ಕರ್ನಾಟಕದಲ್ಲಿ ದಾಖಲೆ ಬರೆದ ಕೊರೊನಾವೈರಸ್; 1694 ಮಂದಿಗೆ ಸೋಂಕು!
ಬೆಂಗಳೂರು, ಜುಲೈ.03: ಕರ್ನಾಟಕದಲ್ಲಿ ಕೊರೊನಾವೈರಸ್ ಮಹಾಮಾರಿಯು ಹೊಸ ದಾಖಲೆ ಬರೆದಿದೆ. ರಾಜ್ಯದಲ್ಲಿ ಹಿಂದೆದೂ ಕಂಡು ಕೇಳರಿಯದ ರೀತಿಯಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು ಪತ್ತೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಕನ್ನಡಿಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
Breaking: ದೇಶದಲ್ಲಿ ಒಂದೇ ದಿನ 20 ಸಾವಿರ ಕೊರೊನಾ ಸೋಂಕಿತರು ಪತ್ತೆ
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ ಬರೋಬ್ಬರಿ 1694 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿರುವುದು ದೃಢಪಟ್ಟಿದೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 19910ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಕೊರೊನಾವೈರಸ್ ಮಹಾಮಾರಿಗೆ ಒಂದೇ ದಿನ 21 ಮಂದಿ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 293ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರವೊಂದರಲ್ಲೇ 994 ಜನರಿಗೆ ಮಹಾಮಾರಿ ವಕ್ಕರಿಸಿರುವುದು ಸಿಲಿಕಾನ್ ಸಿಟಿಯಲ್ಲಿನ ಜನರಲ್ಲಿ ಆಘಾತ ಉಂಟು ಮಾಡಿದೆ. ಶುಕ್ರವಾರ ಬಿಡುಗಡೆಯಾಗಿರುವ ಹೆಲ್ತ್ ಬುಲೆಟಿನ್ ನ ಸಂಪೂರ್ಣ ಚಿತ್ರಣ ಇಲ್ಲಿದೆ.
ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಅಟ್ಟಹಾಸ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಕಳೆದ 24 ಗಂಟೆಗಳಲ್ಲೇ ಬರೋಬ್ಬರಿ 994 ಮಂದಿಗೆ ಮಹಾಮಾರಿ ಅಂಟಿಕೊಂಡಿರುವುದು ದೃಢಪಟ್ಟಿದೆ. ಇದರಿಂದ ನಗರವೊಂದರಲ್ಲೇ ಒಟ್ಟು ಕೊವಿಡ್-19 ಸೋಂಕಿತರ ಸಂಖ್ಯೆಯು 7173ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಮಹಾಮಾರಿಗೆ ಬೆಂಗಳೂರಿನಲ್ಲಿ ನಾಲ್ವರು ಉಸಿರು ಚೆಲ್ಲಿದ್ದು, ಸಿಲಿಕಾನ್ ಸಿಟಿಯಲ್ಲಿ ಇದುವೆರಗೂ ಮಹಾಮಾರಿಗೆ 105 ಮಂದಿ ಬಲಿಯಾಗಿದ್ದಾರೆ.
ಕರ್ನಾಟಕದಲ್ಲಿ ಕೊವಿಡ್-19ನಿಂದ 293 ಜನ ಸಾವು
ಕೊರೊನಾವೈರಸ್ ಅಟ್ಟಹಾಸದಕ್ಕೆ ರಾಜ್ಯದಲ್ಲಿ ಶುಕ್ರವಾರ 21 ಮಂದಿ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 293ಕ್ಕೆ ಏರಿಕೆಯಾಗಿದೆ. ಇಂದು ಬೆಂಗಳೂರು 4, ಚಿಕ್ಕಬಳ್ಳಾಪುರ 3, ಕಲಬುರಗಿ 3, ವಿಜಯಪುರ 2, ಶಿವಮೊಗ್ಗ 2, ಬಳ್ಳಾರಿ 1, ಹಾಸನ 1, ದಾವಣಗೆರೆ 1, ಬೀದರ್ 1, ಬೆಂಗಳೂರು ಗ್ರಾಮಾಂತರ 1, ರಾಯಚೂರು 1 ಸಾವಿನ ಪ್ರಕರಣಗಳು ದಾಖಲಾಗಿದೆ.
ಕರ್ನಾಟಕದಲ್ಲಿ 1694 ಮಂದಿಗೆ ಕೊವಿಡ್-19 ಸೋಂಕು
ರಾಜ್ಯದಲ್ಲಿ ಒಂದೇ ದಿನ 1694 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಜಿಲ್ಲಾವಾರು ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎನ್ನುವುದನ್ನು ನೋಡುವುದಾದರೆ ಬೆಂಗಳೂರು ಒಂದರಲ್ಲೇ 994 ಜನರಿಗೆ ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡ 96, ಬಳ್ಳಾರಿ 96, ಕಲಬುರಗಿ 72, ತುಮಕೂರು 57, ಬೆಂಗಳೂರು ಗ್ರಾಮಾಂತರ 44, ಧಾರವಾಡ 38, ಮೈಸೂರು 35, ಮಂಡ್ಯ 33, ಬೀದರ್ 28, ಚಾಮರಾಜನಗರ 24, ಶಿವಮೊಗ್ಗ 23, ಗದಗ 19, ಉಡುಪು 16, ಕೊಡಗು 16, ಯಾದಗಿರಿ 14, ಹಾಸನ 13, ಬೆಳಗಾವಿ 13, ಕೋಲಾರ 11, ರಾಮನಗರ 10, ಬಾಗಲಕೋಟೆ 8, ರಾಯಚೂರು 7, ದಾವಣಗೆರೆ 5, ಉತ್ತರ ಕನ್ನಡ 5, ವಿಜಯಪುರ 4, ಕೊಪ್ಪಳ 4, ಚಿಕ್ಕಬಳ್ಳಾಪುರ 3, ಚಿತ್ರದುರ್ಗ 3, ಹಾವೇರಿ 1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ 8805 ಕೊವಿಡ್-19 ಸೋಂಕಿತರು ಗುಣಮುಖ
ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬರುತ್ತಿದೆ. ಇದರ ಜೊತೆಗೆ ಗುಣಮುಖ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡು ಬಂದಿರುವುದು ಸಮಾಧಾನ ತಂದಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 471 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಪೈಕಿ ಬೆಂಗಳೂರು 197, ದಕ್ಷಿಣ ಕನ್ನಡ 51, ಬಳ್ಳಾರಿ 28, ವಿಜಯಪುರ 28, ಕೊಪ್ಪಳ 26, ಧಾರವಾಡ 20, ಮೈಸೂರು 20, ಯಾದಗಿರಿ 17, ಕಲಬುರಗಿ 17, ಉಡುಪಿ 14, ದಾವಣಗೆರೆ 13, ಗದಗ 12, ಹಾಸನ 9, ಉತ್ತರ ಕನ್ನಡ 8, ಕೋಲಾರ 5, ಹಾವೇರಿ 2, ಚಿಕ್ಕಬಳ್ಳಾಪು 2, ಮಂಡ್ಯ 2 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ.