ಕುಂದಾನಗರಿಯಲ್ಲೂ ಬಿಡದ ಮಳೆ, ಗೋಡೆ ಕುಸಿದು ಅಮ್ಮ-ಮಕ್ಕಳು ಸಾವು
ಕಲಬುರಗಿ, ಆಗಸ್ಟ್.16: ಬುಧವಾರ (ಆಗಸ್ಟ್.15) ಸಂಜೆಯಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಗೆ ಗೋಡೆ ಕುಸಿದು ಸ್ಥಳದಲ್ಲೇ ಮೂವರು ದುರ್ಮರಣಕ್ಕೀಡಾಗಿರುವಂತಹ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಿತ್ತಲಶಿರೂರು ಗ್ರಾಮದಲ್ಲಿ ನಡೆದಿದೆ.
ತಾಯಿ ಲಕ್ಷ್ಮಿಬಾಯಿ (30), ಮಕ್ಕಳಾದ ಯಲ್ಲಮ್ಮ (11) ಹಾಗೂ ಅಂಬಿಕಾ (10) ಮೃತ ದುರ್ದೈವಿಗಳು. ತಡರಾತ್ರಿ ಎರಡು ಗಂಟೆ ಸುಮಾರಿಗೆ ಭೀಮಶಾ ಎಂಬುವವರ ಹಿಂಭಾಗದ ಗೋಡೆಯು, ಪಕ್ಕದಲ್ಲಿದ್ದ ತಗಡಿನ ಮನೆಯ ಮೇಲೆ ಏಕಾಏಕಿ ಕುಸಿದಿದೆ.
ಕೋಣಂದೂರಿನಲ್ಲಿ ಮಳೆ ಹೊಡೆತಕ್ಕೆ ಗೋಡೆ ಕುಸಿದು ಬಾಲಕ ಸಾವು
ಈ ವೇಳೆ ಮನೆಯಲ್ಲಿ ಮಲಗಿದ್ದವರು ಚಿರನಿದ್ರೆಗೆ ಜಾರಿದ್ದಾರೆ. ಘಟನೆಯಲ್ಲಿ ಮನೆ ಮಾಲೀಕ ಪ್ರಭುವಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರಂತದ ನಂತರ ಕುಟುಂಬಸ್ಥರ, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು, ಸ್ಥಳಕ್ಕೆ ನಿಂಬರ್ಗಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನ ಮರೋಣೊತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಸತತ ಮಳೆಗೆ ನಲುಗಿದ ಕೊಡಗಿನಲ್ಲಿ ಭೂ ಕುಸಿತಕ್ಕೆ ಮೂವರು ಸಾವು
ಮಲೆನಾಡು ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ, ದಕ್ಷಿಣ ಕನ್ನಡ, ಬಳ್ಳಾರಿ, ಉತ್ತರ ಕನ್ನಡ ಭಾಗಗಳಲ್ಲಿ ಕಳೆದೆರೆಡು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ.
ಇಂದು ಗುರುವಾರ ಸುರಿದ ಭಾರೀ ಮಳೆಗೆ ಶಿವಮೊಗ್ಗ ತಾಲೂಕಿನ ಕೋಣಂದೂರಿನ ಕೆಇಬಿ ಹಿಂಭಾಗದಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ ಅಯುಬ್ ಎಂಬುವವರ ಮನೆ ಗೋಡೆ ಕುಸಿದು ಅವರ ಮಗ ಮಸೂದ್ (5 ವರ್ಷ) ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾನೆ.