ಹಸುಗೂಸು ಎತ್ತಿಕೊಂಡು ಹುಷಾರಾಗಿ ಸೇತುವೆ ದಾಟಿಸಿದ ಸಬ್ಇನ್ಸ್ಪೆಕ್ಟರ್!
ಕಲಬುರಗಿ, ಅ. 19: ಜನರು ಪ್ರವಾಹ ಸಂಕಷ್ಟದಲ್ಲಿ ಇರುವಾಗ ಕರ್ತವ್ಯ ಲೋಪದಿಂದ ಅಮಾನತಾಗುತ್ತಿರುವ ಅಧಿಕಾರಿಗಳು ಒಂದೆಡೆ, ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಅಧಿಕಾರಿಗಳು ಮತ್ತೊಂದೆಡೆ. ವಿಪರ್ಯಾಸ ಎಂದರೆ ಈ ಎರಡೂ ದೃಶ್ಯಗಳು ಕಂಡು ಬಂದಿದ್ದು ಒಂದೇ ಜಿಲ್ಲೆಯಲ್ಲಿ.
ಹಸುಗೂಸನ್ನ ಹೊತ್ತು ಸೇತುವೆ ದಾಟಿಸಿದ ಪಿ ಎಸ್ ಐ
— oneindiakannada (@OneindiaKannada) October 19, 2020
ಜೇವರ್ಗಿ ಸಬ್ ಇನ್ಸಪೆಕ್ಟರ್ ಸಂಗಮೇಶ್ ಅಂಗಡಿಯಿಂದ ಮನಮೆಚ್ಚುವ ಕಾರ್ಯ
ನೆರೆ ಸಂತ್ರಸ್ಥರ ಮಗುವನ್ನ ಹೊತ್ತು ದಡ ಸೇರಿಸಿದ ಸಬ್ ಇನ್ಸಪೆಕ್ಟರ್#Flood #karnatakaFlood #Bhimariver #Subinspector pic.twitter.com/yzFe6IUc2c
ಕರ್ತವ್ಯ ಲೋಪದ ಆರೋಪದಡಿ ಮೂವರು ಸರ್ಕಾರಿ ನೌಕರರು ಕಲಬುರಗಿ ಜಿಲ್ಲೆಯಲ್ಲಿ ಅಮಾನತಾಗಿದ್ದಾರೆ ಘಟನೆಯೂ ನಡೆದಿದೆ. ಆದರೆ ಇದೇ ಜಿಲ್ಲೆಯ ಜೇವರ್ಗಿಯಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಸಂಗಮೇಶ್ ಅಂಗಡಿ ಎಂಬುವರು ಹಸುಗೂಸನ್ನು ಎತ್ತಿಕೊಂಡು ಸುರಕ್ಷಿತವಾಗಿ ಸಂತ್ರಸ್ತರ ಇಡೀ ಕುಟುಂಬವನ್ನು ಸೇತುವೆ ದಾಟಿಸುವ ಮೂಲಕ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಜೇವರ್ಗಿ ಪೊಲೀಸ್ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಸಂಗಮೇಶ್ ಅಂಗಡಿ ಅವರು ಪ್ರವಾಹ ಪೀಡಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭೀಮಾನದಿ ಹಿನ್ನಿರಿನಿಂದಾಗಿ ಜೇವರ್ಗಿ ಸಮೀಪದ ಕೋನಹಿಪ್ಪರಗಿ ಗ್ರಾಮ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಪ್ರವಾಹದ ವೇಳೆ ಸೇತುವೆ ದಾಟಲು ಪರದಾಡುತ್ತಿದ್ದ ಸಂತ್ರಸ್ತ ಕುಟುಂಬವೊಂದನ್ನು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ಆ ಕುಟುಂಬದೊಂದಿಗೆ ಹಸುಗೂಸು ಇದ್ದಿದ್ದನ್ನು ಕಂಡ ಸಂಗಮೇಶ್ ಅಂಗಡಿ ಅವರು, ತಾವೇ ಖುದ್ದಾಗಿ ಮಗುವನ್ನು ಎತ್ತಿಕೊಂಡು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ಪೊಲೀಸ್ ಅಧಿಕಾರಿಯ ಈ ಕೆಲಸ ಸ್ಥಳೀಯರ ಪ್ರಶಂಸೆಗೆ ಕಾರಣವಾಗಿದೆ.