ಬೆಂಗಳೂರು, ಸೆಪ್ಟೆಂಬರ್ 24: ಕಳೆದ ತಿಂಗಳು ಕರ್ನಾಟಕ ಎದುರಿಸಿದ ಭೀಕರ ಪ್ರವಾಹ ಪರಿಸ್ಥಿತಿಯನ್ನು ಸರಕಾರ ಜನರ ಬಳಿ ಬರಲು ತೀರ್ಮಾನಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ-ಟ್ವೆಂಟಿ ಕ್ರಿಕೆಟ್ ಪಂದ್ಯಾವಳಿಯ ವೇಳೆ ಧನ ಸಂಗ್ರಹ ಕುರಿತಾದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಕರ್ನಾಟಕದ ಒಟ್ಟು 23 ಜಿಲ್ಲೆಗಳ 101 ತಾಲೂಕುಗಳು ಪ್ರವಾಹಕ್ಕೆ ಗುರಿಯಾಗಿವೆ. ಒಟ್ಟು 91 ಜನರನ್ನು ಪ್ರಕೃತಿಯ ವಿಕೋಪ ಬಲಿ ತೆಗೆದುಕೊಂಡಿದೆ. ಸರಕಾರಿ ಅಂಕಿ ಅಂಶಗಳ ಪ್ರಕಾರ, ಒಟ್ಟು 8.8 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದೆ. 6 ಲಕ್ಷ ಜನ ಮನೆ, ಭೂಮಿ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
ಈವರೆಗೆ ಒಟ್ಟಾರೆ ಆದ ನಷ್ಟದ ಅಂದಾಜು ಸುಮಾರು 35 ಸಾವಿರ ಕೋಟಿ ರೂಪಾಯಿ. ಹೀಗಾಗಿ ಈ ಬಾರಿಯ ಪ್ರವಾಹವನ್ನು ಶತಮಾನದ ಮಹಾ ಪ್ರವಾಹ ಎಂದು ಗುರುತಿಸಲಾಗಿದೆ.
A fundraising campaign to #RebuildKarnataka after the Karnataka Floods will be launched today by @CMofKarnataka Shri @BSYBJP ahead of the #INDvSA match at Chinnaswamy Stadium. Let us rise together to help our brother and sisters of Karnataka. DONATE NOW⬇️ pic.twitter.com/sFDbmCVrFf
— Dr. Ashwathnarayan C. N. (@drashwathcn) September 22, 2019
ಈ ಹಿನ್ನೆಲೆಯಲ್ಲಿ ಕರ್ನಾಟಕದ ಸರಕಾರ ಪ್ರವಾಹ ಸಂತ್ರಸ್ತರಿಗೆ ಸುಭದ್ರ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಧನ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವಥ ನಾರಾಯಣ, "ಜೀವನೋಪಾಯ ನೆಲೆಯನ್ನು ಕಳೆದುಕೊಂಡ ನಮ್ಮ ಕರುನಾಡ ಬಾಂಧವರಿಗೆ ಆಸರೆಯಾಗೋಣ. ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಉದಾರವಾಗಿ ಕೊಡುಗೆ ನೀಡಿ," ಎಂದು ಮನವಿ ಮಾಡಿದ್ದಾರೆ.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಇವತ್ತಿಗೂ ಜನಜೀವನ ಸಹಜ ಸ್ಥಿತಿಗೆ ಮರಳಿಲ್ಲ. ಸಂತ್ರಸ್ತರು ಹೊಸ ಬದುಕು ಕಟ್ಟಿಕೊಳ್ಳುವ ಸಲುವಾಗಿ ಜನ, ಸಂಘ- ಸಂಸ್ಥೆಗಳು ನೆರವು ನೀಡಿದ್ದರೂ ಭೀಕರ ಪ್ರವಾಹ ತಂದೊಡ್ಡಿದ ಹಾನಿಗೆ ಇದು ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಜನರಿಂದಲೇ ಧನ ಸಂಗ್ರಹಿಸಲು ಅಭಿಯಾನಕ್ಕೆ ಚಾಲನೆ ನೀಡಿದೆ. ನೆರವು ನೀಡಬಯಸುವವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುಗೆ ನೀಡಲು ಕೋರಲಾಗಿದೆ.
RECOMMENDED STORIES