ಮುಂಗಾರಿನ ಆರ್ಭಟಕ್ಕೆ ರಾಜ್ಯದಲ್ಲಿ ಬಲಿಯಾಗಿದ್ದು 155 ಜನ
Recommended Video
ಬೆಂಗಳೂರು, ಆಗಸ್ಟ್ 20: ಪ್ರತಿಬಾರಿ ಕಣ್ಣಾಮುಚ್ಚಾಲೆಯಾಡುತ್ತಿದ್ದ ಮುಂಗಾರು ಮಳೆ, ಈ ಬಾರಿ ರಾಜ್ಯದ ಅನೇಕ ಕಡೆ ಅಬ್ಬರಿಸಿದೆ. ಮಲೆನಾಡು ಪ್ರದೇಶಗಳಲ್ಲಿ ವಿಪರೀತ ಮಳೆಯಿಂದ ಜನರು ಕಂಗಾಲಾಗಿದ್ದಾರೆ. ಏಪ್ರಿಲ್ನಿಂದ ಇದುವರೆಗೂ ಮಳೆಯ ಆರ್ಭಟಕ್ಕೆ ಜೀವ ಕಳೆದುಕೊಂಡವರ ಸಂಖ್ಯೆ 155.
ಪ್ರವಾಹದಿಂದ ತತ್ತರಿಸಿರುವ ಕೊಡಗು ಈ ವರ್ಷದ ಅತಿ ಹೆಚ್ಚು ಹಾನಿಗೆ ಒಳಗಾದ ಪ್ರದೇಶವಾದರೂ, ಮಳೆಗೆ ಬಲಿಯಾದವರ ಸಂಖ್ಯೆ ಹೆಚ್ಚು ಇರುವುದು ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ. ಈ ಎರಡೂ ಜಿಲ್ಲೆಗಳಲ್ಲಿ ತಲಾ 11 ಮಂದಿ ಮಳೆ ಸಂಬಂಧಿ ಕಾರಣಗಳಿಂದ ಮೃತಪಟ್ಟಿದ್ದಾರೆ.
ಕೊಡಗಿನಲ್ಲಿ ಸೋಮವಾರ ಮಧ್ಯಾಹ್ನದವರೆಗೂ ಏಳು ಮಂದಿ ಮೃತಪಟ್ಟಿರುವುದು ವರದಿಯಾಗಿದೆ.
ಕೊಡಗಿನಲ್ಲಿ ಮಳೆ ಆರ್ಭಟಕ್ಕೆ ಗುಡ್ಡಗಳು, ಮನೆಗಳು ಕುಸಿದು ಭಾರಿ ಪ್ರಮಾಣದ ಅನಾಹುತಗಳು ಸಂಭವಿಸಿವೆ. ಇವುಗಳ ನಡುವೆಯೂ ದೊಡ್ಡ ಪ್ರಮಾಣದ ಜೀವಹಾನಿ ಸಂಭವಿಸಿಲ್ಲ ಎನ್ನುವುದು ನೆಮ್ಮದಿಯ ಸಂಗತಿ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ರಾಜ್ಯದಲ್ಲಿ ಹೆಚ್ಚಿನ ಸಾವುಗಳು ಸಿಡಿಲಿನ ಹೊಡೆತದಿಂದ ಸಂಭವಿಸಿವೆ. ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇದುವರೆಗೂ 103 ಮಂದಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ. 37 ಸಾವುಗಳು ಮನೆ ಮೇಲೆ ಮರಗಳು ಬಿದ್ದು ಸಂಭವಿಸಿವೆ. ಇನ್ನು 9 ಸಾವುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರಿಂದ ಉಂಟಾಗಿದೆ ಎಂದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಲ್ಲಿ ಸುರಿದ ಮಳೆಯಿಂದ ಅತಿ ಹೆಚ್ಚು ಪ್ರಮಾಣದ ಆಸ್ತಿಪಾಸ್ತಿ ಹಾನಿ ಉಂಟಾಗಿದೆ. 1550 ಮನೆಗಳು ಹಾನಿಗೊಳಗಾಗಿದ್ದರೆ, ಕೊಪ್ಪಳದಲ್ಲಿ 1239, ಬೆಳಗಾವಿಯಲ್ಲಿ 1245 ಮತ್ತು ರಾಯಚೂರಿನಲ್ಲಿ 1121 ಮನೆಗಳು ಹಾನಿಗೊಳಗಾಗಿವೆ.
ಕೊಡಗು ಜಿಲ್ಲೆಯಲ್ಲಿ ಸೋಮವಾರದವರೆಗೂ 845 ಮನೆಗಳು ಧ್ವಂಸವಾಗಿರುವ ವರದಿ ಬಂದಿದ್ದು, ಸಂಪೂರ್ಣ ವಿವರ ಲಭ್ಯವಾಗಬೇಕಿದೆ. ಏಪ್ರಿಲ್ನಿಂದ ಒಟ್ಟಾರೆ 11,738 ಮನೆಗಳು ಹಾನಿಗೊಳಗಾಗಿವೆ.
ರಾಜ್ಯ ವಿಪತ್ತು ನಿರ್ವಹಣ ಪರಿಹಾರ ನಿಧಿ ಅಡಿಯಲ್ಲಿ ಎಲ್ಲ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಒಟ್ಟು 237.55 ಕೋಟಿ ರೂ. ಹಣವಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಪ್ರತಿ ಜಿಲ್ಲೆಗೂ 5-14 ಕೋಟಿ ರೂ ಬಿಡುಗಡೆ ಮಾಡಲಾಗಿದ್ದು, ಕೊಡಗು ಜಿಲ್ಲೆಯಲ್ಲಿನ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ 30 ಕೋಟಿ ಒದಗಿಸಲಾಗಿದೆ.