ಕಲಬುರಗಿ; ಸೊನ್ನ ಬ್ಯಾರೇಜಿನಿಂದ ಹೊರ ಹರಿವು ಭಾರಿ ಇಳಿಕೆ
ಕಲಬುರಗಿ, ಅಕ್ಟೋಬರ್ 21 : ಕಲಬುರಗಿಯ ಸೊನ್ನ ಬ್ಯಾರೇಜಿನಿಂದ ಭೀಮಾ ನದಿಗೆ ಬಿಡಲಾಗುವ ನೀರಿನ ಹೊರ ಹರಿವಿನಲ್ಲಿ ಭಾರಿ ಇಳಿಮುಖವಾಗಿದೆ. ಇದರಿಂದಾಗಿ ನದಿ ಪಾತ್ರದ ಗ್ರಾಮಗಳಲ್ಲಿ ಉಂಟಾಗಿದ್ದ ಪ್ರವಾಹ ತಗ್ಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಬುಧವಾರ ಸಂಜೆ 6.30ರ ವರದಿಯಂತೆ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿನಿಂದ ಭೀಮಾ ನದಿಗೆ ಹೊರ ಹರಿವು 1,55,589 ಕ್ಯುಸೆಕ್ ಆಗಿದೆ. ಇದರಿಂದಾಗಿ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹ ಇಳಿಮುಖವಾಗುತ್ತಿದೆ.
ಕಲಬುರಗಿ ಪ್ರವಾಹ; 73 ಗ್ರಾಮಗಳ 27,278 ಜನರ ರಕ್ಷಣೆ
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಕಾರಣ ಭೀಮಾ ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಾಗಿತ್ತು. ಇದರಿಂದಾಗಿ ಸೊನ್ನ ಬ್ಯಾರೇಜಿನಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರನ್ನು ಹರಿಬಿಡಲಾಗುತ್ತಿತ್ತು. ಆದ್ದರಿಂದ, ನದಿ ಪಾತ್ರದ ಗ್ರಾಮಗಳು ಮುಳುಗಡೆಯಾಗಿದ್ದವು.
ಕಲಬುರಗಿ ಪ್ರವಾಹ; ರಕ್ಷಣಾ ಕಾರ್ಯಕ್ಕೆ ಸೇನೆ ನಿಯೋಜನೆ
ಅಕ್ಟೋಬರ್ 15ರಂದು ಭೀಮಾ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿತ್ತು. ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಭೀಮಾ ನದಿಗೆ ಬಿಟ್ಟಿದ್ದರಿಂದ ಸೊನ್ನ ಬ್ಯಾರೇಜಿಗೆ 1,98,000 ಕ್ಯುಸೆಕ್ ಒಳ ಹರಿವು ಬರುತ್ತಿತ್ತು.
ಕಲಬುರಗಿ; ಮಳೆ, ಪ್ರವಾಹ, ಸಹಾಯವಾಣಿ ಸಂಖ್ಯೆಗಳು
ಮಂಗಳವಾರ ಸೊನ್ನ ಬ್ಯಾರೇಜಿನಿಂದ ನದಿಗೆ 1,78,000 ಕ್ಯುಸೆಕ್ ನೀರು ಬಿಡಲಾಗಿತ್ತು. ಬುಧವಾರ ಈ ಪ್ರಮಾಣ ಇನ್ನು ಕಡಿಮೆಯಾಗಿದೆ. ಇದರಿಂದಾಗಿ ಪ್ರವಾಹ ಸಂತ್ರಸ್ತರಾಗಿದ್ದ ಗ್ರಾಮನಗಳ ಜನರು ನಿಟ್ಟುಸಿರು ಬಿಟ್ಟದ್ದಾರೆ.
ಅಕ್ಟೋಬರ್ 17ರಂದು ಬ್ಯಾರೇಜ್ನಿಂದ 7.80 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗಿತ್ತು. ಅಕ್ಟೋಬರ್ 16ರಂದು 5.49 ಲಕ್ಷ ಒಳಹರಿವು, 5.49 ಲಕ್ಷ ಹೊರ ಹರಿವು ದಾಖಲಾಗಿತ್ತು.
ವೈಮಾನಿಕ ಸಮೀಕ್ಷೆ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಕಲಬುರಗಿ, ಯಾದಗಿರಿ ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಯ ಪ್ರವಾಹ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಳೆ ಮತ್ತು ಪ್ರವಾಹದ ಪರಿಸ್ಥಿತಿ ಹಾಗೂ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪ್ರವಾಹ ಪರಿಸ್ಥಿತಿ ನಿರ್ವಹಣೆ ಸಂಬಂಧ ಜಿಲ್ಲಾಡಳಿತಗಳು ಕೈಗೊಂಡಿರುವ ಕಾರ್ಯಗಳಿಗೆ ತೃಪ್ತಿ ವ್ಯಕ್ತಪಡಿಸಿದರು.
ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಎನ್. ಡಿ. ಆರ್. ಎಫ್. ನಿಯಮಾವಳಿಯಂತೆ ಪರಿಹಾರ ನೀಡಲಾಗುತ್ತದೆ. ಮನೆಗೆ ನೀರು ನುಗ್ಗಿ ಬಟ್ಟೆ ಮತ್ತು ಪಾತ್ರೆ ಹಾನಿಯಾಗಿದ್ದಲ್ಲಿ ಸಂತ್ರಸ್ತರಿಗೆ 10 ಸಾವಿರ ರೂ. ಗಳನ್ನು ಒಂದು ವಾರದಲ್ಲಿ ವಿತರಿಸಬೇಕು ಎಂದು ಯಡಿಯೂರಪ್ಪ ಸೂಚನೆ ನೀಡಿದ್ದಾರೆ.