ಸರ್ಕಾರಕ್ಕೆ ವರ್ಷ: ಮೇಲಿನಿಂದ ಫೋನು ಇಲ್ಲ, ಮೆಸೇಜೂ ಇಲ್ಲ ಯಾಕೆ?
ಬೆಂಗಳೂರು, ಜು. 26: ಕರ್ನಾಟಕ ಹೊರತು ಪಡಿಸಿದರೆ ದಕ್ಷಿಣ ಭಾರತದಲ್ಲಿ ಖಾತೆ ತೆರೆಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕಳೆದ 12 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ಬಿಜೆಪಿ ಪಾಳೆಯದಲ್ಲಿ ಹರ್ಷದ ಹೊನಲು ಹರಿದಿತ್ತು. ಆದರೆ ನಂತರ ಅಧಿಕಾರ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು ತನ್ನ ಸ್ವಯಂಕೃತಾಪರಾಧಗಳಿಂದ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
Recommended Video
ಇದೀಗ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದು ಒಂದು ವರ್ಷದ ಆಡಳಿತವನ್ನೂ ನಡೆಸಿದೆ. ಆದರೆ ಅದ್ಯಾಕೊ ಕೇಂದ್ರ ಬಿಜೆಪಿ ನಾಯಕರಿಗೆ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಅಷ್ಟಕ್ಕಷ್ಟೆ ಎಂಬಂತಾಗಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಸರಳವಾಗಿ ವರ್ಷಾಚರಣೆ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ಆದರೆ ಕೇಂದ್ರ ಸರ್ಕಾರ ಹಾಗೂ ನಾಯಕರು ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಮುನಿಸಿ ಕೊಂಡಂತಿದೆ. ಅದಕ್ಕೆ ಕಾರಣವೂ ಇದೆ!
ನಾಳೆ ವರ್ಷಾಚರಣೆ
ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕನೆ ಬಾರಿ ಅಧಿಕಾರವಹಿಸಿಕೊಂಡು ಇಂದಿಗೆ ಒಂದು ವರ್ಷ. ಕಳೆದ ವರ್ಷ 2019 ಜುಲೈ 26 ರಂದು ಸರಳವಾಗಿ ರಾಜಭವನದ ಗಾಜಿನ ಮನೆಯಲ್ಲಿ ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಏಕಾಂಗಿಯಾಗಿದ್ದಾರಾ? ಇಂತಹದೊಂದು ಸಂಶಯವೀಗ ಬಿಜೆಪಿ ಕಾರ್ಯಕರ್ತರನ್ನು ಕಾಡುತ್ತಿದೆ.
ವಿವಾದಿತ ತೀರ್ಮಾನಗಳಿಂದಲೂ ಸದ್ದು ಮಾಡಿದ ಸರ್ಕಾರ!
ಅದಕ್ಕೆ ಕಾರಣವಾಗಿರುವುದು ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಹೈಕಮಾಂಡ್ ನಡೆ.
ಕಾಯ್ದಿರುವ ಕಾರ್ಯಕರ್ತರು
ಸರ್ಕಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುವಂತಹ ಸ್ಥಿತಿಯಲ್ಲಿ ಇಲ್ಲ. ರಾಜ್ಯದಲ್ಲಿ ನಿರಂತರವಾಗಿ ಏರುತ್ತಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಿಂದ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯಿದೆ. ಹೀಗಾಗಿ ಕೇಂದ್ರದಿಂದ ಆ ಒಂದು ಮೆಸೇಜ್ ಬರಲಿ ಎಂದು ಬೆಳಗ್ಗೆಯಿಂದಲೇ ಬಿಜೆಪಿ ಕಾರ್ಯಕರ್ತರು ಕಾಯುತ್ತಿದ್ದಾರೆ. ಆದರೆ ಅವರ ಆಶಯ ಈಡೇರಿಲ್ಲ.
ಹೌದು ಕೇಂದ್ರದ ಬಿಜೆಪಿ ಹೈಕಮಾಂಡ್ ಅಥವಾ ಕೇಂದ್ರ ಸರ್ಕಾರದ ಯಾವುದೇ ನಾಯಕರು ಶುಭ ಹಾರೈಕೆಯ ಸಂದೇಶವನ್ನು ಕಳುಹಿಸಿಲ್ಲ. ಇದು ರಾಜ್ಯ ಬಿಜೆಪಿ ನಾಯಕರಲ್ಲಿ ಆತಂಕ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.
ಶುಭ ಹಾರೈಕೆ ಇಲ್ಲ
ಕರ್ನಾಟಕದಲ್ಲಿ ತಮ್ಮದೆ ಪಕ್ಷದ ಸರ್ಕಾರ ಒಂದು ವರ್ಷದ ಆಡಳಿತವನ್ನು ಪೂರೈಸಿರುವುದನ್ನು ಕೇಂದ್ರ ಸರ್ಕಾರ ಅಥವಾ ಬಿಜೆಪಿ ಹೈಕಮಾಂಡ್ ಮರೆತಂತಿದೆ. ಯಾಕೆಂದರೆ ಇವತ್ತಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗಿದೆ. ಕೋವಿಡ್ ಸಂಕಷ್ಟದಿಂದಾಗಿ ಸಂಭ್ರಮಾಚರಣೆ ಮಾಡಿಕೊಳ್ಳುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರವೂ ಇಲ್ಲ. ಆದರೆ ಮೇಲಿನಿಂದ ಒಂದು ಶುಭ ಹಾರೈಕೆ, ಸರ್ಕಾರ ಹಾಗೂ ಜನತೆಗೆ ಒಳ್ಳೆಯದಾಗಲಿ ಎಂಬ ಒಂದೇ ಒಂದು ಸಂದೇಶವನ್ನು ಎದುರು ನೋಡುವುದು ಸಹಜ.
ಸರ್ಕಾರಕ್ಕೆ ವರ್ಷ: ಮಹತ್ವದ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಸಜ್ಜು?
ಅಂತಹ ಯಾವುದೇ ಶುಭ ಹಾರೈಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಂದ ಬಂದಿಲ್ಲ. ಇದು ರಾಜ್ಯದ ಜನ ಸಾಮಾನ್ಯರಿಗೆ ಕುತೂಹಲ ಮೂಡಿಸಿದೆ. ಉತ್ತರ ಭಾರತದ ಬಿಜೆಪಿಯೇತರ ರಾಜ್ಯಗಳ ಸರ್ಕಾರಗಳ ವರ್ಷಾಚರಣೆ ಸಂದರ್ಭದಲ್ಲಿ ಶುಭ ಹಾರೈಸುವ ಕೇಂದ್ರ ಬಿಜೆಪಿ ನಾಯಕರು, ರಾಜ್ಯ ಬಿಜೆಪಿ ಸರ್ಕಾರಕ್ಕೆ ಶುಭ ಹಾರೈಸದೇ ಇರುವುದು ಮಲತಾಯಿ ಧೋರಣೆ ಅಲ್ಲದೆ ಮತ್ತೇನು ಎಂಬಂತಾಗಿದೆ.
ಬಿಜೆಪಿ ನಾಯಕರು
ಇನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಸ್. ಸಂತೋಷ್ ಅವರೂ ಕೂಡ ರಾಜ್ಯ ಸರ್ಕಾರಕ್ಕೆ ಶುಭಹಾರೈಸುವುದನ್ನು ಮರೆತ ಹಾಗಿದೆ. ಯಾಕೆಂದರೆ ಅವರಿಂದಲೂ ರಾಜ್ಯ ಸರ್ಕಾರಕ್ಕೆ ಸಂದೇಶ ಬಂದಿಲ್ಲ. ಇನ್ನು ರಾಜ್ಯದಿಂದ ರಾಜ್ಯಸಭೆ ಪ್ರವೇಶಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಭ ಹಾರೈಸಿಲ್ಲ. ಇನ್ನು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ನಾಯಕರು ರಾಜ್ಯ ಸರ್ಕಾರಕ್ಕೆ ಶುಭಹಾರೈಕೆ ಮಾಡಿಲ್ಲ.
ಇನ್ನು ಬಹಳಷ್ಟು ಶಾಸಕರು ಹಾಗೂ ಸಂಸದರಲ್ಲಿಯೂ ವರ್ಷದ ಸಂಭ್ರಮವಿಲ್ಲ. ಸಂಭ್ರಮಿಸುವ ಕಾಲ ಇದಲ್ಲ ಕನಿಷ್ಠ ಸರ್ಕಾಕ್ಕೆ ಶುಭಹಾರೈಸುವುದು ನಮ್ಮ ಭಾರತೀಯ ಸಂಪ್ರದಾಯ ಅದನ್ನೇ ಬಿಜೆಪಿ ನಾಯಕರು ಮರೆತಂತಿದೆ.