ಪ್ರವಾಹದಿಂದ ಬೆಳೆ ನಷ್ಟ; ರೈತರಿಗೆ 10 ಸಾವಿರ ಹೆಚ್ಚುವರಿ ಪರಿಹಾರ
ಬೆಂಗಳೂರು, ಅಕ್ಟೋಬರ್ 13 : ಪ್ರವಾಹದಿಂದ ಬೆಳೆ ನಷ್ಟಗೊಂಡವರಿಗೆ ಕರ್ನಾಟಕ ಸರ್ಕಾರದಿಂದ ಹೆಚ್ಚುವರಿಯಾಗಿ 10 ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಕುರಿತು ಘೋಷಣೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹದ ಕುರಿತು ವಿಧಾನಸಭೆಯಲ್ಲಿ ವಿವರವಾದ ಚರ್ಚೆ ನಡೆಯಿತು. ಚರ್ಚೆಗೆ ಉತ್ತರ ನೀಡುವಾಗ ಯಡಿಯೂರಪ್ಪ ಹೆಚ್ಚುವರಿಯಾಗಿಯಾಗಿ 10 ಸಾವಿರ ರೂ. ಪರಿಹಾರವನ್ನು ನೀಡುವುದಾಗಿ ಹೇಳಿದರು.
ಪ್ರವಾಹ ನಷ್ಟ ಕುರಿತು ಸಲ್ಲಿಸಿದ್ದ ವರದಿ ತಿರಸ್ಕೃತವಾಗಿಲ್ಲ: ಯಡಿಯೂರಪ್ಪ
ಪ್ರವಾಹದಿಂದ ಹಾನಿಗೊಳಗಾದ ಬೆಳೆಗಳಿಗೆ ಎನ್ಡಿಆರ್ಎಫ್ ಅಡಿ ನೀಡುವ ಪರಿಹಾರ ಹಾಗೂ ಸರ್ಕಾರದಿಂದ ನೀಡುವ ಒಟ್ಟಾರೆ ಪರಿಹಾರದ ಅಂಕಿ-ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ರೇಷ್ಮೆ ಮತ್ತು ಅಡಿಕೆ ಬೆಳೆ ನಾಶಕ್ಕೂ ಪರಿಹಾರ ನೀಡಲಾಗುತ್ತದೆ. ಪರಿಹಾರದ ಮೊತ್ತವನ್ನು ಶೀಘ್ರವೇ ಚರ್ಚಿಸಿ ಅಂತಿಮಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಲಕ್ಷ್ಮಣ ಸವದಿಗೆ ಪರಿಹಾರ ಕೊಡಲು ಭಿಕ್ಷೆ ಎತ್ತಿದ ರೈತರು!
ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಹಾನಿಗೊಳಗಾಗಿರುವ ಮನೆಗಳನ್ನು ಎ, ಬಿ, ಸಿ ಎಂದು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಎ, ಬಿ ಮತ್ತು ಸಿ ಮನೆಗಳಿಗೆ ವಿವಿಧ ಶ್ರೇಣಿಯ ಪರಿಹಾರವನ್ನು ನೀಡಲಾಗುತ್ತದೆ. ಪ್ರವಾಹದಿಂದ ಅಂಗಡಿಗಳಿಗೆ ಹಾನಿಯಾಗಿದ್ದರೆ ಅದಕ್ಕೂ ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಪರಿಹಾರ ಸಾಕಾಗಲ್ಲ ಹೆಚ್ಚಿನ ಪರಿಹಾರ ಕೊಡಿ: ಸಿದ್ದರಾಮಯ್ಯ ಒತ್ತಾಯ
ಬೆಳೆಗಳಿಗೆ ಪರಿಹಾರ
ಖುಷ್ಕಿ ಭೂಮಿಗೆ ಎನ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ಪ್ರತಿ ಹೆಕ್ಟೇರ್ಗೆ 6800 ರೂ., ಎನ್ಡಿಆರ್ಎಫ್ ಪರಿಹಾರ ಸೇರಿದಂತೆ ಸರ್ಕಾರ ಘೋಷಿಸಿರುವ ಪರಿಹಾರ ಪ್ರತಿ ಹೆಕ್ಟೇರ್ಗೆ 16,800 ರೂ. ಗಳಾಗುತ್ತದೆ.
ತೋಟಗಾರಿಕಾ ಭೂಮಿಗೆ ಎನ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ಪ್ರತಿ ಹೆಕ್ಟೇರ್ಗೆ 13,500 ರೂ., ಎನ್ಡಿಆರ್ಎಫ್ ಪರಿಹಾರ ಸೇರಿದಂತೆ ಸರ್ಕಾರ ಘೋಷಿಸಿರುವ ಪರಿಹಾರ ಪ್ರತಿ ಹೆಕ್ಟೇರ್ಗೆ 23,500 ರೂ. ಗಳಾಗುತ್ತದೆ.
ಶಾಶ್ವತ ನೀರಾವರಿ ಭೂಮಿ
ಶಾಶ್ವತ ನೀರಾವರಿ ಭೂಮಿಗೆ ಎನ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ಪ್ರತಿ ಹೆಕ್ಟೇರ್ಗೆ 18,000 ರೂ., ಎನ್ಡಿಆರ್ಎಫ್ ಪರಿಹಾರ ಸೇರಿದಂತೆ ಸರ್ಕಾರ ಘೋಷಿಸಿರುವ ಪರಿಹಾರ ಪ್ರತಿ ಹೆಕ್ಟೇರ್ಗೆ 28,000 ರೂ. ಗಳಾಗುತ್ತದೆ.
ಕಾಫಿ ಬೆಳೆಗೆ ಎನ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ಪ್ರತಿ ಹೆಕ್ಟೇರ್ಗೆ 18,000 ರೂ., ಎನ್ಡಿಆರ್ಎಫ್ ಪರಿಹಾರ ಸೇರಿದಂತೆ ಸರ್ಕಾರ ಘೋಷಿಸಿರುವ ಪರಿಹಾರ ಪ್ರತಿ ಹೆಕ್ಟೇರ್ಗೆ 28,000 ರೂ. ಗಳಾಗುತ್ತದೆ.
ಮನೆಗಳ ಹಾನಿಗೆ ಪರಿಹಾರ
ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಹಾನಿಗೊಳಗಾಗಿರುವ ಮನೆಗಳನ್ನು ಎ, ಬಿ, ಸಿ ಎಂದು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಎನ್ಡಿಆರ್ಎಫ್ ಮಾನದಂಡದ ಅನ್ವಯ ಎ ಮತ್ತು ಬಿ ವರ್ಗದ ಮನೆಗಳಿಗೆ 95,000 ರೂ. ಪರಿಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ. ಎ ಮತ್ತು ಬಿ ವರ್ಗದ ಮನೆಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ಸಿ ವರ್ಗದ ಮನೆಗಳು
ಸಿ ವರ್ಗದ ಮನೆಗಳಿಗೆ ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ನಿಗದಿಪಡಿಸಿರುವ ಮೊತ್ತ 5200 ರೂ., ಸರ್ಕಾರದ ನಿಧಿಯಿಂದ 25,000 ರೂ. ಇದನ್ನು ಈಗ 50 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಪ್ರವಾಹದಿಂದ ಅಂಗಡಿಗಳಿಗೆ ಹಾನಿಯಾಗಿದ್ದರೆ 25 ಸಾವಿರ ಪರಿಹಾರ ನೀಡಲಾಗುತ್ತದೆ. ಪ್ರವಾಹದಿಂದ ಮಗ್ಗಗಳು ಹಾನಿಗೊಳಗಾಗಿದ್ದರೆ ನೇಕಾರರಿಗೆ 25 ಸಾವಿರ ರೂ.ನೀಡಲಾಗುತ್ತದೆ.