ಕಂಡಿದ್ದ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.