ಬಡವ ಶ್ರೀಮಂತರೆನ್ನುವ ಭೇದವಿರದ ಹಿಂದೂಸ್ತಾನದ ಕನಸು ಕಂಡ ರಾಹುಲ್
ಕಲಬುರಗಿ, ಮಾರ್ಚ್ 18: ಎಲ್ಲರೂ ಸಮಾನರಾಗಿರುವ ಒಂದು ಹಿಂದೂಸ್ತಾನವನ್ನು ನಿರ್ಮಾಣ ಮಾಡುತ್ತೇವೆ, ಅಲ್ಲಿ ಬಡವ ಶ್ರೀಮಂತನೆಂಬ ಬೇಧಭಾವವಿಲ್ಲ ಎಲ್ಲರೂ ಸಮಾನರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಕಲಬುರಗಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿಯು ನಾನು ನಿಮ್ಮ ಚೌಕೀದಾರ ಎನ್ನುತ್ತಾ ದೇಶವನ್ನು ಕೊಳ್ಳೆ ಹೊಡೆಯಲು ಬಿಟ್ಟಿದ್ದಾರೆ. ಆದರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇದ್ಯಾವುದಕ್ಕೂ ಆಸ್ಪದವಿಲ್ಲ ಎಂದು ಹೇಳಿದರು.
ಎಲ್ಲರನ್ನೂ ಸಮಾನವಾಗಿ ನೋಡುವ ದೇಶವನ್ನು ನಿರ್ಮಾಣ ಮಾಡುತ್ತೇವೆ, ಅಂಬಾನಿ, ವಿಜಯ್ ಮಲ್ಯರಂತವರಿಗೆ ಸಾಲ ನೀಡಿದರೆ ಬಡವರಿಗೂ ಸಾಲ ನೀಡುತ್ತೇವೆ. ಶ್ರೀಮಂತರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರೆತರೆ ಬಡವರಿಗೂ ಒಳ್ಳೆಯ ವಿದ್ಯಾಭ್ಯಾಸ ನೀಡುತ್ತೇವೆ ಎಂದು ಭರವಸೆ ನೀಡಿದರು.
ಬಡವರಿಗೆ ಕನಿಷ್ಠ ವೇತನವನ್ನು ನೀಡುತ್ತೇವೆ, ಆದಾಯ ಮಿತಿ ರೇಖೆಯನ್ನು ಸಿದ್ಧಪಡಿಸಲಾಗುತ್ತದೆ, ಆ ರೇಖೆಗಿಂತ ಯಾರು ಕಡಿಮೆ ಇದ್ದಾರೆ ಅಂಥವರಿಗೆ ಕನಿಷ್ಠ ವೇತನ ನೀಡಲಾಗುತ್ತದೆ. ಹಾಗಾಗಿ ಯಾರೂ ಕೂಡ ಹಸಿವಿನಿಂದ ಬಳಲುವ ಪ್ರಶ್ನೆಯೇ ಇಲ್ಲ ಎಂದರು.
ಇನ್ನು ರೈತರ ಕೃಷಿ ಉತ್ಪನ್ನಗಳಿಗಾಗಿ ಕಾರ್ಖಾನೆಗಳನ್ನು ನಿರ್ಮಾಣ ಮಾಡುತ್ತೇವೆ, ಸೋಯಾ ಬೀನ್ ಬೆಳೆಯುವ ಕಡೆಯಲ್ಲಿ ಅದರ ತೈಲದ ಕಾರ್ಖಾನೆ, ಟೊಮೆಟೋ ಬೆಳೆಯುವ ಕರೆಯಲ್ಲಿ ಟೊಮೆಟ್ ಕೆಚಪ್ ತಯಾರಿಸುವ ಕಾರ್ಖಾನೆಯನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಕಲಬುರಗಿ ಸಮಾವೇಶ ಬಳಿಕ ಸಂಜೆ ಬೆಂಗಳೂರಿಗೆ ವಾಪಸಾಗಲಿರುವ ಅವರು, ಮಾನ್ಯತಾ ಟೆಕ್ಪಾರ್ಕ್ನ ಆಂಪಿ ಥೀಯೇಟರ್ನಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಉದ್ಯಮಿಗಳೊಂದಿಗಿನ ಸಂವಾದದಲ್ಲಿ ಭಾಗವಹಿಸಲಿದ್ದಾರೆ.