1998ರ ನೇಮಕಾತಿ ವಿವಾದ; ಯಥಾಸ್ಥಿತಿಗೆ ಕೆಎಟಿ ಆದೇಶ
ಬೆಂಗಳೂರು, ಡಿಸೆಂಬರ್ 03 : 1998ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯ ಪರಿಷ್ಕೃತ ಪಟ್ಟಿಯ ಕುರಿತು ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಸರ್ಕಾರಕ್ಕೆ ಆದೇಶ ನೀಡಿದೆ.
ಕರ್ನಾಟಕ ಲೋಕಸೇವಾ ಆಯೋಗದ 1998ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯ ಪರಿಷ್ಕೃತ ಪಟ್ಟಿ ಪ್ರಕಟವಾಗಿದೆ. ಪರಿಷ್ಕೃತ ಪಟ್ಟಿಯ ಅನ್ವಯ ಹುದ್ದೆ ಕಳೆದುಕೊಳ್ಳಲಿರುವ 36 ಅಧಿಕಾರಿಗಳಲ್ಲಿ 7 ಜನರು ಕೆಎಟಿ ಮೆಟ್ಟಿಲೇರಿದ್ದಾರೆ.
ಕೆಪಿಎಸ್ಸಿ ನೇಮಕಾತಿ ವಿವಾದ; 36 ಅಧಿಕಾರಿಗಳ ಕೆಲಸಕ್ಕೆ ಕತ್ತರಿ!
ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಭಕ್ತವತ್ಸಲ ಅವರಿದ್ದ ಏಕಸದಸ್ಯ ಪೀಠ ಮುಂದಿನ ಎರಡು ವಾರಗಳ ತನಕ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಆದೇ ನೀಡಿತು. ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರ ಮತ್ತು ಕೆಪಿಎಸ್ಸಿಗೆ ಸೂಚಿಸಿತು.
ಕೆಪಿಎಸ್ಸಿ 1998 ನೇಮಕಾತಿ ಅಕ್ರಮ; ಪರಿಷ್ಕೃತ ಪಟ್ಟಿ ಪ್ರಕಟ
ಸಿಬ್ಭಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ 1998ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಕುರಿತು ಅಂತಿಮ ಪರಿಷ್ಕೃತ ಪಟ್ಟಿಯನ್ನು ಹೊರಡಿಸಿತ್ತು. ಇದರ ಅನ್ವಯ 36 ಅಧಿಕಾರಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ 18 ಸಾವಿರ ಉದ್ಯೋಗ ಕಡಿತ
ಕಾನೂನು ಬಾಹಿರ ಕ್ರಮ
ಅರ್ಜಿಯ ವಿಚಾರಣೆ ವೇಳೆ ವಾದ ಮಂಡನೆ ಮಾಡಿದ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಆಯ್ಕೆ ನಡೆಸಿ ಸರ್ಕಾರಕ್ಕೆ ಪಟ್ಟಿ ಕಳಿಸಿಕೊಡುವುದು ಮಾತ್ರ ಕೆಪಿಎಸ್ಸಿಯ ಕಾರ್ಯ ವ್ಯಾಪ್ತಿ. ರೀ-ಡೂ ಮಾಡುವ ಅಧಿಕಾರ ಕೆಪಿಎಸ್ಸಿಗೆ ಇಲ್ಲ. ಈಗಾಗಲೇ 13 ವರ್ಷ ಕೆಲಸ ಮಾಡಿರುವ ಅರ್ಜಿದಾರರನ್ನು ಅಮಾನತು ಮಾಡಿರುವುದು ಕಾನೂನು ಬಾಹಿರ ಎಂದು ವಾದಿಸಿದರು.
ರಾಜ್ಯಪತ್ರದಲ್ಲಿ ಪ್ರಕಟ
ಕರ್ನಾಟಕ ಹೈಕೋರ್ಟ್ ಆದೇಶದಂತೆ ಕರ್ನಾಟಕ ಲೋಕಸೇವಾ ಆಯೋಗ 1998ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಯ 383 ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ರಾಜ್ಯಪತ್ರದಲ್ಲಿ ಇದನ್ನು ಪ್ರಕಟಿಸಿದೆ. ಪರಿಷ್ಕೃತ ಪಟ್ಟಿ ಅನ್ವಯ 36 ಅಧಿಕಾರಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಇವರಲ್ಲಿ 7 ಜನರು ಕೆಎಟಿ ಮೆಟ್ಟಿಲೇರಿದ್ದಾರೆ.
107 ಅಧಿಕಾರಿಗಳ ಹುದ್ದೆ ಬದಲಾವಣೆ
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಇದರ ಅನ್ವಯ ಮೂಲ ಆಯ್ಕೆ ಪಟ್ಟಿಯಲ್ಲಿರುವ 107 ಅಧಿಕಾರಿಗಳ ಹುದ್ದೆಗಳು ಬದಲಾವಣೆಯಾಗಲಿವೆ. ಈ ಅಧಿಕಾರಿಗಳು ಈಗ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಏನಿದು ಕೆಪಿಎಸ್ಸಿ ವಿವಾದ?
ಕರ್ನಾಟಕ ಲೋಕಸೇವಾ ಆಯೋಗ 1998ರ ಫೆಬ್ರವರಿಯಲ್ಲಿ 383 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿತ್ತು. ಆಗಸ್ಟ್ನಲ್ಲಿ ಪ್ರಾಥಮಿಕ ಪರೀಕ್ಷೆ ನಡೆದು 1999ರ ಏಪ್ರಿಲ್ನಲ್ಲಿ ಮುಖ್ಯ ಪರೀಕ್ಷೆ ನಡೆಸಿತ್ತು. 2000ದ ಜನವರಿಯಲ್ಲಿ ಸಂದರ್ಶನ ನಡೆದು 2001ರಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. ಆದರೆ, ಮೌಲ್ಯ ಮಾಪನದಲ್ಲಿ ಅಕ್ರಮ ನಡೆದಿದೆ ಎಂದು ಕೆಲವರು ಕೆಎಟಿ ಮೆಟ್ಟಿಲೇರಿದ್ದರು. ಬಳಿಕ ವಿವಾದ ಸುಪ್ರೀಂಕೋರ್ಟ್ ತನಕ ಹೋಗಿತ್ತು.