10 ನಿಮಿಷಕ್ಕೆ ಸೀಮಿತವಾಯ್ತು ಕಂದಾಯ ಸಚಿವರ ಪ್ರವಾಹ ಪೀಡಿತ ಪ್ರದೇಶಗಳ ಭೇಟಿ
ಕಲಬುರಗಿ, ಅಕ್ಟೋಬರ್ 16: ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದ್ದು, ಕಂದಾಯ ಸಚಿವ ಆರ್. ಅಶೋಕ್ ಅವರು ಇಂದು ಕಲಬುರಗಿಯ ಪ್ರವಾಹ ಪೀಡಿತ ಸ್ಥಳಗಳನ್ನು ವೀಕ್ಷಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಕಲಬುರಗಿ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿ ದವಸ-ಧಾನ್ಯಗಳನ್ನು ನಾಶವಾಗಿವೆ. ಜನರು ಇರುವ ಸೂರನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ.
ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ: ಉತ್ತರ ಕರ್ನಾಟಕಕ್ಕೆ ಜಲ ಕಂಟಕ
ಇಂತಹ ಪರಿಸ್ಥಿತಿಯಲ್ಲಿ ಪ್ರವಾಹ ಪೀಡಿತರ ಜೊತೆಗೆ ಇದ್ದು, ಸ್ಪಂದಿಸಬೇಕಾದ ಕಂದಾಯ ಸಚಿವರು ಕಾಟಾಚಾರಕ್ಕೆ ಎಂಬಂತೆ 10 ನಿಮಿಷಗಳ ಕಾಲ ನೆರೆ ವೀಕ್ಷಣೆ ಮಾಡಿ ವಾಪಸ್ ಆಗಿರುವುದು ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಸ್ಥಳಾಂತರ ಮಾಡಿ ಎಂದು ಕೈ ಮುಗಿದರು
ಇಂದು ಸಚಿವ ಆರ್.ಆಶೋಕ್ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಹಾಗೂ ಸುರಪುರ ಶಾಸಕ ರಾಜೂಗೌಡ ನಾಯಕ್ ಅವರು ಅತಿ ಹೆಚ್ಚು ಮಳೆ ಬಾಧಿತ ಪ್ರದೇಶವಾದ ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮಕ್ಕೆ ಭೇಟಿ ನೀಡಿದ್ದರು.
ಇದಾದ ನಂತರ ಸೈಯದ್ ಚಿಂಚೋಳಿ ಗ್ರಾಮದ ಆಶ್ರಯ ಕೇಂದ್ರಕ್ಕೂ ಭೇಟಿ ನೀಡಿದ್ದಾರೆ. ಈ ವೇಳೆ ನಮ್ಮನ್ನು ಬೇರೆ ಕಡೆ ಸ್ಥಳಾಂತರ ಮಾಡಿ ಎಂದು ಕೈ ಮುಗಿದು ಗ್ರಾಮದ ಮಹಿಳೆಯರು ಮನವಿ ಮಾಡಿಕೊಂಡಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಅವರ ಜೊತೆಯಲ್ಲಿ ಇದ್ದು, ಧೈರ್ಯ ಹೇಳಬೇಕಾದ ಜನಪ್ರತಿನಿಧಿಗಳು ಕೇವಲ 10 ನಿಮಿಷ ಪ್ರವಾಹ ಸ್ಥಳದಲ್ಲಿದ್ದು ನಂತರ ಅಲ್ಲಿಂದ ಹೋಗಿದ್ದಾರೆ.
ದವಸ, ಧಾನ್ಯಗಳನ್ನು ಕಳೆದುಕೊಂಡ ಗ್ರಾಮಸ್ಥರು
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಕಲಬುರಗಿ ಜಿಲ್ಲೆ ಅಕ್ಷರಶಃ ತತ್ತರಿಸಿದೆ. ದಶಕದದ ಮಳೆಗೆ ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ದವಸ ಧಾನ್ಯಗಳನ್ನು ಕಳೆದುಕೊಂಡು ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳು ಪುಸ್ತಕಗಳನ್ನು ಕಳೆದುಕೊಂಡು ಹೈರಾಣಾಗಿದ್ದಾರೆ. ಮಳೆ ನಿಂತು ಹೋದ ಮೇಲೆ ಈ ಗ್ರಾಮ ಜನರ ಬದುಕು ಬೀದಿಗೆ ಬಿದ್ದಿದೆ. ಮಹಾಮಳೆಯಿಂದ ದವಸ, ಧಾನ್ಯಗಳನ್ನು, ಕುರಿಗಳನ್ನು ಸೇರಿದಂತೆ ಎಲ್ಲವನ್ನು ಗ್ರಾಮಸ್ಥರು ಕಳೆದುಕೊಂಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಮಳೆ ಅಬ್ಬರ: ನಡುಗಡ್ಡೆಯಲ್ಲಿ ಸಿಲುಕಿದ ಜನ
ಗ್ರಾಮದಲ್ಲಿ 8 ಅಡಿಗೂ ಅಧಿಕ ನೀರು
ಹುಳ್ಸಗುಡ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಅಫ್ಜಲ್ ಪುರದ ಜೇವಗಿ (ಬಿ) ಗ್ರಾಮಸ್ಥರು ಊರನ್ನೇ ಖಾಲಿ ಮಾಡುತ್ತಿದ್ದಾರೆ. ಚಿತ್ತಾಪುರದ ಕಡಬೂರ ಗ್ರಾಮದಲ್ಲಿ 8 ಅಡಿಗೂ ಅಧಿಕ ನೀರು ಸಂಗ್ರಹವಾಗಿದೆ. ಮನೆಯ ಛಾವಣಿ ಮೇಲೆ ಕುಳಿತು ಜನ ದಿನ ಕಳೆಯುತ್ತಿದ್ದಾರೆ. ಮುತ್ತಗಾ ಗ್ರಾಮ ದ್ವೀಪದಂತಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ 4,819 ಮನೆಗಳಿಗೆ ನೀರು ನುಗ್ಗಿದೆ. 1058 ಮನೆಗಳಿಗೆ ಭಾರಿ ಹಾನಿಯಾಗಿದೆ. 518 ಜಾನುವಾರುಗಳ ಜೀವಹಾನಿಯಾಗಿದೆ.
ಕೆರೆ ಒಡೆದು ಗ್ರಾಮಕ್ಕೆ ನೀರು ನುಗ್ಗಿದೆ
ಈಗಾಗಲೇ ಕಲಬುರಗಿ ಜಿಲ್ಲೆಯ ಜೇವರ್ಗಿ, ಚಿತ್ತಾಪುರ, ಅಫ್ಜಲ್ ಪುರ ಹಾಗೂ ಸೇಡಂ ತಾಲೂಕಿನ ಗ್ರಾಮಗಳು ಮುಳುಗಡೆಯಾಗಿದ್ದು, ನಂದರಗಿ, ದಿಕ್ಸಂಗಾ, ಬಂಕಲಗಾ, ಅಳ್ಳಗಿ ಗ್ರಾಮಗಳು ಜಲಾವೃತವಾಗಿವೆ. ನೂರಾರು ಮನೆಗಳಿಗೆ ನೀರು ನುಗ್ಗಿ, ವಸ್ತುಗಳು ತೇಲಿಕೊಂಡು ಹೋಗಿವೆ. ದಿಕ್ಸಂಗಾ ಗ್ರಾಮದಲ್ಲಿ ಐದು ಎತ್ತುಗಳು ಕೊಚ್ಚಿ ಹೋಗಿವೆ. ಚಿಂಚೋಳಿ ತಾಲೂಕಿನಲ್ಲಿ ಇಡೀ ರಾತ್ರಿ ಮಳೆಯಾಗಿದ್ದು, ನಾಗಾಇದಾಲಾಯಿ ಗ್ರಾಮದ ಕೆರೆ ಒಡೆದು ಗ್ರಾಮಕ್ಕೆ ನೀರು ನುಗ್ಗಿದೆ. ದವಸ-ಧಾನ್ಯ ಕಳೆದುಕೊಂಡು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.