ಬ್ರೇಕಿಂಗ್: ರಾಜ್ಯದಲ್ಲಿ ಕೊವಿಡ್-19ಗೆ ಒಬ್ಬ ಬಲಿ, 141 ಮಂದಿಗೆ ಸೋಂಕು
ಬೆಂಗಳೂರು, ಮೇ.30: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಅಟ್ಟಹಾಸ ತೋರಿದೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು ಮತ್ತೊಮ್ಮೆ ಶತಕದ ಗಡಿ ದಾಟಿದ್ದು, ಒಂದೇ ದಿನ 141 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.
ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಬೆಂಗಳೂರಿನ ಮಂದಿಗೆ ಬಿಗ್ ಶಾಕ್ ನೀಡಿದೆ. ಬೆಂಗಳೂರು ನಗರ ಒಂದರಲ್ಲೇ ಬರೋಬ್ಬರಿ 33 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.
ಕರ್ನಾಟಕದಲ್ಲಿ ದಿನಕ್ಕೆ 2 ಬಾರಿ ಬಿಡುಗಡೆಯಾಗಲ್ಲ ಕೊವಿಡ್-19 ಬುಲೆಟಿನ್!
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 2,922ಕ್ಕೆ ಏರಿಕೆಯಾಗಿದೆ. ಬೀದರ್ ನಲ್ಲಿ ಮಹಾಮಾರಿಗೆ ಮತ್ತೊಬ್ಬರು ಬಲಿಯಾಗಿದ್ದು ರಾಜ್ಯದಲ್ಲಿ ಸಾವಿನ ಸಂಖ್ಯೆಯು 49ಕ್ಕೆ ಏರಿಕೆಯಾಗಿದೆ.
91 ಸೋಂಕಿತರಿಗೆ ಮಹಾರಾಷ್ಟ್ರ ನಂಟು
ಮಹಾರಾಷ್ಟ್ರವು ಕರ್ನಾಟಕವನ್ನು ಬಿಟ್ಟು ಬಿಡದೇ ಕಾಡುತ್ತಿದೆ. ರಾಜ್ಯದಲ್ಲಿ ಇಂದು ಪತ್ತೆಯಾಗಿರುವ ಒಟ್ಟು 141 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಪೈಕಿ 91 ಮಂದಿಗೆ ಮಹಾರಾಷ್ಟ್ರದ ನಂಟು ಇರುವುದು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ವಾಪಸ್ಸಾದ 91 ಮಂದಿಗೆ ಕೊವಿಡ್-19 ಸೋಂಕು ಪತ್ತೆಯಾಗಿದೆ.
ಬೀದರ್ ನಲ್ಲಿ ಕೊವಿಡ್-19ಗೆ ಮಹಿಳೆ ಬಲಿ
ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಬೀದರ್ ನಲ್ಲಿ ರೋಗಿ ಸಂಖ್ಯೆ 2,783 ಆಗಿರುವ 47 ವರ್ಷದ ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಪ್ರಾಣ ಬಿಟ್ಟಿದ್ದಾರೆ. 8 ವರ್ಷಗಳ ಹಿಂದೆಯೇ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಮಹಿಳೆ ಹೈಪರ್ ಟೆನ್ಷನ್ ಹಾಗೂ ಕನ್ವಲ್ ಷನ್ಸ್ ಹಿನ್ನೆಲಯನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಮೇ.24ರಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಮೇ.28ರಂದು ನಿಗದಿತ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.
ರಾಜ್ಯದಲ್ಲಿ ಜಿಲ್ಲಾವಾರು ಕೊವಿಡ್-19 ಸೋಂಕಿತರ ಸಂಖ್ಯೆ
ಬೆಂಗಳೂರು - 33, ಯಾದಗಿರಿ - 18, ದಕ್ಷಿಣ ಕನ್ನಡ - 14, ಉಡುಪಿ - 13, ಹಾಸನ - 14, ವಿಜಯಪುರ - 11, ಬೀದರ್ -10, ಶಿವಮೊಗ್ಗ -6, ದಾವಣಗೆರೆ - 4, ಹಾವೇರಿ -4, ಕೋಲಾರ - 3, ಉತ್ತರ ಕನ್ನಡ -2, ಮೈಸೂರು - 2, ಧಾರವಾಡ - 2, ಕಲಬುರಗಿ - 2, ಬೆಂಗಳೂರು ಗ್ರಾಮಾಂತರ - 1, ತುಮಕೂರು - 1, ಚಿತ್ರದುರ್ಗ -1, ಬೆಳಗಾವಿ -1,
ರಾಜ್ಯದಲ್ಲಿ 103 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್
ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಷ್ಟೇ ಶತಕದ ಗಡಿ ದಾಟಿಲ್ಲ. ಬದಲಿಗೆ ಖುಷಿಯ ವಿಚಾರ ಎಂದರೆ ಶನಿವಾರ ಒಂದೇ ದಿನ ರಾಜ್ಯಾದ್ಯಂತ 103 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಲಬುರಗಿ - 43, ಬೆಂಗಳೂರು ನಗರ - 21, ದಾವಣಗೆರೆ - 20, ಕೋಲಾರ - 5, ಬಾಗಲಕೋಟಿ - 3, ಬೀದರ್ - 3, ರಾಯಚೂರು - 2, ದಕ್ಷಿಣ ಕನ್ನಡ - 2, ಉಡುಪಿ - 1, ಚಿಕ್ಕಬಳ್ಳಾಪುರ -1, ವಿಜಯಪುರ - 1, ಗದಗ - 1 ಒಬ್ಬರು ಗುಣಮುಖರಾಗಿದ್ದಾರೆ.