'ಮಹಿಳೆಯರು ದೇಗುಲಗಳ ಪ್ರವೇಶಕ್ಕೆ ಹಾಕುವ ಶ್ರಮ ಸಂಸತ್ ಪ್ರವೇಶಕ್ಕೆ ಹಾಕಲಿ'
ಕಲಬುರಗಿ, ಫೆಬ್ರವರಿ 6: ''ದೇಶದಲ್ಲಿ ಮಹಿಳೆಯರು ದೇಗುಲಗಳ ಪ್ರವೇಶಕ್ಕೆ ಹಾಕುತ್ತಿರುವ ಪರಿಶ್ರಮವನ್ನು ಸಂಸತ್ ಪ್ರವೇಶಕ್ಕಾಗಿ ಹಾಕಲಿ'' ಎಂದು ಪ್ರೊ. ಶಿವಗಂಗಾ ರುಮ್ಮಾ ಅಭಿಪ್ರಾಯಪಟ್ಟರು.
ಕಲಬುರಗಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನ ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ 'ಸ್ತ್ರೀ ಲೋಕ : ತಲ್ಲಣಗಳು' ಗೋಷ್ಠಿಯಲ್ಲಿ ಭಾಗವಹಿಸಿ 'ಮಹಿಳೆ ಮತ್ತು ಲೋಕಗ್ರಹಿಕೆ' ಕುರಿತ ವಿಚಾರ ಮಂಡಿಸಿದರು.
85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಮೀಸಲಾತಿ ಬಿಡಿ, ಶಕ್ತರಾಗಿದ್ದೇವೆ ಎನ್ನಿ; ಡಾ. ಬಿ.ಟಿ. ಲಲಿತಾ ನಾಯಕ್
''ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ರಹದಾರಿಯಂತೂ ದೊರಕಿತು. ಇಂದಿನ ಮಹಿಳೆಯರ ಗುರಿ ದೇವಾಲಯ ಪ್ರವೇಶ ಮಾತ್ರ ಆಗಬಾರದು, ಸಂಸತ್ ಪ್ರವೇಶದ ಗುರಿ ಮಹಿಳೆಯರಿಗಿರಬೇಕು. ಏಕೆಂದರೆ ಕಾನೂನುಗಳು ರೂಪುಗೊಳ್ಳುವುದು ದೇವಾಲಯಗಳಲ್ಲಿ ಅಲ್ಲ, ಸಂಸತ್ತಿನಲ್ಲಿ'' ಎಂದರು.
''ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ದೇಶೀ ಕಾವ್ಯಗಳನ್ನು ಹೋಲಿಸಿದಾಗ, ಮಹಿಳೆಯರನ್ನೇ ಕಥಾ ನಾಯಕಿಯಾಗಿ ರೂಪಿಸಿದ್ದು ದಕ್ಷಿಣ ಭಾರತದಲ್ಲಿಯೇ ಹೆಚ್ಚು. ಬಾಣ ಕಾದಂಬರಿ, ಕರ್ನಾಟಕ ಕಾದಂಬರಿ ಅಲ್ಲದೆ ಕಾಳಿದಾಸರ ಶಾಕುಂತಲೆಯ ಕಾವ್ಯವೂ ಕೂಡ ಇದಕ್ಕೆ ನಿದರ್ಶನ ಎನ್ನಬಹುದು. ಸಾಹಿತ್ಯ ಎನ್ನುವುದು ಬದುಕಿನ ಉಪ ಉತ್ಪನ್ನ, ಮಹಿಳೆ ಅಬಲೆ ಎನ್ನುವುದು ಕೇವಲ ಲೋಕಗ್ರಹಿಕೆಯ ಭಾಗ. ಆದರೆ ಮಹಿಳೆ ಅಬಲೆಯಲ್ಲ ಎನ್ನುವುದು ಸರ್ವ ಕಾಲದಲ್ಲಿಯೂ ಸಾಬೀತಾಗಿದೆ'' ಎಂದರು.