ಕಲಬುರಗಿ: ಅಪಘಾತ ಮಾಡಿದವನ ಹೊಡೆದು ಕೊಂದ ಗ್ರಾಮಸ್ಥರು
ಕಲಬುರಗಿ, ಫೆಬ್ರವರಿ 06: ವೃದ್ಧನಿಗೆ ಅಪಘಾತ ಮಾಡಿದನೆಂದು ಬೈಕ್ ಸವಾರನನ್ನು ಗ್ರಾಮಸ್ಥರು ಹೊಡೆದು ಕೊಂದು ಹಾಕಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಆಳಂದ ತಾಲ್ಲೂಕಿನ ಕಲ್ಲಹಂಗರಗ ಗ್ರಾಮದಲ್ಲಿ ಇಂದು ಬೆಳಿಗ್ಗೆ ಬಾವಿಯಲ್ಲಿ ಯುವಕನ ಶವವೊಂದು ಪತ್ತೆಯಾಗಿದೆ. ಅನುಮಾನಗೊಂಡ ಕೆಲವು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೊದಲಿಗೆ ಆತ್ಮಹತ್ಯೆಯೇನೊ ಎಂದು ಕೊಂಡಿದ್ದವರಿಗೆ ಯುವಕನ ದೇಹದ ಮೇಲಿದ್ದ ಗಾಯಗಳನ್ನು ನೋಡಿದ ನಂತರ ಅರಿವಾಗಿದ್ದು ಇದೊಂದು ಕೊಲೆ ಎಂದು.
ಕಲಬುರಗಿ ನಗರದ ಗೂಡ್ಸ್ ಟ್ರಾನ್ಸ್ಪೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಅಂಬರೀಶ್ ಪೂಜಾರಿಯೇ ಕೊಲೆಯಾದ ಯುವಕ. ಅಂಬರೀಶ್ ಕೆಲಸ ಮುಗಿಸಿ ಬೈಕಿನಲ್ಲಿ ತನ್ನ ಸ್ವಗ್ರಾಮ ಜವಳಗಾಕ್ಕೆ ಬರುತ್ತಿದ್ದಾಗ ಕಲ್ಲಹಂಗರಗ ಗ್ರಾಮದ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನಿಗೆ ಢಿಕ್ಕಿ ಹೊಡೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಸ್ಥಳದಲ್ಲಿದ್ದ ಗ್ರಾಮಸ್ಥರು ಯುವಕನನ್ನು ಮನಸೋಇಚ್ಛೆ ಹೊಡೆದಿದ್ದಾರೆ.
ಹೊಡೆತ ತಾಳಲಾದರೆ ಯುವಕ ಅಂಬರೀಶ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಅಂಬರೀಶ ಪ್ರಾಣ ಕಳೆದುಕೊಂಡದ್ದು ನೋಡಿ ಗಾಬರಿಯಾಗಿ ಆತನನ್ನು ಹೊಡೆದ ಗ್ರಾಮಸ್ಥರು ತಮ್ಮ ಮೇಲೆ ಆರೋಪ ಬರಬಾರದೆಂದು ಅಂಬರೀಶನ ಶವವನ್ನು ಪಕ್ಕದ ಬಾವಿಗೆ ಹಾಕಿದ್ದಾರೆ.
ಅಂಬರೀಶನನ್ನು ಹೊಡೆದವರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಅಂಬರೀಶ ಸ್ವಲ್ಪ ಹುಷಾರಿನಿಂದ ವಾಹನ ಚಲಾಯಿಸಿದ್ದರೆ ಹಾಗೂ ಗ್ರಾಮಸ್ಥರು ಸ್ವಲ್ಪ ತಾಳ್ಮೆ ಮೆರೆದಿದ್ದರೆ ಒಂದು ಜೀವ ಹೋಗುವುದು ಉಳಿಯುತಿತ್ತು.