ಕಲಬುರಗಿ: ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದ ನಂತರ ವ್ಯಕ್ತಿ ಸಾವು
ಕಲಬುರಗಿ, ಮೇ 26: ಸಾಂಸ್ಥಿಕ ಕ್ವಾರಂಟೈನ್ ಅವಧಿ ಮುಗಿಸಿದ್ದ ವ್ಯಕ್ತಿಯು ತನ್ನ ಮನೆ ತಲುಪುವ ಮುನ್ನವೇ ಸಾವನ್ನಪ್ಪಿದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ಕಲಬುರಗಿಯ ಇಂದಿರಾ ನಗರದ ನಿವಾಸಿ ಚಂದ್ರಕಾಂತ್ ನಾಯಿಕೋಡಿ (32) ಮೃತ ದುರ್ದೈವಿಯಾಗಿದ್ದಾನೆ. ಚಂದ್ರಕಾಂತ್ ಅವರು ಕಲಬುರಗಿ ನಗರದಲ್ಲಿರುವ ಬಿಸಿಎಂ ಹಾಸ್ಟೇಲ್ ನಲ್ಲಿ ಅಡುಗೆ ಮಾಡುವವರಾಗಿದ್ದರು. ಅವರು ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು.
ಹೋಂ ಕ್ವಾರಂಟೈನ್ ಉಲ್ಲಂಘಿಸಿದರೆ FIR; ಕಲಬುರಗಿ ಡಿ.ಸಿ. ಎಚ್ಚರಿಕೆ
ಚಂದ್ರಕಾಂತ್ ಅವರ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿ ಸೋಮವಾರವಷ್ಟೇ ಮುಗಿದಿತ್ತು. ಅವರ ಕೊರೊನಾ ವೈರಸ್ ಪರೀಕ್ಷಾ ವರದಿ ಕೂಡ ನೆಗೆಟಿವ್ ಬಂದಿತ್ತು. ಹೀಗಾಗಿ ಆರೋಗ್ಯ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಚಂದ್ರಕಾಂತ್ ಅವರಿಗೆ ನಿಮ್ಮ ಕ್ವಾರಂಟೈನ್ ಅವಧಿ ಮುಗಿದೆ, ಮನೆಗೆ ತೆರಳಬಹುದು ಎಂದು ತಿಳಿಸಿದ್ದರು.
ಅದರಂತೆ ಸೋಮವಾರ ಚಂದ್ರಕಾತ್ ಸಂಬಂಧಿಕರೊಬ್ಬರ ಜೊತೆ ಬೈಕ್ ನಲ್ಲಿ ಮನೆಗೆ ಬರುವಾಗ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ಫಲಿಸದೇ ಚಂದ್ರಕಾಂತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆದರೆ ಅವರ ಸಾವಿಗೆ ಇನ್ನೂ ಸರಿಯಾದ ಕಾರಣ ತಿಳಿದುಬಂದಿಲ್ಲ. ವೈದ್ಯಾಧಿಕಾರಿಗಳು ಚಂದ್ರಕಾಂತ್ ಅವರ ಗಂಟಲು ದ್ರವವನ್ನು ಪಡೆದು ಮತ್ತೆ ಕೊರೊನಾ ವೈರಸ್ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.