ವಿಧಾನಸಭೆಯಲ್ಲಿ ಒಂದೇ ದಿನ 10 ವಿಧೇಯಕಗಳ ಮಂಡನೆ!
ಬೆಂಗಳೂರು, ಸೆ. 15: ವಿಧಾನ ಮಂಡಲ ಮಳೆಗಾಲದ ಅಧಿವೇಶನದಲ್ಲಿ 18ಕ್ಕೂ ಹೆಚ್ಚು ವಿಧೇಯಕಗಳನ್ನು ಮಂಡನೆ ಮಾಡುವುದಾಗಿ ಸರ್ಕಾರ ಹೇಳಿತ್ತು. ಅದರಂತೆ ಒಂದೇ ದಿನ ವಿಧಾನಸಭೆಯಲ್ಲಿ ಒಟ್ಟು 10 ವಿಧೇಯಕಗಳನ್ನು ಮಂಡನೆ ಮಾಡಲಾಗಿದೆ.
ವಿಧಾನಸಭೆಯಲ್ಲಿ ನೀರು ಸರಬರಾಜು ಮತ್ತು ಗ್ರಾಮಾಂತರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ, 2021, ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021, ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ, 2021, ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕ 2021, ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ, 2021, ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ, 2021, ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021, ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021, ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕ 2021, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿದೆ.
ಗ್ರಾಮಾಂತರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ
ಕಾವೇರಿ ನೀರು ಅಥವಾ ಅಂತರ್ಜಲ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಳೆನೀರು ಕೊಯ್ಲನ್ನು ಕಡ್ಡಾಯಗೊಳಿಸಲು ಈ ವಿಧೇಯಕವನ್ನು ತರಲಾಗಿದೆ. ವಿಧಾನಸಬೆಯಲ್ಲಿ ವಿಧೇಯಕ ಮಂಡನೆಯಾಗಿದ್ದು, ಅಂಗೀಕಾರವಾದ ಬಳಿಕ ವಿಧಾನ ಪರಿಷತ್ಗೆ ಕಳುಹಿಸಲಾಗುತ್ತದೆ.
ಮಳೆ ನೀರು ಒಳಚರಂಡಿಗಳಲ್ಲಿ ಹರಿದು ಹೋಗುವುದನ್ನು ತಗ್ಗಿಸುವುದರ ಜೊತೆಗೆ ನಗರ ಪ್ರವಾಹವನ್ನು ಇಳಿಸಲು ಪೂರಕವಾದ ನಿಯಮಗಳನ್ನೊಳಗೊಂಡ ಅಂಶಗಳನ್ನು ಈ ವಿಧೇಯಕವನ್ನು ರೂಪಿಸಲಾಗಿದೆ.
ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕ 2021
35-45 ಲಕ್ಷ ರೂ. ನಡುವಿನ ಮೌಲ್ಯದ ಅಪಾರ್ಟ್ಮೆಂಟ್ಗಳ ಮೊದಲ ನೋಂದಣಿಗೆ ಮುದ್ರಾಂಕ ಸುಂಕವನ್ನು ಕಡಿಮೆ ಮಾಡಲು ಈ ತಿದ್ದುಪಡಿ ವಿಧೇಯಕ ತರಲಾಗಿದೆ. ಈ ತಿದ್ದುಪಡಿ ವಿಧೇಯಕ ಮೂಲಕ ಶೇಕಡಾ 5 ರಿಂದ 3ಕ್ಕೆ ಮುದ್ರಾಂಕ ಸುಂಕವನ್ನು ಕಡಿಮೆ ಮಾಡಲಾಗುವುದು.
ಜೊತೆಗೆ ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಮಂಡನೆ ಮಾಡಲಾಗಿದೆ. ಬಂದೀಖಾನೆಗಳು ಮತ್ತು ಸುಧಾರಣ ಆಡಳಿತವನ್ನು ಬಲಪಡಿಸಲು ಕೌಶಲ್ಯಾಭಿವೃದ್ಧಿಗಾಗಿ, ಬಂದಿಗಳು ಹಾಗೂ ಬಂದೀಖಾನೆಗಳ ಸಿಬ್ಬಂದಿಯ ಕಲ್ಯಾಣಕ್ಕಾಗಿ ಹಾಗೂ ಬಂದೀಖಾನೆ ಉದ್ಯಮಗಳ ವಿಸ್ತರಣೆಗಾಗಿ ಮಂಡಳಿಯನ್ನು ರಚಿಸಲು ಉದ್ದೇಶಿಸಲಾಗಿದೆ.
ಬಂದಿಗಳ ಗುರುತಿಸುವಿಕೆ ವಿಧೇಯಕ, 2021
ಶಾಂತಿಭಂಗ ಮತ್ತು ಹಿಂಸಾಚಾರದ ಪರಿಣಾಮಕಾರಿ ನಿಗಾವಣೆ ಮತ್ತು ಪ್ರತಿಬಂಧಕ್ಕಾಗಿ ಅಪರಾಧಿತ ಭಾವಚಿತ್ರ ಮತ್ತು ಅಳತೆ ದಾಖಲೆಗಳಲ್ಲಿ ರಕ್ತದ ಮಾದರಿ, ಡಿ.ಎನ್.ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿನ ಮಾದರಿಯನ್ನು ಸೇರಿಸಲಾಗುತ್ತದೆ. ಆ ಮೂಲಕ ಅಪರಾಧಿಗಳ ಗುರುತಿಸುವಿಕೆಯನ್ನು ಇನ್ನಷ್ಟು ಬಲಪಡಿಸಲು ಉದ್ದೇಶಿಸಲಾಗಿದೆ.
ಈ ವಿಧೇಯಕ ಮೂಲಕ ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟರ ಜೊತೆಗೆ ಎಸ್ ಪಿ ಅಥವಾ ಡಿಸಿಪಿಗೆ ಅಳತೆಗಳನ್ನು ಸಂಗ್ರಹಿಸಲು ಆದೇಶಿಸುವ ಅಧಿಕಾರವನ್ನು ನೀಡಲಾಗುತ್ತದೆ. ಹತ್ತು ವರ್ಷಗಳ ನಂತರ ಕೋರ್ಟ್, ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಪೊಲೀಸ್ ಸೂಪರಿಂಟೆಂಡೆಂಟ್ ಅಥವಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಥವಾ ಡಿಸಿಎಂ ನಿರ್ದೇಶನದ ಹೊರತು ಅಳತೆಗಳ ನಾಶ ಮಾಡುವ ಅಧಿಕಾರವನ್ನು ಎಸ್ ಪಿ ಅಥವಾ ಡಿಸಿಪಿಗೆ ನೀಡಲಾಗುತ್ತದೆ.
Recommended Video
ಚರ್ಚೆಯಿಲ್ಲದೆ ವಿಧೇಯಕಗಳ ಅಂಗೀಕಾರ ಸಲ್ಲದು!
ವಿಧೇಯಕಗಳನ್ನು ಮಂಡನೆ ಮಾಡಿದ ಬಳಿಕ ಅವುಗಳ ಮೇಲೆ ಸವಿಸ್ತಾರ ಚರ್ಚೆ ಆಗಬೇಕು ಎಂದು ವಿರೋಧ ಪಕ್ಷಗಳ ನಾಯಕರು ಈಗಾಗಲೇ ಒತ್ತಾಯಿಸಿದ್ದಾರೆ. ಆದರೆ 18 ವಿಧೇಯಕಗಳಿಗೆ ಈ ಅಧಿವೇಶನದಲ್ಲಿಯೇ ಅಂಗೀಕಾರ ಪಡೆದುಕೊಳ್ಳಲು ಸರ್ಕಾರ ಮುಂದಾಗಿದೆ.
ತಿದ್ದುಪಡಿ ವಿಧೇಯಕಗಳನ್ನು ಹೊರತು ಪಡಿಸಿ, ಹೊಸ ವಿಧೇಯಕಗಳನ್ನು ಚರ್ಚೆಯಿಲ್ಲದೆ ಪಾಸ್ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ವಿಪಕ್ಷಗಳ ಸದಸ್ಯರು ತಿಳಿಸಿದ್ದಾರೆ.