Breaking: ಕೃಷ್ಣನಗರಿಯಲ್ಲಿ 73, ಕರ್ನಾಟಕದಲ್ಲಿ 187 ಕೊವಿಡ್-19 ಕೇಸ್!
ಬೆಂಗಳೂರು, ಜೂನ್.01: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಸೋಮವಾರ ಒಂದೇ ದಿನ ರಾಜ್ಯದಲ್ಲಿ 187 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.
Recommended Video
ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಉಡುಪಿ ಮಂದಿಗೆ ಬಿಗ್ ಶಾಕ್ ನೀಡಿದೆ. ಜಿಲ್ಲೆಯೊಂದರಲ್ಲೇ ಬರೋಬ್ಬರಿ 73 ಮಂದಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿರುವುದ ಖಾತ್ರಿಯಾಗಿದೆ.
ಕೊರೊನಾ ಚಕ್ರವ್ಯೂಹದಲ್ಲಿ ಸಿಲುಕಿರುವ ಮುಂಬೈಗೆ ಕೇರಳ ಸಹಾಯಹಸ್ತ
ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 3,408ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮಹಾಮಾರಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದು ರಾಜ್ಯದಲ್ಲಿ ಕೊಡಿವ್-19ಗೆ ಬಲಿಯಾದವರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಕೊವಿಡ್-19ಗೆ 90ರ ವೃದ್ಧ ಸಾವು
ಕೊರೊನಾ ವೈರಸ್ ಮಹಾಮಾರಿಗೆ ಬೆಂಗಳೂರಿನಲ್ಲಿ 90 ವರ್ಷದ ವೃದ್ಧ ಬಲಿಯಾಗಿದ್ದಾರೆ. ರೋಗಿ ಸಂಖ್ಯೆ 419ರ ಜೊತೆಗೆ ದ್ವಿತೀಯ ಸಂಪರ್ಕದಲ್ಲಿದ್ದ ವೃದ್ಧ ಕಳೆದ ಏಪ್ರಿಲ್.24ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ರೋಗಿ ಸಂಖ್ಯೆ 492 ಆಗಿರುವ 90ರ ವೃದ್ಧನು ಮೇ.31ರಂದು ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದ್ದಾರೆ.
ಮಹಾರಾಷ್ಟ್ರದ ನಂಟು ಹೊಂದಿದವರೇ 102 ಮಂದಿ
ಕರ್ನಾಟಕದ ಪಾಲಿಗೆ ಮಹಾರಾಷ್ಟ್ರವು ಕೊರೊನಾ ವೈರಸ್ ಸೋಂಕಿತರನ್ನು ರವಾನಿಸುತ್ತಿರುವ ಫ್ಯಾಕ್ಟರಿಯಂತೆ ಆಗಿ ಬಿಟ್ಟಿದೆ. ಪ್ರತಿನಿತ್ಯ ಪತ್ತೆಯಾಗುವ ಸೋಂಕಿತರಲ್ಲಿ ಬಹುತೇಕರು ಮಹಾರಾಷ್ಟ್ರ ರಾಜ್ಯದಿಂದಲೇ ವಾಪಸ್ ಆದವರಾಗಿದ್ದಾರೆ. ಇಂದು ಪತ್ತೆಯಾಗಿರುವ 187 ಮಂದಿ ಸೋಂಕಿತರ ಪೈಕಿ 102 ಸೋಂಕಿತರಿಗೆ ಮಹಾರಾಷ್ಟ್ರದ ನಂಟು ಇರುವುದು ದೃಢಪಟ್ಟಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಹೊಸ ಪ್ರಕರಣ ಪತ್ತೆ?
ಕರ್ನಾಟಕದಲ್ಲಿ ಸೋಮವಾರ ಒಂದೇ ದಿನ 187 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಉಡುಪಿ - 73, ಬೆಂಗಳೂರು ನಗರ - 28, ಕಲಬುರಗಿ - 24, ಹಾಸನ -16, ಮಂಡ್ಯ - 15, ಶಿವಮೊಗ್ಗ - 9, ಚಿಕ್ಕಬಳ್ಳಾಪುರ - 5, ದಕ್ಷಿಣ ಕನ್ನಡ - 4, ಬಳ್ಳಾರಿ -3, ಧಾರವಾಡ -2, ಬಾಗಲಕೋಟೆ - 2, ಬೀದರ್ - 2, ವಿಜಯಪುರ -1, ಕೋಲಾರ -1, ಹಾವೇರಿ -1, ರಾಮನಗರ - 1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಸೋಮವಾರ ಗುಣಮುಖರಾದ ಸೋಂಕಿತರೆಷ್ಟು ಜನ?
ಇನ್ನು, ರಾಜ್ಯದಲ್ಲಿ 187 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ ಇಂದು ಒಂದೇ ದಿನ 110 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಯಚೂರು - 35, ಯಾದಗಿರಿ - 18, ಬೆಳಗಾವಿ - 16, ಬೀದರ್ -14, ದಕ್ಷಿಣ ಕನ್ನಡ -10, ಬೆಂಗಳೂರು ನಗರ - 6, ಚಿಕ್ಕಮಗಳೂರು - 4, ಶಿವಮೊಗ್ಗ -2, ಕೊಪ್ಪಳ -1, ಚಿಕ್ಕಬಳ್ಳಾಪುರ - 1, ಇತರೆ -3 ಸೋಂಕಿತರು ಬಿಡುಗಡೆಯಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಇದುವರೆಗೂ 1,328 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.