ಜನಸೇವೆಗೆ ಕಂಕಣಬದ್ಧವಾದ 108 ಆರೋಗ್ಯ ಕವಚ ವಾಹನ
ಗದಗ,ಮಾರ್ಚ್,16: ಕೆಲವು ದಿನಗಳ ಹಿಂದೆ 108 ಆಂಬ್ಯುಲೆನ್ಸ್ ಕಾರ್ಯಕರ್ತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಕೈಗೊಂಡಿದ್ದರು. ಆದರೂ ಅವರು ತಮ್ಮ ಕರ್ತವ್ಯವನ್ನು ಮರೆತಿಲ್ಲ. ಜನರ ಸೇವೆಗೆ ನಾವು ಸದಾ ಸಿದ್ಧ ಎಂದು ತೋರಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇಲ್ಲಿದೆ ಅವರ ಸೇವಾ ನಿಷ್ಠೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಒಂದೇ ತಿಂಗಳಲ್ಲಿ 108 ಆರೋಗ್ಯ ಕವಚ ವಾಹನದಲ್ಲಿ 14 ಗರ್ಭಿಣಿಯರು ತಮ್ಮ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲಿಯೇ ಮಕ್ಕಳ ಜನನವಾಗಿದ್ದು, ಸಿಬ್ಬಂದಿಗಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ತಮ್ಮ ಕಾರ್ಯ ನಿರ್ವಹಿಸಿದ್ದಾರೆ.[ಬೇಸತ್ತ 108 ನೌಕರರಿಂದ ಸಾಮೂಹಿಕ ವಿಷ ಸೇವನೆ ಬೆದರಿಕೆ]
108 ಆರೋಗ್ಯ ಕವಚದ ಸಿಬ್ಬಂದಿಗಳು ಎಲ್ಲರಿಗೂ ಸುರಕ್ಷಿತ ಹೆರಿಗೆಯಾಗಿದ್ದು, ನರಗುಂದದ 108 ವಾಹನದಲ್ಲಿ ಆರೋಗ್ಯ ಸಹಾಯಕಿಯರಾದ ಭಾರತಿ ವಾಯ್. ಪಾಟೀಲ ಮತ್ತು ವಾಹನ ಚಾಲಕ ಮೌಲಾ ಪಿ. ಠಾಣೆದ ಇವರುಗಳು ಸಮಯೋಚಿತ ಪ್ರಜ್ಞೆಯೇ ತಾಯಿ ಹಾಗೂ ಮಗುವಿನ ಸುರಕ್ಷತೆಗೆ ಕಾರಣ ಎಂದು ಜಿವಿಕೆ 108 ಸಂಸ್ಥೆಯ ಗದಗ ಜಿಲ್ಲಾ ಮ್ಯಾನೇಜರ್ ಆದರ್ಶ ದೇಸಾಯಿ ಹೇಳಿದ್ದಾರೆ.[ಆಂಬ್ಯುಲೆನ್ಸ್ ಓವರ್ ಟೇಕ್ ಮಾಡಿದರೆ ಲೈಸೆನ್ಸ್ ರದ್ದು]
ಈ 108 ಸಿಬ್ಬಂದಿಯ ಸಾಹಸ ಮತ್ತು ಸಾಧನೆಗೆ ಕುಟುಂಬ ಕಲ್ಯಾಣ ಇಲಾಖೆಯವರಿಂದ ಮತ್ತು ನರಗುಂದ ತಾಲೂಕೂ ಹಾಗೂ ಗದಗ ಜಿಲ್ಲೆಯ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ದೇಸಾಯಿ ತಿಳಿಸಿದ್ದಾರೆ.