15 ಕ್ಷೇತ್ರದ ಉಪ ಚುನಾವಣೆ ಚಿತ್ರಣ ಬದಲಿಸಿದ ತೀರ್ಪು; 5 ಅಂಶಗಳು
ಬೆಂಗಳೂರು, ನವೆಂಬರ್ 13 : ಕರ್ನಾಟಕ ಕಾಯುತ್ತಿದ್ದ ಬಹು ನಿರೀಕ್ಷಿತ ತೀರ್ಪು ಪ್ರಕಟವಾಗಿದೆ. ಕಾಂಗ್ರೆಸ್ನ 14, ಜೆಡಿಎಸ್ನ 3 ಶಾಸಕರು ಅಧಿಕೃತವಾಗಿ ಅನರ್ಹರಾಗಿದ್ದಾರೆ. ವಿಧಾನಸಭೆ ಸ್ಪೀಕರ್ ಆದೇಶ ಎತ್ತಿ ಹಿಡಿದಿರುವ ನ್ಯಾಯಾಲಯ ಗಾಯದ ಮೇಲೆ ಬರೆ ಎಳೆದಿಲ್ಲ, ಶಾಸಕರು ಚುನಾವಣಾ ಕಣಕ್ಕಿಳಿಯಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ.
ಬುಧವಾರ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿ ಸದಸ್ಯ ಪೀಠ ನೀಡಿದ ತೀರ್ಪು 2019ರ ಜುಲೈ ತಿಂಗಳಿನಲ್ಲಿ ಕರ್ನಾಟಕದಲ್ಲಿ ನಡೆದಿದ್ದ ರಾಜಕೀಯ ಹೈಡ್ರಾಮಕ್ಕೆ ತೆರೆ ಎಳೆದಿದೆ. ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
Karnataka MLAs Disqualification Case Verdict Live Updates : ಅನರ್ಹತೆ ಎತ್ತಿಹಿಡಿದ ಸುಪ್ರೀಂಕೋರ್ಟ್
ಸಂಸದೀಯ ವ್ಯವಸ್ಥೆ ಮತ್ತು ಆಡಳಿತ, ವಿಪಕ್ಷದ ಪಾತ್ರದ ಬಗ್ಗೆ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿರುವ ಸುಪ್ರೀಂಕೋರ್ಟ್, ಶಾಸಕರು ಚುನಾವಣಾ ಕಣಕ್ಕಿಳಿಯದಂತೆ ಸಮಯದ ನಿರ್ಬಂಧ ವಿಧಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ಗೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ ಬುಧವಾರ ನೀಡಿದ ತೀರ್ಪು ಕರ್ನಾಟಕದ 15 ವಿಧಾನಸಭಾ ಕ್ಷೇತ್ರದ ಚುನಾವಣಾ ಚಿತ್ರಣವನ್ನು ಬದಲಾವಣೆ ಮಾಡಿದೆ. 17 ಅನರ್ಹ ಶಾಸಕರು ಇರುವ ಕ್ಷೇತ್ರಗಳ ಪೈಕಿ ರಾಜರಾಜೇಶ್ವರಿ ನಗರ, ಮಸ್ಕಿ ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಚುನಾವಣೆ ನಡೆಯಲಿದೆ.
ಚುನಾವಣಾ ಕಣಕ್ಕಿಳಿಯಲು ಅವಕಾಶ
ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿ ಸದಸ್ಯ ಪೀಠ ನೀಡಿದ ತೀರ್ಪಿನ ಬಳಿಕ ಶಾಸಕರು ಚುನಾವಣಾ ಕಣಕ್ಕೆ ಇಳಿಯಬಹುದು. ಆದ್ದರಿಂದ, ಡಿಸೆಂಬರ್ 5ರಂದು ನಡೆಯುವ ಉಪ ಚುನಾವಣೆಗೆ ಅವರು ಸ್ಫರ್ಧಿಸಬಹುದು. ಇದರಿಂದಾಗಿ ಬೇರೆ ಅಭ್ಯರ್ಥಿಗಳ ಹುಡುಕಾಟದ ಪ್ರಯತ್ನಕ್ಕೆ ತೆರೆ ಬಿದ್ದಿದೆ.
ಬಿಜೆಪಿ ಚಿನ್ಹೆಯಡಿ ಚುನಾವಣೆಗೆ
2018ರ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಚಿನ್ಹೆಯಡಿ ಗೆಲುವು ಸಾಧಿಸಿದ್ದ ಶಾಸಕರು ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಇದು ಅನರ್ಹ ಶಾಸಕರಿಗೆ ಗೆಲುವು, ಆದರೆ ಬಿಜೆಪಿಯವರಿಗೆ ಟಿಕೆಟ್ ಹಂಚಿಕೆ ಕಗ್ಗಂಟು ಆಗಲಿದೆ.
ಸಚಿವರಾಗಲು ಅವಕಾಶವಿಲ್ಲ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹೊಸ ಸರ್ಕಾರದಲ್ಲಿ ಸಚಿವರಾಗುತ್ತೇವೆ ಎಂಬ ಶಾಸಕರ ಆಸೆಗೆ ತಣ್ಣೀರು ಸುರಿಯಲಾಗಿದೆ. ಶಾಸಕರು ಚುನಾವಣಾ ಕಣಕ್ಕಿಳಿಯಲು ಅವಕಾಶ ನೀಡಿದರೂ ಅವರು ಸದ್ಯಕ್ಕೆ ಸಚಿವರಾಗಲು ನ್ಯಾಯಾಲಯ ಒಪ್ಪಿಗೆ ಕೊಟ್ಟಿಲ್ಲ. ಉಪ ಚುನಾವಣೆಯಲ್ಲಿ ಅವರು ಗೆದ್ದರೆ ಮಾತ್ರ ಸಚಿವರಾಗಬಹುದು. ಆದ್ದರಿಂದ ಸಂಪುಟ ಸೇರಬೇಕಾದರೆ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಸ್ಪೀಕರ್ ವಿರುದ್ಧ ಗೆದ್ದ ಶಾಸಕರು
ಎಲ್ಲಾ ಅನರ್ಹ ಶಾಸಕರ ಮನವಿ ಒಂದೇ ಆಗಿತ್ತು. ರಾಜೀನಾಮೆ ನೀಡಿದ ನಾವು ಉಪ ಚುನಾವಣೆ ಕಣಕ್ಕಿಳಿಯಲು ಅವಕಾಶ ನೀಡಬೇಕು ಎಂಬುದು. 15ನೇ ವಿಧಾನಸಭೆ ಅವಧಿ ಮುಗಿಯುವ ತನಕ ಅಂದರೆ 2023ರ ತನಕ ಚುನಾವಣೆ ಕಣಕ್ಕಿಳಿಯಬಾರದು ಎಂದು ನಿರ್ಬಂಧ ಹೇರಿದ್ದರು. ಈಗ ಚುನಾವಣಾ ಕಣಕ್ಕಿಳಿಯಲು ಅವಕಾಶ ಸಿಕ್ಕಿರುವುದು ಸ್ಪೀಕರ್ ವಿರುದ್ಧ ಶಾಸಕರ ಗೆಲುವಾಗಿದೆ.
ಚುನಾವಣಾ ತಂತ್ರವೇ ಬದಲು
ಅನರ್ಹ ಶಾಸಕರು ಚುನಾವಣೆ ಕಣಕ್ಕಿಳಿಯುವುದರಿಂದ ಮೂರು ಪಕ್ಷಗಳ ಚುನಾವಣಾ ತಂತ್ರಗಳೇ ಬದಲಾಗಲಿವೆ. ಈಗಾಗಲೇ ಅನರ್ಹರನ್ನು ಸೋಲಿಸಲೇಬೇಕು ಎಂದು ಕಾಂಗ್ರೆಸ್ ಬಿರುಸಿನ ತಯಾರಿ ಕೈಗೊಂಡಿತ್ತು. ಕಳೆದ ಚುನಾವಣೆಯಲ್ಲಿ ಗೆದ್ದ 14 ಸ್ಥಾನವನ್ನು ಕಾಂಗ್ರೆಸ್, 2 ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ತೀವ್ರ ಪೈಪೋಟಿ ಎದುರಿಸುವ ಸಾಧ್ಯತೆ ಇದೆ.