ಹತ್ತು ಶಾಸಕರ ರಾಜೀನಾಮೆ ಕೊಡಿಸ್ತೀನಿ: ಯಡಿಯೂರಪ್ಪಗೆ ಸ್ವಾಮೀಜಿ ಬೆದರಿಕೆ
ಕಲಬುರಗಿ, ಫೆಬ್ರವರಿ 28: ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಪ್ಪುಗೌಡ (ದತ್ತಾತ್ರೇಯ ಸಿ. ಪಾಟೀಲ ರೇವೂರ) ಅವರಿಗೆ ಸಚಿವ ಸ್ಥಾನ ನೀಡದೆ ಹೋದರೆ ಅವರಿಂದ ರಾಜೀನಾಮೆ ಕೊಡಿಸುತ್ತೇನೆ. ಒಂದು ವರ್ಷದಲ್ಲಿ ಸಚಿವ ಸ್ಥಾ ನೀಡದಿದ್ದರೆ ಹತ್ತು ಜನರಿಂದ ರಾಜೀನಾಮೆ ಮೊಡಿಸುತ್ತೇನೆ ಎಂದು ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಸ್ವಾಮಿಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Recommended Video
ಕಲಬುರಿಯಲ್ಲಿ ಶುಕ್ರವಾರ ದತ್ತಾತ್ರೇಯ ಪಾಟೀಲ ರೇವೂರ ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆ ಹಾಗೂ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಅಪ್ಪುಗೌಡ ಅವರಿಗೆ ಸಚಿವ ಸ್ಥಾನ ನೀಡದೆ ಹೋದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
"ತಪ್ಪಾಗಿದೆ. ಹೊಟ್ಟೆಯಲ್ಲಿ ಹಾಕೊಳ್ಳಿ' ಎಂದ ವಚನಾನಂದ ಶ್ರೀ
ಅಪ್ಪುಗೌಡ ಅವರಿಗೆ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡದೆ ಹೋದರೆ ಅವರಿಗೆ ರಾಜೀನಾಮೆ ನೀಡಿ ಹೊಲ ಜಮೀನು ನೋಡಿಕೊಲ್ಳುವಂತೆ ಹೇಳುತ್ತೇನೆ. ಹೇಗೂ ಸಾವಿರ ಎಕರೆ ಜಮೀನು ಇದೆ. ರಾಜಕೀಯ ಬಿಟ್ಟು ಅದನ್ನು ಮಾಡಿಕೊಂಡಿರಿ. ಅಪ್ಪುಗೌಡ ಮಾತ್ರವಲ್ಲ, ಕಲ್ಯಾಣ ಕರ್ನಾಟಕದ ಹತ್ತು ಶಾಸಕರ ರಾಜೀನಾಮೆ ಕೊಡಿಸುವ ತಾಕತ್ತು ನನಗೆ ಇದೆ ಎಂದು ಹೇಳಿದರು.
ಈಗ ಅವಕಾಶ ಬಂದಿದೆ
ಕಲಬುರಗಿಯಲ್ಲಿ ಬಿಜೆಪಿಯನ್ನು ಒಂದು ನಾಯಿ ಕೂಡ ಕೇಳುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಚಂದ್ರಶೇಖರ ಪಾಟೀಲ ರೇವೂರ ಅವರು ಮನೆ ಮನೆಗೆ ತೆರಳಿ ಪಕ್ಷವನ್ನು ಕಟ್ಟಿ ಗೆದ್ದು ಬೆಳೆಸಿದರು. ಆಗ ಅವರಿಗೆ ಇದೇ ಸರ್ಕಾರ ಮಂತ್ರಿ ಸ್ಥಾನ ನೀಡಲಿಲ್ಲ. ಅಪರೂಪದ ವ್ಯಕ್ತಿ ಮಂತ್ರಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಈಗ ಅವಕಾಶ ಬಂದಿದೆ. ಈ ಅವಕಾಶ ತಪ್ಪಿಸಬಾರದು. ಅಕಸ್ಮಾತಾಗಿ ತಪ್ಪಿಸಿದರೆ ಹತ್ತು ಮಂದಿಯಿಂದ ರಾಜೀನಾಮೆ ಕೊಡಿಸುತ್ತೇನೆ.
ಯಡಿಯೂರಪ್ಪ ಸಿಎಂ ಆಗಿರಲಿ
ಸರ್ಕಾರ ಉರುಳಿಸುವುದು ನನ್ನ ಕೆಲಸವಲ್ಲ. ಯಡಿಯೂರಪ್ಪ ಅವರ ಸರ್ಕಾರ ಉಳಿಬೇಕು, ಬೀಳಬಾರದು. ಈ ಮೂರು ವರ್ಷ ಅಲ್ಲ, ಮುಂದಿನ ಐದು ವರ್ಷ ಮತ್ತೆ ಇರಬೇಕು. ಅವರು ಜಾತ್ಯತೀತ ನಾಯಕ. ಆದರೆ ಈಗ ಕೈತಪ್ಪಿದರೆ 30-40 ವರ್ಷದವರೆಗೆ ಮತ್ತೆ ಲಿಂಗಾಯತರು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಯಡಿಯೂರಪ್ಪ ಸಿಎ ಆಗಿ ಇರಬೇಕು ಎಂದು ನಮ್ಮ ಇಚ್ಛೆ ಇದೆ ಎಂದರು.
ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇನೆ
ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರ್ ಅಶೋಕ್ ಅವರಿಗೆ ಮನವಿ ಮಾಡುತ್ತೇನೆ. ಅಪ್ಪುಗೌಡ ಅವರನ್ನು ಸಚಿವರನ್ನಾಗಿ ಮಾಡಬೇಕು. ಇಲ್ಲದಿದ್ದರೆ ಆ ಬಿಕ್ಕಟ್ಟು ಮತ್ತೆ ಆರಂಭವಾಗುತ್ತದೆ ಎಂದು ಎಚ್ಚರಿಕೆ ನೀಡುತ್ತೇನೆ ಎಂದು ಹೇಳಿದರು.
ಮತ್ತೆ ಲಿಂಗಾಯತರಿಗೆ ಸಿಗುವುದಿಲ್ಲ
ಮುಂದಿನ ಬಾರಿಯೂ ಯಡಿಯೂರಪ್ಪ ಸಿಎಂ ಆಗಲಿ. ಕರುಣಾನಿಧಿ ಆಸ್ಪತ್ರೆಯಲ್ಲಿ ಇದ್ದುಕೊಂಡು ಆಡಳಿತ ಮಾಡಲಿಲ್ಲವೇ? ಒಮ್ಮೆ ಮುಖ್ಯಮಂತ್ರಿ ಪಟ್ಟ ಕೈ ತಪ್ಪಿದ್ರೆ ಲಿಂಗಾಯತ ಸಮುದಾಯಕ್ಕೆ ಸಿಎಂ ಪಟ್ಟ ಸಿಗೋದಿಲ್ಲ. ಮುಂದೆ ಮೂವತ್ತು ವರ್ಷ ಲಿಂಗಾಯತರಿಗೆ ಸಿಎಂ ಆಗುವ ಅವಕಾಶ ಸಿಗುವುದಿಲ್ಲ. ಯಡಿಯೂರಪ್ಪ ಸಿಎಂ ಆಗಿರುವ ಅವಧಿಯಲ್ಲೇ ಅಪ್ಪುಗೌಡ ಮಂತ್ರಿ ಆಗಲಿ ಎಂದು ಹೇಳಿದರು.
ವಚನಾನಂದ ಸ್ವಾಮೀಜಿ ವಿವಾದ
ಜನವರಿಯಲ್ಲಿ ಹರಿಹರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, 'ಯಡಿಯೂರಪ್ಪ ಅವರೇ, ನೀವು ರಾಜ್ಯದ ಮುಖ್ಯಮಂತ್ರಿ ಆಗಿದ್ದೀರಿ. ವೀರಶೈವ ಪಂಚಮಸಾಲಿ ಸಮುದಾಯ ನಿಮ್ಮ ಬೆನ್ನಿಗಿದೆ. ನೀವು ನಮ್ಮ ಸಮುದಾಯದ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು. ಮುರುಗೇಶ ನಿರಾಣಿ ನಮ್ಮ ಸಮುದಾಯದ ಪ್ರಶ್ನಾತೀತ ನಾಯಕ. ನೀವು ಅವರನ್ನು ಕೈ ಬಿಟ್ಟರೆ ನಮ್ಮ ಸಮುದಾಯ ನಿಮ್ಮನ್ನು ಕೈ ಬಿಡಲಿದೆ' ಎಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಕೋಪಗೊಂಡಿದ್ದ ಯಡಿಯೂರಪ್ಪ ವೇದಿಕೆ ಮೇಲೆಯೇ ರಾಜೀನಾಮೆ ನೀಡುವ ಮಾತನ್ನಾಡಿದ್ದರು.