Just in: ಯುವತಿಯರು ಕೆಲಸಕ್ಕಾಗಿ ಮಂಚ ಹತ್ತಬೇಕಿದೆ; ಪ್ರಿಯಾಂಕ್ ಖರ್ಗೆ
ಕಲಬುರಗಿ, ಆಗಸ್ಟ್ 12: "ಉದ್ಯೋಗ ಸಿಗಬೇಕೆಂದರೆ ಇಂದು ಯುವತಿಯರು ಮಂಚ ಹತ್ತಬೇಕಾಗಿದೆ" ಎಂದು ಸರಕಾರವನ್ನು ಟೀಕಿಸುವ ಭರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, "ಈ ಬಿಜೆಪಿ ನೇತೃತ್ವದ ಸರಕಾರದಲ್ಲಿ ಕೆಲಸ ಸಿಗಬೇಕು ಎಂದರೆ, ಯುವಕರು ಲಂಚ ಕೊಡಬೇಕು. ಯುವತಿಯರು ಮಂಚ ಹತ್ತಬೇಕಾದ ಸ್ಥಿತಿ ಇದೆ. ಇದು ಲಂಚ-ಮಂಚದ ಸರಕಾರ" ಎಂದು ಕಿಡಿ ಕಾರಿದರು.
"ಯುವಜನತೆಗೆ ಕೆಲಸ ಕೊಡುವಲ್ಲಿ ಈ ಸರಕಾರ ಸಂಪೂರ್ಣ ವಿಫಲವಾಗಿದೆ. ಇಲ್ಲಿ ಎಲ್ಲಾ ಹುದ್ದೆಗಳು ಮಾರಾಟಕ್ಕಿವೆ. ಯುವಕರ ಭವಿಷ್ಯದ ಜೊತೆಗೆ ಇವರು ಚೆಲ್ಲಾಟವಾಡುತ್ತಿದ್ದಾರೆ. ಪ್ರತಿಯೊಂದು ಪರೀಕ್ಷೆಯಲ್ಲೂ ಅಕ್ರಮ ನಡೆದರೆ ಬಡವರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು?" ಎಂದು ಪ್ರಶ್ನಿಸಿದ್ದಾರೆ.
"ಈ ಸರಕಾರದ ಮೇಲೆ ಯುವಜನತೆ ನಂಬಿ ಕಳೆದುಕೊಂಡಿದ್ದಾರೆ. ಖಾಲಿಯಾಗಿರುವ ಹುದ್ದೆಗಳನ್ನು ಸರಕಾರ ಭರ್ತಿ ಮಾಡುತ್ತಿಲ್ಲ. ಇಲ್ಲಿ ಪ್ರತಿ ಹುದ್ದೆಗಳ ನೇಮಕಾತಿಯಲ್ಲಿಯೂ ಅಕ್ರಮ ನಡೆಯುತ್ತಿದೆ. ಕೆಪಿಟಿಸಿಎಲ್ನ 1,492 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಅರ್ಜಿ ಹಾಕಿದವರು ಮೂರು ಲಕ್ಷಕ್ಕೂ ಹೆಚ್ಚು ಜನ. ಈ ಪರೀಕ್ಷೆಯನ್ನು ಕೂಡ ಸರ್ಕಾರ ಪಿಎಸ್ಐ ಪರೀಕ್ಷೆ ನಡೆಸಿದಂತೆ ನಡೆಸಿದೆ. ಇವರ ಭವಿಷ್ಯದ ಜೊತೆಗೆ ಸರಕಾರ ಚೆಲ್ಲಾಟವಾಡುತ್ತಿದೆ" ಎಂದು ಆರೋಪಿಸಿದ್ದಾರೆ.
ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಅವರು "ನಾನು ಲಂಚ ಮಂಚದ ಸರ್ಕಾರ ಎಂದಿದ್ದಕ್ಕೆ ಬಿಜೆಪಿಯವರಿಗೆ ಉರಿ ಬಿದ್ದಿದೆ. ಸತ್ಯ ಆ ಮಟ್ಟಿಗೆ ಕಹಿಯಾಗಿರುತ್ತದೆ. ಬಿಜೆಪಿಯಲ್ಲಿ ಲಂಚ, ಮಂಚದ ಪುರಾಣವಿರದಿದ್ದರೆ ಒಬ್ಬ ಕೇಂದ್ರ ಸಚಿವರು, ಇನ್ನೊಬ್ಬ ರಾಜ್ಯ ಸಚಿವರು ರಾಜೀನಾಮೆ ನೀಡಿದ್ದೇಕೆ? ಬಿಜೆಪಿ ಸಂಸದರು, ಮಂತ್ರಿಗಳು,ಶಾಸಕರು ಕೋರ್ಟಿನಲ್ಲಿ ಸಾಲು ಸಾಲು ತಡೆಯಾಜ್ಞೆ ತಂದಿದ್ದೇಕೆ?" ಎಂದು ಮತ್ತೊಮ್ಮೆ ಪ್ರಶ್ನಿಸಿದ್ದಾರೆ.
ಇನ್ನು ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡುರುವುದರ ವಿರುದ್ಧ ಕಿಡಿ ಕಾರಿದ ಪ್ರಿಯಾಂಕ್ ಖರ್ಗೆ ಅವರು, ಅದಾನಿ ಮತ್ತು ಅಂಬಾನಿ ಕಂಪನಿಗೆ ಲಾಭ ಮಾಡಿಕೊಳ್ಳಲು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ದೇಶಭಕ್ತಿಯನ್ನು ಮಾರಾಟಕ್ಕಿಟ್ಟಿರುವ ಸರಕಾರ ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದೆ. ಸರ್ಕಾರವು ದೇಶಭಕ್ತಿ ಮತ್ತು ರಾಷ್ಟ್ರಧ್ವಜವನ್ನು ಮಾರಾಟಕ್ಕಿಟ್ಟಿದೆ. ಧ್ವಜ ಸಂಹಿತೆ ಬದಲಾಯಿಸಿ, ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡುವ ಮೂಲಕ ಖಾದಿ ಉದ್ಯಮಕ್ಕೆ ಹೊಡೆತ ಕೊಟ್ಟಿದ್ದಾರೆ. ಅಧಿಕಾರಿಗಳನ್ನು ಧ್ವಜ ಮಾರಾಟ ಮಾಡುವ ಸೇಲ್ಸ್ಮನ್ಗಳನ್ನಾಗಿಸಲಾಗಿದೆ. ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಟ್ಟ ಸರಕಾರಕ್ಕೆ ಧ್ವಜವನ್ನು ಉಚಿತವಾಗಿ ನೀಡುವ ಅರ್ಹತೆಯಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.