ರಾಜಸ್ಥಾನ ಮೂಲದ ಟೈಲ್ಸ್ ಉದ್ಯಮಿಗೆ ಗುಂಡಿಕ್ಕಿ ಹತ್ಯೆ
ಬೆಂಗಳೂರು, ಆ. 28: ಕಲ್ಯಾಣ ಕರ್ನಾಟಕದ ಕಲಬುರಗಿ ಕ್ರೈಂ ಸಿಟಿ ಆಗುತ್ತಿದೆಯಾ? ಇಂಥದ್ದೊಂದು ಸಂಶಯ ಸ್ಥಳೀಯರಲ್ಲಿ ಮೂಡುತ್ತಿದೆ. ಕಳೆದ ಆ. 20 ರಂದು ನಗರದ ಪಬ್ಲಿಕ್ ಗಾರ್ಡನ್ ಬಳಿ ವೀರೇಶ್ ಎಂಬ ವಿದ್ಯಾರ್ಥಿಯನ್ನು ಹಾಡಹಗಲೇ ಹತ್ಯೆ ಮಾಡಲಾಗಿತ್ತು.
ಒಂದು ಲಕ್ಷ ರೂಪಾಯಿ ಹಣಕ್ಕಾಗಿ ವೀರೇಶ್ಗೆ ಡಿಮ್ಯಾಂಡ್ ಮಾಡಿದ್ದ ಕಾರದಪುಡಿ ಗ್ಯಾಂಗ್, ಹಣ ಕೊಡದೇ ಇದ್ದುದರಿಂದ ಕೊಲೆ ಮಾಡಿತ್ತು. ನಂತರ ಹತ್ಯೆಗೆ ಸಂಬಂಧಿಸಿದಂತೆ ಅಂಬರೀಶ್ @ ಕಾರಪುಡಿ ಅಂಬು, ಶ್ರೀಕಾಂತ್ @ ಕಾಳ್ಯಾ, ಲವ್ಯಾ @ ಲವಕುಶ, ಗಿರಿ @ ಗಿರಿರಾಜ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಅದು ಜನಮಾನಸದಿಂದ ಮರೆಯಾಗುವ ಮುನ್ನ ರಾಜಸ್ಥಾನ ಮೂಲದ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದರಿಂದಾಗಿ ನಗರದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಕಲಬುರಗಿ ನಗರದ ಗೋದುತಾಯಿ ನಗರದಲ್ಲಿ ಸುನೀಲ್ ರಂಕಾ (41) ಎಂಬ ಟೈಲ್ಸ್ ಉದ್ಯಮಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಗೋದುತಾಯಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ಸುನೀಲ್ ರಂಕಾ ವಾಸಿಸುತ್ತಿದ್ದರು. ದುಷ್ಕರ್ಮಿಗಳು ಮನೆ ಬಳಿಯೇ ಸುನೀಲ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಸುನೀಲ್ರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಸುನೀಲ್ ಮೃತಪಟ್ಟಿದ್ದಾರೆ.
ಘಟನೆಯಿಂದ ಸ್ಥಳೀಯರು ಆತಂಗೊಂಡಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ದು, ಕೊಲೆಗೆ ಕಾರಣ ಗೊತ್ತಾಗಿಲ್ಲ. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್ ಸತೀಶ್ಕುಮಾರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.