ಬಂಡಾಯ ಸಾಹಿತಿ ಚನ್ನಣ್ಣ ವಾಲೀಕಾರ ನಿಧನ
ಕಲಬುರಗಿ, ನವೆಂಬರ್ 25: ಬಂಡಾಯ ಸಾಹಿತಿ ಚನ್ನಣ್ಣ ವಾಲೀಕಾರ(78) ಅವರು ನಿಧನರಾಗಿದ್ದಾರೆ.
ಅವರು ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗಿದೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
1943ರ ಏಪ್ರಿಲ್ 6ರಂದು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಶಂಕರವಾಡಿ ಗ್ರಾಮದಲ್ಲಿ ಅವರು ಜನಿಸಿದ ಅವರು, ಪ್ರೌಢಶಾಲೆ ಶಿಕ್ಷಕರಾಗಿ, ಕಾಲೇಜು ಉಪನ್ಯಾಸಕರಾಗಿ, ಗುಲಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ, ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.
ವಾಲೀಕಾರ ಅವರು ಎರಡು ವರ್ಷದದಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಒಂದು ವರ್ಷದಿಂದ ಅವರ ಆರೋಗ್ಯ ಕ್ಷೀಣಿಸಿತ್ತು.ಮುಂಬೈ, ಹೈದರಾಬಾದ್, ಹಂಪಿ, ಬೆಂಗಳೂರು, ಧಾರವಾಡ, ಮೈಸೂರು, ಶಿವಮೊಗ್ಗದಲ್ಲಿ ಇರುವ ವಿಶ್ವವಿದ್ಯಾಲಯಗಳಲ್ಲಿಯೂ ಗ್ರಂಥಾಲಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ.
ಹತ್ತಾರು ಪ್ರಬಂಧಗಳು, ನಾಲ್ಕು ಮಹಾಕಾವ್ಯಗಳು, 11 ಕವನ ಸಂಕನಲಗಳು, 12 ನಾಟಕಗಳು, 4 ಜನಪದ ಸಂಪ್ರಬಂಧಗಳು, 5 ಕಾದಂಬರಿಗಳು, ಬೆಳ್ಯಾ ಕಾದಂಬರಿ ಬರೆದಿದ್ದಾರೆ.
ಚನ್ನಣ್ಣ ವಾಲೀಕಾರ ಅವರು ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ವಾಲೀಕಾರ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಸದಾ ದಮನಿತರ, ಶೋಷಿತರ ದನಿಯಾಗಿದ್ದ ಡಾ. ಚೆನ್ನಣ್ಣ ವಾಲೀಕಾರ ಅವರ ನಿಧನ ಅತೀವ ದುಃಖ ತಂದಿದೆ. ಸಾಹಿತ್ಯ ಕ್ಷೇತ್ರದ ಬೇರೆ ಬೇರೆ ಮಜಲುಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಅವರ ವಿಯೋಗದ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಟ್ವೀಟ್ ಮಾಡಿದ್ದಾರೆ.