17 ಅನರ್ಹ ಶಾಸಕರ ಅರ್ಜಿ; ಸುಪ್ರೀಂ ತೀರ್ಪಿಗೆ ದಿನಾಂಕ ನಿಗದಿ
ಬೆಂಗಳೂರು, ನವೆಂಬರ್ 10 : ಕರ್ನಾಟಕ 17 ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ. ಇಡೀ ರಾಜ್ಯವೇ ತೀರ್ಪಿಗಾಗಿ ಕುತೂಹಲದಿಂದ ಕಾಯುತ್ತಿದೆ.
ನವೆಂಬರ್ 13ರ ಬುಧವಾರ ಬೆಳಗ್ಗೆ 10.30ಕ್ಕೆ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿ ಸದಸ್ಯ ಪೀಠ ತೀರ್ಪನ್ನು ಪ್ರಕಟಿಸಲಿದೆ. 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಸೋಮವಾರ ಅಧಿಸೂಚನೆ ಪ್ರಕಟವಾಗಲಿದೆ.
15 ಕ್ಷೇತ್ರದ ಉಪ ಚುನಾವಣೆ; ಮತ ಎಣಿಕೆ ದಿನಾಂಕ ನಿಗದಿ
ಅನರ್ಹ ಶಾಸಕರು ಸುಪ್ರೀಂಕೋರ್ಟ್ ತೀರ್ಪಿಗಾಗಿ ಕಾದು ಕುಳಿತಿದ್ದಾರೆ. ಉಪ ಚುನಾವಣೆಯಲ್ಲಿ ಅವರು ಸ್ಪರ್ಧಿಸಬಹುದೋ?, ಇಲ್ಲವೋ? ಎಂಬುದು ತೀರ್ಪಿನ ಮೇಲೆ ನಿಂತಿದೆ. ಆದೇಶ ಪ್ರಕಟವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಲಿವೆ.
ಹುಣಸೂರು ಉಪ ಚುನಾವಣೆ; ಬಿಜೆಪಿಯ ಅಚ್ಚರಿಯ ನಡೆ!
ಸುಪ್ರೀಂಕೋರ್ಟ್ ಆದೇಶ ವಿಳಂಬವಾಗುತ್ತಿದೆ. ನವೆಂಬರ್ 11ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗುತ್ತಿದೆ. ಉಪ ಚುನಾವಣೆಯನ್ನು ಮುಂದೂಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಹೊಸಕೋಟೆ ಉಪ ಚುನಾವಣೆ; ಅಪ್ಪ-ಮಗನ ನಡುವೆ ಜಟಾಪಟಿ!
ಅನರ್ಹಗೊಂಡಿರುವ ಶಾಸಕರು
ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ 14 ಕಾಂಗ್ರೆಸ್, 3 ಜೆಡಿಎಸ್ ಶಾಸಕರನ್ನು ಜುಲೈ ತಿಂಗಳಿನಲ್ಲಿ ಅನರ್ಹಗೊಳಿಸಿ ಆದೇಶ ನೀಡಿದ್ದರು. ಸ್ಪೀಕರ್ ಆದೇಶವನ್ನು ಶಾಸಕರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ವಿಚಾರಣೆ ಪೂರ್ಣಗೊಂಡಿದ್ದು, ಆದೇಶವನ್ನು ಕಾಯ್ದಿರಿಸಲಾಗಿದೆ.
ಯಾವ-ಯಾವ ಶಾಸಕರು?
ಬಿ. ಸಿ. ಪಾಟೀಲ್ (ಹಿರೇಕೆರೂರು), ಎಸ್. ಟಿ. ಸೋಮಶೇಖರ್ (ಯಶವಂತಪುರ), ಬೈರತಿ ಬಸವರಾಜ (ಕೆ. ಆರ್. ಪುರಂ), ರಮೇಶ್ ಜಾರಕಿಹೊಳಿ (ಗೋಕಾಕ್), ಮುನಿರತ್ನ (ರಾಜರಾಜೇಶ್ವರಿ ನಗರ), ಆನಂದ್ ಸಿಂಗ್ (ವಿಜಯನಗರ), ರೋಷನ್ ಬೇಗ್ (ಶಿವಾಜಿ ನಗರ), ಎಚ್. ವಿಶ್ವನಾಥ್ (ಹುಣಸೂರು), ಮಹೇಶ್ ಕುಮಟಳ್ಳಿ (ಅಥಣಿ), ಪ್ರತಾಪ್ ಗೌಡ ಪಾಟೀಲ್ (ಮಸ್ಕಿ), ಡಾ. ಸುಧಾಕರ್ (ಚಿಕ್ಕಬಳ್ಳಾಪುರ), ಶಿವರಾಂ ಹೆಬ್ಬಾರ್ (ಯಲ್ಲಾಪುರ), ಶ್ರೀಮಂತ ಪಾಟೀಲ್ (ಮಸ್ಕಿ), ಎಂಟಿಬಿ ನಾಗರಾಜ್ (ಹೊಸಕೋಟೆ), ಕೆ. ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್), ನಾರಾಯಣ ಗೌಡ (ಕೆ. ಆರ್. ಪೇಟೆ), ಆರ್. ಶಂಕರ್ (ರಾಣೆಬೆನ್ನೂರು) ಅನರ್ಹಗೊಂಡ ಶಾಸಕರು.
ಚುನಾವಣಾ ಕಣಕ್ಕೆ ಇಳಿಯಬಹುದೇ?
ಅನರ್ಹಗೊಂಡ ಶಾಸಕರು 15ನೇ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುವ ತನಕ ಚುನಾವಣಾ ಕಣಕ್ಕಿಳಿಯಬಾರದು ಎಂದು ಸ್ಪೀಕರ್ ಆದೇಶ ನೀಡಿದ್ದಾರೆ. ಸ್ಪೀಕರ್ ಆದೇಶವನ್ನು ಶಾಸಕರು ಪ್ರಶ್ನೆ ಮಾಡಿದ್ದು, ಉಪ ಚುನಾವಣಾ ಕಣಕ್ಕಿಳಿಯಲು ಅವಕಾಶ ಸಿಗುವುದೇ? ಕಾದು ನೋಡಬೇಕಿದೆ.
ಉಪ ಚುನಾವಣೆ ಘೋಷಣೆ
ರಾಜರಾಜೇಶ್ವರಿ ನಗರ, ಮಸ್ಕಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ನವೆಂಬರ್ 11ರ ಸೋಮವಾರ ಅಧಿಸೂಚನೆ ಪ್ರಕಟವಾಗಿದೆ. ಕಾಂಗ್ರೆಸ್ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಿಜೆಪಿ, ಜೆಡಿಎಸ್ ಇನ್ನು ಅಭ್ಯರ್ಥಿ ಅಂತಿಮಗೊಳಿಸಿಲ್ಲ.