ವಿದ್ಯಾಗಮ ಕಾರ್ಯಕ್ರಮದ ರೂವಾರಿ ದಿಢೀರ್ ಎತ್ತಂಗಡಿ!
ಬೆಂಗಳೂರು, ಅ. 10: ಇಡೀ ರಾಜ್ಯಕ್ಕೆ ವಿದ್ಯಾಗಮ ಕಾರ್ಯಕ್ರಮ ಪರಿಚಯಿಸಿದ್ದ ಕಲಬುರಗಿ ಜಿಲ್ಲೆಯಲ್ಲಿಯೇ ಯೋಜನೆಗೆ ಹಿನ್ನಡೆಯಾಗಿದೆ. ಹೀಗಾಗಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಆದೇಶ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ವಠಾರ ಶಾಲೆಯ ರೂವಾರಿ ಕಲಬುರಗಿ ವಲಯ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳಿನಿ ಅತುಲ್ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ.
ಕೊರೊನಾ ಹಿನ್ನೆಲೆ ರಾಜ್ಯದಲ್ಲಿ ಶಾಲೆಗಳು ಮುಚ್ಚಿದ್ದಾಗಲೂ ಕಲಬುರಗಿಯಲ್ಲಿ ವಠಾರ ಶಾಲೆ ಆರಂಭಿಸುವ ಮೂಲಕ ಬಡ ವಿದ್ಯಾರ್ಥಿಗಳ ಕಲಿಕೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಇದೀಗ ವಠಾರ ಶಾಲೆಯ ನಾಲ್ಕು ಮಕ್ಕಳಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಹಾಗೂ ಕೊರೊನಾ ಹೆಚ್ಚುತ್ತಿರುವುದರಿಂದ ವಠಾರ ಶಾಲೆ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ಮಧ್ಯೆ ಕಾರ್ಯಕ್ರಮದ ರೂವಾರಿಯಾಗಿದ್ದ ಐಎಎಸ್ ಅಧಿಕಾರಿ ನಳಿನಿ ಅತುಲ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
'ವಿದ್ಯಾಗಮ' ಕಾರ್ಯಕ್ರಮ ಸ್ಥಗಿತಕ್ಕೆ ಸುರೇಶ್ ಕುಮಾರ್ ಆದೇಶ!
ನೂರಕ್ಕೂ ಹೆಚ್ಚು ಶಿಕ್ಷಕರ ಸಾವು
ವಿದ್ಯಾಗಮ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಸುಮಾರು ನೂರಕ್ಕೂ ಹೆಚ್ಚು ಶಿಕ್ಷಕರು ಕೊರೊನಾ ಸೋಂಕಿಗೆ ತುತ್ತಾಗಿ ಬಲಿಯಾಗಿರುವುದು ಬಹಿರಂಗವಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನಾಲ್ವರು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ವಿದ್ಯಾಗಮ ಮೂಲಕ ಬೋಧನೆ ಮಾಡುತ್ತಿದ್ದ ಶಾಲಾ ಮುಖ್ಯೋಪಾಧ್ಯಾಯರಿಂದ ಮಕ್ಕಳಿಗೆ ಸೋಂಕು ಹರಡಿದೆ ಎಂದು ಸ್ಥಳೀಯರು ಆರೋಪಿಸಿದ್ದರು.
ಶಾಲಾ ಮಕ್ಕಳಿಗೆ ಸೋಂಕು
ಬೆಳಗಾವಿಯ ರಾಮದುರ್ಗ ತಾಲ್ಲೂಕಿನ ತಿಮ್ಮಾಪುರ ಗ್ರಾಮದ 23 ಶಾಲಾ ಮಕ್ಕಳಿಗೂ ಸೋಂಕು ತಗುಲಿದೆ. ಇದು ಕೂಡ ವಿದ್ಯಾಗಮ ಕಾರ್ಯಕ್ರಮದಿಂದಲೇ ಮಕ್ಕಳಿಗೆ ಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ವಿದ್ಯಾಗಮ ಯೋಜನೆಯ ಮೂಲಕ ರಾಜ್ಯಾದ್ಯಂತ ಒಟ್ಟು ಸುಮಾರು 45 ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು.
ವಿಪಕ್ಷಗಳ ವಿರೋಧ
ವಿದ್ಯಾಗಮ ಯೋಜನೆಗೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಶಿಕ್ಷಕರೂ ಕೂಡ ಆತಂಕ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿರುವುದರಿಂದ ಕಾರ್ಯಕ್ರಮ ಸ್ಥಗಿತಕ್ಕೆ ಶಿಕ್ಷಣ ಸಚಿವರು ಸೂಚಿಸಿದ್ದಾರೆ.
ಬಿಜೆಪಿ ಶಾಸಕರಿಂದಲೂ ವಿರೋಧ
ವಿದ್ಯಾಗಮ ಯೋಜನೆಗೆ ಬಿಜೆಪಿ ಶಾಸಕರಿಂದಲೂ ವಿರೋಧ ವ್ಯಕ್ತವಾಗಿತ್ತು. ಶಾಸಕರಾದ ಆನಂದ್ ಸಿಂಗ್, ಕರುಣಾಕರ ರೆಡ್ಡಿ ಸೇರಿದಂತೆ ಹಲವರು ಬಹಿರಂಗವಾಗಿಯೇ ಕಾರ್ಯಕ್ರಮ ವಿರೋಧಿಸಿದ್ದರು. ಜೀವ ಉಳಿದರೆ ಮತ್ತೆ ಜೀವನ ಮಾಡಬಹುದು ಎಂದು ಸೂಚಿಸಿದ್ದರು.