ಕಾಂಗ್ರೆಸ್ ತೊರೆಯುವ ಬಗ್ಗೆ ಶಾಸಕ ಮಾಲಕರೆಡ್ಡಿ ಹೇಳಿದ್ದೇನು?
ಕಲುಬುರಗಿ, ನವೆಂಬರ್ 11: ಸಚಿವ ಸ್ಥಾನ ಸಿಗದೆ ಅಸಮಧಾನಗೊಂಡಿರುವ ಹಿರಿಯ ಕಾಂಗ್ರೆಸ್ ಶಾಸಕರಾದ ಡಾ. ಎ.ಬಿ.ಮಾಲಕರೆಡ್ಡಿ ಹಾಗೂ ಮಾಲೀಕಯ್ಯ ಗುತ್ತೇದಾರ್ ಈ ಇಬ್ಬರು ಪಕ್ಷ ತೊರೆಯುವ ಬಗ್ಗೆ ಅನೇಕ ಸಲ ಊಹಾಪೋಹಗಳು ಕೇಳಿಬರುತ್ತಲೇ ಇವೆ.
ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ಮಾಲೀಕಯ್ಯ ಗುತ್ತೇದಾರ್ ರಾಜೀನಾಮೆ
ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ ಜತೆಗೆ ಒಂದು ಸುತ್ತಿನ ಮಾತುಕತೆ ಆಗಿದೆ. ಇಷ್ಟರಲ್ಲೇ ಜೆಡಿಎಸ್ ಪಕ್ಷ ಸೇರಲಿದ್ದಾರೆ ಎನ್ನುವ ಗುಮಾನಿ ಹಬ್ಬಿದೆ.
ಮತ್ತೊಂದೆಡೆ ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಖುದ್ದು ಮಾಲಕರೆಡ್ಡಿ ಹಾಗೂ ಮಾಲೀಕಯ್ಯ ಗುತ್ತೇದಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಕಲಬುರಗಿಯಲ್ಲಿ ಶನಿವಾರ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಯಾದಗಿರಿಯ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ, "ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರುತ್ತೇನೆ ಎಂಬುದು ಊಹಾಪೋಹ ಅಷ್ಟೇ.
40 ವರ್ಷಗಳ ಸುದೀರ್ಘ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಈ ವಯಸ್ಸಿನಲ್ಲಿ ಪಕ್ಷ ಬಿಟ್ಟು ಸಾಧಿಸುವುದೇನೂ ಇಲ್ಲ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.
ಜೆಡಿಎಸ್ ಸೇರುತ್ತೇನೆ ಎನ್ನುವುದು ನೋವು ತಂದಿದೆ
ಶಾಸಕ ಆಗೋದೇ ದೊಡ್ಡ ಸಾಧನೆ ಅಲ್ಲ, ಮುಂದೊಂದು ದಿನ ಪಕ್ಷ ಬಿಡಬಹುದು. ಆದರೆ. ಸಾಮಾನ್ಯ ನಾಗರೀಕನಾಗಿ ನನಗೆ ಇಷ್ಟವಾದ ಪಕ್ಷವನ್ನು ಬೆಂಬಲಿಸುತ್ತೇನೆ. ಆದರೆ, ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುತ್ತೇನೆ ಎಂಬ ಸುದ್ದಿ ನನಗೆ ನೋವು ತಂದಿದೆ ಎಂದು ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಹೇಳಿದರು.
ಪಕ್ಷದ ಬಗ್ಗೆ ಅಸಮಾಧಾನ ಇರುವುದು ಸತ್ಯ
ನನಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನ ಇರುವುದು ಸತ್ಯ. ನಮ್ಮ ಪಕ್ಷದಲ್ಲಿ ಅಸಮಾಧಾನ ಹೇಳಿಕೊಳ್ಳಲು ಅವಕಾಶವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹಿರಿಯ ಶಾಸಕರನ್ನು ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಮಾಲಕರೆಡ್ಡಿ ಅಸಮಧಾನ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಸ್ವಾರ್ಥತನವೇ ತಾಂಡವವಾಡುತ್ತಿದೆ
ಪಕ್ಷದಲ್ಲಿ ತಪ್ಪು ತಿದ್ದಿ ನಡೆಯುವ ಕೆಲಸ ಆಗಬೇಕಿದೆ. ಆದರೆ, ತಪ್ಪು ತಿದ್ದಿಕೊಂಡು ನಡೆಯುವ ಬದಲು ಕಾಂಗ್ರೆಸ್ ಪಕ್ಷದಲ್ಲಿ ಸ್ವಾರ್ಥತನವೇ ತಾಂಡವವಾಡುತ್ತಿದೆ ಎಂದು ಸ್ವಪಕ್ಷದ ವಿರುದ್ಧ ಹಿರಿಯ ಕಾಂಗ್ರೆಸ್ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಕಿಡಿ ಕಾರಿದರು.
ಶಾಸಕ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದೇನು?
ನಾನು ಸಧ್ಯ ಕಾಂಗ್ರೆಸ್ ತೊರೆಯುವ ಯೋಚನೆ ಇಲ್ಲ. ಮಾಧ್ಯಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂದು ಅಫ್ಜಲ್ ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರಲು ಸಜ್ಜಾಗಿದ್ದಾರೆ ಎನ್ನುವ ಗಾಳಿ ಸುದ್ದಿಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದರು.