ದಿ. ಮಾಜಿ ಸಿಎಂ ಧರಮ್ ಸಿಂಗ್ ಹುಟ್ಟೂರಲ್ಲಿ ಇದೆಂಥ ವಿಲಕ್ಷಣ ವರ್ತನೆಯ ಪಿಎಸ್ಐ?
ಬೆಂಗಳೂರು, ಅ. 21: ಒಬ್ಬ ಜನಪ್ರತಿನಿಧಿಯ ನಡುವಳಿಕೆ ಅಧಿಕಾರಿಯೊಬ್ಬನ ಹುಚ್ಚಾಟಕ್ಕೆ ಹೇಗೆ ಕಾರಣವಾಗಬಹುದು ಎಂಬುದಕ್ಕೆ ತಾಜಾ ಉದಾಹರಣೆಯೊಂದು ಕಲಬುರಗಿ ಜಿಲ್ಲೆಯಲ್ಲಿ ವರದಿಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಸಬ್ಇನ್ಸ್ಪೆಕ್ಟರ್ ಒಬ್ಬರ ಹುಚ್ಚಾಟಕ್ಕೆ ಪ್ರವಾಹ ಸಂಸತ್ರಸ್ತರು ಹೈರಾಣಾಗಿದ್ದಾರೆ. ಸಂತ್ರಸ್ತರ ರಕ್ಷಣೆ ಮಾಡಬೇಕಾದ ಆ ಪೊಲೀಸಪ್ಪನ ಹುಚ್ಚಾಟದಿಂದ ಸಂತ್ರಸ್ತರು ಕಂಗಾಲಾಗಿದ್ದಾರೆ.
ಕಳೆದ ವರ್ಷ ಪ್ರವಾಹ ಸ್ಥಿತಿ ಎದುರಾಗಿದ್ದಾಗ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಇಂಥದ್ದೆ ಹುಚ್ಚಾಟವನ್ನು ಮಾಡಿದ್ದರು. ಹೊನ್ನಾಳಿ ಬಳಿಯ ಬೇಲಿ ಮಲ್ಲೂರು-ಕೋಟೆ ಮಲ್ಲೂರು ರಸ್ತೆಯಲ್ಲಿ ಹರಿಯುತ್ತಿದ್ದ ಮೊಣಕಾಲುದ್ದದ ನೀರಿನಲ್ಲಿ ತೆಪ್ಪದಲ್ಲಿ ಏರಿ ಹುಟ್ಟು ಹಾಕುವ ಮೂಲಕ ರೇಣುಕಾಚಾರ್ಯ ನಗೆಪಾಟಲಿಗೆ ಈಡಾಗಿದ್ದರು.
ಅದೇ ರೀತಿ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯ ಪಿಎಸ್ಐ ಪ್ರವಾಹದಿಂದ ಮುಳುಗಡೆ ಆಗಿರುವ ಊರಿನಲ್ಲಿ ಸಂತ್ರಸ್ತರ ಮಧ್ಯೆ ವಿಲಕ್ಷಣ ವರ್ತನೆ ತೋರಿದ್ದಾರೆ. ಹಿಂದೆಯೂ ಲಾಕ್ಡೌನ್ ವೇಳೆಯಲ್ಲಿ ಇಂಥದ್ದೆ ಬೇರೆ ಹುಚ್ಚಾಟವೊಂದನ್ನು ಮಾಡಿ ಸಸ್ಪೆಂಡ್ ಆಗಿದ್ದ ಆ ಪೊಲೀಸಪ್ಪ ಯಾರು ಗೊತ್ತಾ? ಸಂತ್ರಸ್ತರ ರಕ್ಷಣೆಯ ಬದಲು ಅವರು ಮಾಡಿದ್ದೇನು?
ಜೇವರ್ಗಿ ಸಮೀಪ ಭೀಮಾ ನದಿಗೆ ಪ್ರವಾಹ
ಬಾನಿನಿಂದ ಸುರಿಯುತ್ತಿರುವ ಮಳೆ, ಏರುತ್ತಿರುವ ಭೀಮಾ ನದಿಯ ಪ್ರವಾಹ, ಎದುರಿಗೆ ಈ ವಿಲಕ್ಷಣ ವ್ಯಕ್ತಿತ್ವದ ಪಿಎಸ್ಐ ಮಲ್ಲನಗೌಡ ಯಲಗೋಡ್. ಇದು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಸಮೀಪದ ಕೂಡಲಗಿ ಗ್ರಾಮದ ಸಂತ್ರಸ್ತರು ಪ್ರವಾಹ ಸಂದರ್ಭದಲ್ಲಿ ಎದುರಿಸಿದ ಭಯಾನಕ ಪರಿಸ್ಥಿತಿ. ಭೀಮಾ ನದಿ ಪ್ರವಾಹದಿಂದ ನೆಲೋಗಿ ಸಮೀಪ ಕೂಡಲಗಿ ಗ್ರಾಮ ಕೂಡ ಸಂಪೂರ್ಣ ಜಲಾವೃತವಾಗಿತ್ತು. ಜೊತೆಗೆ ಅಲ್ಲಿನ ಜನರೂ ಕೂಡ ಸುರಕ್ಷಿತ ಸ್ಥಳಗಳತ್ತ ಆಗಲೇ ತೆರಳುತ್ತಿದ್ದರು. ಆಗ ಎಂಟ್ರಿ ಕೊಟ್ಟಿದ್ದಾರೆ ಈ ಪಿಎಸ್ಐ ಎಂ.ಎಸ್. ಯಲಗೋಡ್.
ಸಂತ್ರಸ್ಥರಿಂದ ತೆಪ್ಪ ಕಳ್ಳಿಸಿಕೊಂಡ ಪಿಎಸ್ಐ
ನೆಲೋಗಿ ಸಮೀಪದ ಕೂಡಲಗಿ ಗ್ರಾಮಕ್ಕೆ ಪಿಎಸ್ಐ ಯಲಗೋಡ್ ತೆರಳಿದ್ದಾರೆ. ಅಲ್ಲಿಗೆ ಹೋಗುವಾಗ ಬಟ್ಟೆ ತೊಯ್ಯಬಾರದು ಎಂದು ಮೀನುಗಾರರ ತೆಪ್ಪದಲ್ಲಿ ಹೋಗಿದ್ದಾರೆ. ಪ್ರವಾಹಕ್ಕೆ ಸಿಕ್ಕಿ ಹೇಗೊ ತಪ್ಪಿಸಿಕೊಂಡು ಬಂದಿದ್ದ ಸಂತ್ರಸ್ತರನ್ನೇ ಮತ್ತೆ ತೆಪ್ಪ ತಳ್ಳಲು ಪಿಎಸ್ಐ ಯಲಗೋಡ್ ಬಳಸಿಕೊಂಡಿದ್ದಾರೆ. ಕೊನೆಗೆ ಸಂತ್ರಸ್ತರೇ ತೆಪ್ಪವನ್ನು ತಳ್ಳಿಕೊಂಡು ಕೂಡಲಗಿ ಗ್ರಾಮಕ್ಕೆ ಹೋಗಿದ್ದಾರೆ.
ಕುರಿಮರಿ ರಕ್ಷಣೆಯ ಹೈಡ್ರಾಮಾ!
ಅಲ್ಲಿ ರಕ್ಷಣೆಗೆ ಏನಾದರೂ ಸಿಗುತ್ತದೆಯಾ ನೋಡಿ ಎಂದು ಗ್ರಾಮಸ್ಥರಿಗೆ ಯಲಗೋಡ್ ಸೂಚಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಎಲ್ಲರೂ ಗ್ರಾಮ ತೊರೆದು ಹೋಗಿದ್ದರಿಂದ ಆ ಪಿಎಸ್ಐಗೆ ರಕ್ಷಣೆ ಮಾಡಲು ಏನೂ ಸಿಕ್ಕಿಲ್ಲ. ಹೀಗಾದರೆ ಆಗೊಲ್ಲ ಕುರಿಯೊಂದನ್ನು ತನ್ನಿ ಎಂದು ಗ್ರಾಮಸ್ಥರಿಗೆ ಬೆದರಿಸಿದ್ದಾನೆ. ಕೊನೆಗೆ ಗ್ರಾಮಸ್ಥರು ಹುಡುಕಾಡಿ ಮೇಕೆ ಮರಿಯೊಂದನ್ನು ತಂದು ಕೊಟ್ಟಿದ್ದಾರೆ.
ಮೇಕೆ ರಕ್ಷಣೆ ಮಾಡಿದ್ದೇನೆಂದು ಹೊಗಳಿಸಿಕೊಂಡ
ಮೇಕೆ ಮರಿ ಹಿಡಿದು ಪ್ರವಾಹದ ನೀರಿನಲ್ಲಿ ಪಿಎಸ್ಐ ಯಲಗೋಡ್ ಮೊಬೈಲ್ಗೆ ಪೋಜು ಕೊಟ್ಟಿದ್ದಾರೆ. ನೀರಿನಲ್ಲಿ ನಿಂತು ಸ್ಲೋ ಮೋಷನ್ನಲ್ಲಿ ಮೇಕೆ ಮರಿಯ ರಕ್ಷಣೆಯ ಆಕ್ಟಿಂಗ್ ಮಾಡಿದ್ದಾನೆ. ಭಾರೀ ಪ್ರವಾಹದಿಂದಾಗಿ ಮನೆಯಲ್ಲಿ ಮೇಕೆ ಮರಿ ಸಿಕ್ಕಿಕೊಂಡಿತ್ತು. ಅದನ್ನು ನಮ್ಮ ಗ್ರಾಮಸ್ಥರಿಂದ ರಕ್ಷಣೆ ಮಾಡುವುದು ಆಗಿರಲಿಲ್ಲ. ಯಲಗೋಡ ಸಾಹೇಬರು ಬಂದು ಅದನ್ನು ರಕ್ಷಿಸಿದ್ದಾರೆಂದು ಗ್ರಾಮಸ್ಥರ ಮೂಲಕ ಹೇಳಿಸಿದ್ದಾರೆ.
ಲಾಕ್ಡೌನ್ನಲ್ಲಿ ಹಾಲಿನ ಅಭಿಷೇಕ ಮಾಡಿಸಿಕೊಂಡಿದ್ದ
ಸಿನಿಮಾ ನೋಡಿ ಸಿಂಗಂನಂತೆ ಪೋಸು ಕೊಡಲು ಈ ಪೊಲೀಸಪ್ಪ ಹೀಗೆ ವಿಲಕ್ಷಣ ವರ್ತನೆ ಮಾಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಹಿಂದೆ ಕೂಡಾ ಕೊರೊನಾ ವೈರಸ್ ಲಾಕ್ಡೌನ್ ಇದ್ದಾಗಲೂ ಇಂಥದ್ದೆ ಹುಚ್ಚಾಟವನ್ನು ಈ ಪಿಎಸ್ಐ ಯಲಗೋಡ್ ಪ್ರದರ್ಶಿಸಿದ್ದ. ತನ್ನ ಹುಟ್ಟುಹಬ್ಬದಂದು ಕೊಡಗಟ್ಟಲೇ ಹಾಲಿನಿಂದ ಅಭಿಷೇಕ ಮಾಡಿಸಿಕೊಂಡಿದ್ದ. ಅದು ತೀವ್ರ ವಿವಾದಕ್ಕೆ ಗುರಿಯಾದಾಗ ಕಲಬುರಗಿ ಎಸ್ಪಿ ಇವರನ್ನು ಸ್ಪಸ್ಪೆಂಡ್ ಮಾಡಿದ್ದರು. ಪ್ರಭಾವಿ ಬೀರಿ ಮತ್ತೆ ಅದೇ ನೆಲೋಗಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಮತ್ತೆ ಹೀಗೆ ವಿಲಕ್ಷಣ ಆಟ ನಡೆಸಿದ್ದಾರೆ.
ದಿ. ಮಾಜಿ ಸಿಎಂ ಧರಂ ಸಿಂಗ್ ಹುಟ್ಟೂರು
ವಿಪರ್ಯಾಸ ಎಂದರೆ ಈ ರೀತಿ ವಿಲಕ್ಷಣವಾಗಿ ವರ್ತನೆ ಮಾಡುವ ಈ ಪಿಎಸ್ಐ ಕರ್ತವ್ಯ ನಿರ್ವಹಿಸುತ್ತಿರುವುದು ದಿ. ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಹಾಗೂ ಹಾಲಿ ಶಾಸಕ ಅಜಯ್ ಸಿಂಗ್ ಅವರು ಹುಟ್ಟೂರು ನೆಲೋಗಿಯಲ್ಲಿ. ಇಂತಹ ಊರಲ್ಲಿ ಕರ್ತವ್ಯ ನಿರ್ವಹಿಸುತ್ತಾ ಪಿಎಸ್ಐ ಯಲಗೋಡ್ ಹುಚ್ಚಾಟಗಳನ್ನು ಮಾಡುತ್ತಿದ್ದು, ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.
ನಾನು
ಸೇನೆಯಲ್ಲಿದ್ದು
ಬಂದವನು.
ಮೇಕೆ
ಮರಿಯೊಂದನ್ನು
ರಕ್ಷಣೆ
ಮಾಡುವಾಗ
ಯಾರೊ
ನನಗೆ
ಗೊತ್ತಿಲ್ಲದೆ
ಚಿತ್ರೀಕರಣ
ಮಾಡಿದ್ದಾರೆ,
ನನ್ನ
ಕರ್ತವ್ಯದಿಂದ
ಸಂತ್ರಸ್ತರಿಗೆ
ನೋವಾಗಿದ್ದರೆ
ಕ್ಷಮೇ
ಕೇಳುತ್ತೇನೆ
ಎಂದು
ಪಿಎಸ್ವೈ
ಯಲಗೋಡ್
ಮಾಧ್ಯಮಗಳಿಗೆ
ಪ್ರತಿಕ್ರಿಯೆ
ನೀಡಿದ್ದಾರೆ.