ಬಿಎಸ್ ವೈ ಕ್ಷೇತ್ರ ಬದಲಾವಣೆ, ಬೆಂಗಳೂರೋ ಭದ್ರಾವತಿಯೋ!
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷೇತ್ರ ಬದಲಾವಣೆ ಮಾಡುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಲಬುರಗಿಯಲ್ಲಿ ಮಾತನಾಡಿದ್ದಾರೆ. ಭದ್ರಾವತಿ ಅಥವಾ ಬೆಂಗಳೂರಿನ ಮಲ್ಲೇಶ್ವರ ಅವರ ತಕ್ಷಣದ ಆಯ್ಕೆ ಎಂದು ಕೂಡ ಹೇಳಿದ್ದಾರೆ
ಕಲಬುರಗಿ, ಫೆಬ್ರವರಿ 22: ಕರ್ನಾಟಕದ ರಾಜಕೀಯ ಮುಖಂಡರ ಹೇಳಿಕೆಗಳು ರಾಜ್ಯದಲ್ಲಿ ಚುನಾವಣೆ ವಾತಾವರಣವನ್ನೇ ಸೃಷ್ಟಿಸಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಸರದಿ. ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಮಗ ಬಿ.ವೈ.ರಾಘವೇಂದ್ರಗೆ ಬಿಟ್ಟುಕೊಟ್ಟು, ತಾವು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಆಲೋಚನೆ ಇದೆ ಎಂದು ಅವರು ಕಲಬುರಗಿಯಲ್ಲಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಹಾಗಿದ್ದರೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು ಎಂಬ ಪ್ರಶ್ನೆಗೆ, ಶಿವಮೊಗ್ಗದ ಭದ್ರಾವತಿ ಅಥವಾ ಬೆಂಗಳೂರಿನ ಮಲ್ಲೇಶ್ವರದಿಂದ ಎಂಬ ಉತ್ತರ ನೀಡಿದ್ದಾರೆ ಬಿಎಸ್ ವೈ. ಇದರ ಜೊತೆಗೆ ಚುನಾವಣೆಗೆ ಮೂರು ತಿಂಗಳ ಮುಂಚೆ ಈ ಬಗ್ಗೆ ನಿರ್ಧಾರ ಪ್ರಕಟಿಸುತ್ತೇನೆ. ಈ ಬಗ್ಗೆ ಮಾಧ್ಯಮದವರ ಸಲಹೆ ಕೇಳುತ್ತೇನೆ ಎಂದು ಕೂಡ ಹೇಳಿದ್ದಾರೆ.[ಸಿದ್ದು ಮೇಲೆ ಕಲಬುರಗಿಯಲ್ಲಿ ಬಿಎಸ್ವೈ ಭ್ರಷ್ಟಾಚಾರದ ಅಸ್ತ್ರ]
ಕ್ಷೇತ್ರ ಬದಲಾವಣೆ ನಿರ್ಧಾರದ ಬಗ್ಗೆ ಯಡಿಯೂರಪ್ಪನವರ ಈ ಹೇಳಿಕೆ ಹಿಂದೆ ಬಹಳ ಲೆಕ್ಕಾಚಾರಗಳು ಇವೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಡೀ ರಾಜ್ಯದ ಪ್ರವಾಸ ಮಾಡಬೇಕಿರುವ ಅವರು, ಸುರಕ್ಷಿತ ಕ್ಷೇತ್ರವೊಂದರ ಹುಡುಕಾಟದಲ್ಲಿದ್ದಾರೆ. ಜಾತಿ ಬೆಂಬಲ, ಪಕ್ಷಕ್ಕೆ ಬೆಂಬಲ, ತಾವು ಕಡಿಮೆ ಅವಧಿಯ ಪ್ರಚಾರ ನಡೆಸಿದರೂ ಗೆಲ್ಲುವ ಅವಕಾಶ ಹೆಚ್ಚು ಇರುವ ಕ್ಷೇತ್ರದಿಂದ ಸ್ಪರ್ಧಿಸುವುದು ಅವರ ಇರಾದೆ.[ಯಡಿಯೂರಪ್ಪಗೆ ಹುಚ್ಚು ಹಿಡಿದಿದೆ: ದಿನೇಶ್ ಗುಂಡೂರಾವ್]
ಈಗಾಗಲೇ ಘೋಷಿಸಿರುವಂತೆ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ. ಹೆಚ್ಚಿನ ಅಪಾಯ ಇಲ್ಲದ ಕ್ಷೇತ್ರದಿಂದ ಕಣಕ್ಕೆ ಇಳಿದರೆ ರಾಜ್ಯಾದ್ಯಂತ ಪ್ರವಾಸ ನಡೆಸುವುದಕ್ಕೆ ತೊಂದರೆ ಆಗುವುದಿಲ್ಲ. ಜತೆಗೆ ಶಿಕಾರಿಪುರದಿಂದ ಸ್ವತಃ ಅವರೇ ಕಣಕ್ಕಿಳಿದರೆ ಮಗನಿಗೆ ಇನ್ನೊಂದು ಕ್ಷೇತ್ರವನ್ನು ಹುಡುಕಬೇಕಾಗುತ್ತದೆ. ಒಂದು ವೇಳೆ ಸಿಕ್ಕರೂ ಗೆಲುವಿಗಾಗಿ ಭಾರೀ ಬೆವರು ಹರಿಸಬೇಕಾಗುತ್ತದೆ ಎಂಬ ಲೆಕ್ಕಾಚಾರವೂ ಇದ್ದಂತೆ ಕಾಣುತ್ತಿದೆ.