ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ; ಯಾರು, ಏನು ಹೇಳಿದರು?
ಬೆಂಗಳೂರು, ಡಿಸೆಂಬರ್ 9 : 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರಕ್ಕೆ ದೊಡ್ಡ ಗೆಲುವು ಸಿಕ್ಕಿದೆ. 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಅನರ್ಹ ಶಾಸಕರ ಪರವಾಗಿ ಜನರು ಮತದಾನ ಮಾಡಿದ್ದಾರೆ.
ಸೋಮವಾರ 15 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮುಖಭಂಗವಾಗಿದೆ. ಕಾಂಗ್ರೆಸ್ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದು, ಜೆಡಿಎಸ್ ಕಣಕ್ಕಿಳಿದಿದ್ದ ಎಲ್ಲಾ 12 ಕ್ಷೇತ್ರಗಳಲ್ಲಿಯೂ ಸೋಲು ಅನುಭವಿಸಲಿದೆ.
ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ಗೆ ಮುಖಭಂಗ
ಉಪ ಚುನಾವಣೆಯಲ್ಲಿ ಬಿಜೆಪಿ 7 ಸ್ಥಾನಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇತ್ತು. 12 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದು, ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಸ್ಪಷ್ಟ ಬಹುಮತವನ್ನು ಪಡೆದಿದೆ.
ಮತ್ತೆ ಬಿಜೆಪಿ ವಶವಾದ ವಿಜಯನಗರ ಕ್ಷೇತ್ರ
ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಮತ್ತು ಮಂಡ್ಯದ ಕೆ. ಆರ್. ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯ ಎಚ್. ವಿಶ್ವನಾಥ್ ಸೋಲು ಕಂಡಿದ್ದಾರೆ, ಕ್ಷೇತ್ರ ಕಾಂಗ್ರೆಸ್ ವಶವಾಗಿದೆ. ಉಪ ಚುನಾವಣೆ ಫಲಿತಾಂಶದ ಬಗ್ಗೆ ಯಾರು, ಏನು ಹೇಳಿದರು?...
ಉಪ ಚುನಾವಣೆ; ಯಶವಂತಪುರದಲ್ಲಿ ಸೋಮಶೇಖರ್ ಮುನ್ನಡೆ
ನರೇಂದ್ರ ಮೋದಿ ಹೇಳಿಕೆ
ಜಾರ್ಖಂಡ್ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಉಪ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದರು. "ಕಾಂಗ್ರೆಸ್-ಜೆಡಿಎಸ್ ಮೇಲೆ ವಿಶ್ವಾಸವಿಡುವುದಿಲ್ಲ ಎಂದು ಕರ್ನಾಟಕದ ಜನರು ಸಾಬೀತು ಮಾಡಿದ್ದಾರೆ. ಕರ್ನಾಟಕದ ಜನರು ಒಂದು ಸ್ಥಿರ ಮತ್ತು ಸದೃಢ ಸರ್ಕಾರಕ್ಕೆ ತಾಕತ್ ನೀಡಿದ್ದಾರೆ" ಎಂದು ಹೇಳಿದ್ದಾರೆ.
|
ಧನ್ಯವಾದ ಸಲ್ಲಿಸಿದ ಯಡಿಯೂರಪ್ಪ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ ಜನರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 15 ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿದೆ.
ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು
ಕಂದಾಯ ಸಚಿವ ಆರ್. ಅಶೋಕ ಉಪ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದರು. "ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೋದ ಬಂದಲ್ಲಿ ಬಿಜೆಪಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳುತ್ತಿದ್ದರು. ಜನರು ಸರ್ಕಾರ ಸುಭದ್ರವಾಗಿರಬೇಕು ಎಂದು ಆಶೀರ್ವಾದ ಮಾಡಿದ್ದಾರೆ. ನೈತಿಕತೆ ಇದ್ದರೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು" ಎಂದು ಹೇಳಿದರು.
ಕೆ. ಎಸ್. ಈಶ್ವರಪ್ಪ ಟ್ವೀಟ್
ಉಪ ಚುನಾವಣೆ ಫಲಿತಾಂಶದ ಬಗ್ಗೆ ಸಚಿವ ಕೆ. ಎಸ್. ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ. "ಸ್ವಾಮಿ @siddaramaiah ನವರೇ, ಈಗ ಹೇಳಿ ಯಾರು ಅರ್ಹರು ಮತ್ತು ಯಾರು ಅನರ್ಹರು? ಸಮೀಕ್ಷೆಗಳನ್ನು ನಂಬಬೇಡಿ, ಕೊನೆಯ ಪಕ್ಷ ಚುನಾವಣೆಯಲ್ಲಿ ಜನರು ನೀಡಿದ ಫಲಿತಾಂಶವನ್ನು ಒಪ್ಪಿಕೊಳ್ಳಿ. ಕಾಂಗ್ರೆಸ್ ಮುಕ್ತ ಮಾಡಲು ನೀವು ಮತ್ತು ನಿಮ್ಮ ಮಾಜಿ ರಾಷ್ಟ್ರೀಯ ಅಧ್ಯಕ್ಷರೇ ಸಾಕು ಸ್ವಾಮಿ" ಎಂದು ಹೇಳಿದ್ದಾರೆ.
ಅಭಿವೃದ್ಧಿಗೆ ಬದ್ಧರಾಗಿದ್ದೇವೆ
ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಕೆ. ಆರ್. ಪೇಟೆಯಲ್ಲಿ ಬಿಜೆಪಿಯ ನಾರಾಯಣ ಗೌಡ ಗೆಲುವಿನ ಬಗ್ಗೆ ಮಾತನಾಡಿದ್ದು, "ಕ್ಷೇತ್ರದ ಮತದಾರರು ಪಕ್ಷಾತೀತವಾಗಿ, ಜಾತ್ಯತೀತವಾಗಿ ನಾರಾಯಣ ಗೌಡರನ್ನು ಬೆಂಬಲಿಸಿದ್ದಾರೆ. ನಮಗೆ ಸಂತೋಷವಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧರಾಗಿದ್ದೇವೆ" ಎಂದು ಹೇಳಿದರು.
ಮತದಾರರ ದೃಷ್ಟಿಯಲ್ಲಿ ಇಲಿಯಾ
ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಉಪ ಚುನಾವಣೆ ಪ್ರಚಾರದ ವೇಳೆ 'ಹೌದು ಹುಲಿಯಾ' ಎಂಬ ಡೈಲಾಗ್ ವೈರಲ್ ಆಗಿತ್ತು. ಇದನ್ನೇ ಬಳಸಿಕೊಂಡು ಸಿ. ಟಿ. ರವಿ ಟ್ವೀಟ್ ಮಾಡಿದ್ದಾರೆ.
ಎರಡೂ ಪಕ್ಷಗಳು ಅನರ್ಹಗೊಂಡಿವೆ
ಕೇಂದ್ರ ಸಚಿವ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ. ವಿ. ಸದಾನಂದ ಗೌಡ ಟ್ವೀಟ್ ಮಾಡಿದ್ದು, "ಕಾಂಗ್ರೆಸ್ & ಜೆಡಿಎಸ್ ಪಕ್ಷದವರು ನಮ್ಮ ಅಭ್ಯರ್ಥಿಗಳನ್ನು "ಅನರ್ಹರು ಅನರ್ಹರು" ಎಂದು ಚುನಾವಣಾ ಪ್ರಚಾರದುದ್ದಕ್ಕೂ ಹಂಗಿಸಿದರು. ಆದರೆ ಇದನ್ನು ಒಪ್ಪದ ಕರ್ನಾಟಕದ ಜನ ಈ ಎರಡೂ ಕೌಟುಂಬಿಕ ಪಕ್ಷಗಳನ್ನೇ "ಅನರ್ಹ"ಗೊಳಿಸಿದ್ದಾರೆ. ರಾಜಕೀಯ ಪ್ರೌಢಿಮೆ ತೋರಿದ ರಾಜ್ಯದ ಮತದಾರ ಅಭಿನಂದನಾರ್ಹ" ಎಂದು ಹೇಳಿದ್ದಾರೆ.