ತರಬೇತಿ ನಿರತ ಪಿಎಸ್ಐ ಸಾವು, ಪರಿಹಾರದ ಭರವಸೆ ನೀಡಿದ ಸಿಎಂ
ಕಲಬುರಗಿ, ಜನವರಿ 08 : ಕಲಬುರಗಿಯಲ್ಲಿ ಭಾನುವಾರ ತರಬೇತಿ ನಿರತ ಪಿಎಸ್ಐ ಬಸವರಾಜ ಶಂಕರಪ್ಪ ಮಂಚನೂರು ಮೃತಪಟ್ಟಿದ್ದರು. ಕಲಬುರಗಿ ಪೊಲೀಸ್ ತರಬೇತಿ ಶಾಲೆಯ ಸಹಪಾಠಿಗಳು ಅವರ ಕುಟುಂಬಕ್ಕೆ ತಲಾ 10 ಸಾವಿರದಂತೆ ನೆರವು ನೀಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಸವರಾಜ ಶಂಕರಪ್ಪ ಮಂಚನೂರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕಲಬುರಗಿ ಪೊಲೀಸ್ ತರಬೇತಿ ಶಾಲೆಯ 590 ಸಹ ಪ್ರಶಿಕ್ಷಣಾರ್ಥಿಗಳು ತಲಾ 10 ಸಾವಿರದಂತೆ ಸಹಾಯ ನೀಡಲು ಮುಂದಾಗಿರುವುದನ್ನು ಶ್ಲಾಘಿಸಿದ್ದಾರೆ.
ಕಲಬುರಗಿ : ಟ್ರೈನಿ ಪಿಎಸ್ಐ ನಿಗೂಢವಾಗಿ ಸಾವು
ಈ ಕುರಿತು ಟ್ವೀಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರು, 'ಕಲಬರಗಿ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿ ಬಸವರಾಜ ಶಂಕರಪ್ಪ ಮಂಚನೂರು ಅವರ ಆಕಸ್ಮಿಕ ನಿಧನ ಅತ್ಯಂತ ನೋವಿನ ಸಂಗತಿ. ಆದರೆ ಅವರ 590 ಸಹ ಪ್ರಶಿಕ್ಷಣಾರ್ಥಿಗಳು ತಲಾ 10 ಸಾವಿರ ರೂ. ಗಳಂತೆ ಮೃತರ ಕುಟುಂಬಕ್ಕೆ ನೆರವು ನೀಡಲು ಮುಂದಾದ ವಿಷಯ ತಿಳಿದು ಹೃದಯ ತುಂಬಿ ಬಂತು. ಅವರ ಔದಾರ್ಯ ಇತರರಿಗೆ ಮಾದರಿಯಾದುದು' ಎಂದು ಹೇಳಿದ್ದಾರೆ.
ಪರಿಹಾರದ ಭರವಸೆ : ತಮ್ಮ ಟ್ವೀಟ್ನಲ್ಲಿ ಮುಖ್ಯಮಂತ್ರಿಗಳು 'ಇದಕ್ಕೆ ಪ್ರೇರಣೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಹಾಗೂ ತಮ್ಮ ಗೆಳೆಯ ಸಾವಿಗೆ ಮನಮಿಡಿದು ಸ್ಪಂದಿಸಿದ ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ರಾಜ್ಯ ಸರ್ಕಾರವು ನಿಯಮಾನುಸಾರ ಬಸವರಾಜ ಅವರಿಗೆ ನೀಡಬೇಕಾದ ಪರಿಹಾರಗಳನ್ನು ತ್ವರಿತವಾಗಿ ನೀಡುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದೇನೆ' ಎಂದು ತಿಳಿಸಿದ್ದಾರೆ.
ಕಲಬರಗಿ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿ ಬಸವರಾಜ ಶಂಕರಪ್ಪ ಮಂಚನೂರು ಅವರ ಆಕಸ್ಮಿಕ ನಿಧನ ಅತ್ಯಂತ ನೋವಿನ ಸಂಗತಿ. ಆದರೆ ಅವರ 590 ಸಹ ಪ್ರಶಿಕ್ಷಣಾರ್ಥಿಗಳು ತಲಾ 10 ಸಾವಿರ ರೂ. ಗಳಂತೆ ಮೃತರ ಕುಟುಂಬಕ್ಕೆ ನೆರವು ನೀಡಲು ಮುಂದಾದ ವಿಷಯ ತಿಳಿದು ಹೃದಯ ತುಂಬಿ ಬಂತು. ಅವರ ಔದಾರ್ಯ ಇತರರಿಗೆ ಮಾದರಿಯಾದುದು.
— CM of Karnataka (@CMofKarnataka) January 7, 2019
ಬೀದರ್ ಜಿಲ್ಲೆಯ ಸೇಡಂ ತಾಲೂಕಿನ ಬಸವರಾಜ ಶಂಕರಪ್ಪ ಮಂಚನೂರು (27) ಅವರ ಶವ ಭಾನುವಾರ ಕಲಬುರಗಿಯ ರಾಮಮಂದಿರ ವೃತ್ತದಲ್ಲಿರುವ ಗ್ರ್ಯಾಂಡ್ ಸೆಂಟ್ರಲ್ ಕಾಂಪ್ಲೆಕ್ಸ್ ಮುಂದೆ ಪತ್ತೆಯಾಗಿತ್ತು.
ಕಲಬುರಗಿಯ ನಾಗನಹಳ್ಳಿಯಲ್ಲಿರುವ ಪೊಲೀಸ್ ತರಬೇರಿ ಶಾಲೆಯಲ್ಲಿ ಬಸವರಾಜ ಶಂಕರಪ್ಪ ಮಂಚನೂರು ತರಬೇತಿ ಪಡೆಯುತ್ತಿದ್ದರು. ಆರೋಗ್ಯ ಸರಿ ಇಲ್ಲ ಎಂದು ಶನಿವಾರ ರಜೆ ಹಾಕಿದ್ದರು. ಭಾನುವಾರ ಅವರು ಮೃತಪಟ್ಟಿದ್ದರು.