ಧಾರ್ಮಿಕ ಸಭೆ, ಉರುಸ್-ಜಾತ್ರೆ ನಡೆಸಿದ್ರೆ ನಿರ್ದಾಕ್ಷಿಣ್ಯ ಕ್ರಮ: ಕಲಬುರಗಿ ಡಿಸಿ
ಕಲಬುರಗಿ, ಏಪ್ರಿಲ್ 9: ಕೊರೋನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮವಾಗಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ಎಲ್ಲ ಧಾರ್ಮಿಕ ಮತ್ತು ಪ್ರಾರ್ಥನಾ ಸ್ಥಳಗಳನ್ನು ಮುಚ್ಚುವಂತೆ ಹಾಗೂ ಜಾತ್ರೆ, ಧಾರ್ಮಿಕ ಸಭೆ, ಧಾರ್ಮಿಕ ಉರುಸ್ಗಳನ್ನು ಕೈಗೊಳ್ಳದಂತೆ ಆದೇಶಿಸಿದ್ದರೂ ಸಹ ಕೆಲವು ಗ್ರಾಮಗಳಲ್ಲಿನ ಜನರು ರಾತ್ರಿ ವೇಳೆಯಲ್ಲಿ ಜಾತ್ರೆ, ಧಾರ್ಮಿಕ ಉರುಸ್, ಧಾರ್ಮಿಕ ಸಭೆಗಳನ್ನು ಕೈಗೊಳ್ಳುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.
ರಾಜ್ಯದಲ್ಲಿ ಸಿ.ಆರ್.ಪಿ.ಎಫ್. ಕಾಯ್ದೆ 1973ರ ಕಲಂ 144 ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಗಂಪು-ಗುಂಪಾಗಿ ಸೇರಿಕೊಂಡು ಧಾರ್ಮಿಕ ಸಭೆ ಹಾಗೂ ಉರುಸ್ ಹಾಗೂ ಜಾತ್ರೆಗಳನ್ನು ಕೈಗೊಳ್ಳುವುದು ಕಂಡು ಬಂದಲ್ಲಿ ಅಂತಹರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಎಚ್ಚರಿಕೆ ನೀಡಿದ್ದಾರೆ.
"ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡದ ವೈದ್ಯರು ದೇಶದ್ರೋಹಿಗಳು"
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಶರತ್, ದೆಹಲಿಯ ನಿಜಾಮುದ್ದೀನ್ನಲ್ಲಿ ಜರುಗಿದ ತಬ್ಲಿಘಿ ಮಾರ್ಕಾಜ್ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದವರು ಸ್ವಯಂಪ್ರೇರಿತರಾಗಿ ತಪಾಸಣೆಗೆ ಒಳಪಡಬೇಕು. ಮಂಗಳವಾರ ಮತ್ತು ಬುಧವಾರ ತಲಾ ಎರಡು ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿರುವುದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 9ಕ್ಕೆ ಏರಿದೆ. ಹೀಗಾಗಿ ಕಲಬುರಗಿಯಲ್ಲಿ ಲಾಕ್ ಡೌನ್ ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದರು.
ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತವಾಗಿ ಬೇರೆ ಜಿಲ್ಲೆ, ರಾಜ್ಯ, ವಿದೇಶದಿಂದ ಮರಳಿದ ವ್ಯಕ್ತಿಗಳು 14 ದಿನ ಗೃಹ ಬಂಧನ ಸಮಯ ಮುಗಿಸಿದರೂ ಸಹ ಇನ್ನೂ 14 ದಿನ ಸ್ವಯಂ ಆರೋಗ್ಯ ವರದಿ ನೀಡಲು ಮನೆಯಲ್ಲಿರಬೇಕು
ಕೊರೋನಾ ಹಿನ್ನೆಲೆಯಲ್ಲಿ ಅರೋಗ್ಯ ವಿಚಾರಿಸಲು ಮನೆಗೆ ಬರುವ ಆಶಾ/ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಕಲಬುರಗಿಯಲ್ಲಿ ಹಲ್ಲೆಗೆ ಯತ್ನ ನಡೆದಿದೆ. ಇದು ಜಿಲ್ಲಾಡಳಿತ, ಸ್ವತಃ ಡಿ.ಸಿ. ಮೇಲೆ ನಡೆಸಿರುವ ಹಲ್ಲೆ ಎಂದು ಭಾವಿಸಿದ್ದು, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕೋವಿಡ್-19 ಲಕ್ಷಣವಿರುವ ರೋಗಿಯನ್ನು ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ ಕಲಬುರಗಿ ನಗರದ ಬಹಮನಿ ಆಸ್ಪತ್ರೆಯನ್ನು ಸಂಪೂರ್ಣ ಸೀಲ್ ಮಾಡಲಾಗಿದ್ದು, ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಗೃಹ ಬಂಧನದಲ್ಲಿರಿಸಿದೆ