ವೈದ್ಯರಿಗೆ ಮನೆ ಖಾಲಿ ಮಾಡಲು ಒತ್ತಾಯಿಸುವಂತಿಲ್ಲ: ಕಲಬುರಗಿ ಡಿಸಿ ಶರತ್ ಆದೇಶ
ಕಲಬುರಗಿ, ಮಾರ್ಚ್ 28: ಕಲಬುರಗಿ ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಹರಡುವ ಭೀತಿ ಎದುರಾಗಿದೆ. ಈ ನಡುವೆ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಬಾಡಿಗೆ ಮನೆ ಖಾಲಿ ಮಾಡಿ ಎಂದು ಮಾಲೀಕರು ಒತ್ತಾಯಿಸುತ್ತಿದ್ದ ಸಂಗತಿ ತಿಳಿದುಬಂದಿತ್ತು.
ಈ ಕುರಿತು ಡಿಸಿ ಶರತ್ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಮನೆ ಖಾಲಿ ಮಾಡುವಂತೆ ಒತ್ತಾಯಿಸುವಂತಿಲ್ಲ ಎಂದು ನಗರದ ಮನೆ ಮಾಲೀಕರಿಗೆ ಖಡಕ್ ಸೂಚನೆ ನೀಡಿದ್ದಾರೆ. ವೈದ್ಯರಿಗೆ ಹೀಗೆ ಒತ್ತಾಯ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಿಂದ ನಡೆದುಕೊಂಡೇ ಬಳ್ಳಾರಿ ಕಡೆ ಸಾಗಿದ ಕೂಲಿ ಕಾರ್ಮಿಕರು
ಪೆಟ್ರೋಲ್ ಬಂಕ್ ಮುಚ್ಚಲು ಆದೇಶ: ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ ಪೆಟ್ರೋಲ್ ಬಂಕ್ ಬಂದ್ ಮಾಡಬೇಕಾಗಿ ಶರತ್ ಅವರು ಆದೇಶ ಹೊರಡಿಸಿದ್ದಾರೆ. ಕಲಬುರಗಿ ಜಿಲ್ಲೆಯಾದ್ಯಂತ ಸಿಆರ್ ಪಿಸಿ ಕಾಯ್ದೆ 1973ರ ಕಲಂ 133ರನ್ವಯ ಅಧಿಕಾರ ಚಲಾಯಿಸುವ ಮೂಲಕ, ಮುಂದಿನ ಆದೇಶದವರೆಗೆ ಜಿಲ್ಲೆಯ ಎಲ್ಲ ಪೆಟ್ರೋಲ್ ಬಂಕ್ ಮುಚ್ಚುವಂತೆ ಷರತ್ತುಬದ್ಧ ಆದೇಶ ಹೊರಡಿಸಿದ್ದಾರೆ.
ಈ ಆದೇಶವು ಸರಕಾರಿ ವಾಹನಗಳಿಗೆ, ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ, ಎಲ್ಲಾ ತರಹದ ಆಂಬುಲೆನ್ಸ್ ಗಳಿಗೆ, ಔಷಧ ವ್ಯಾಪಾರಿಗಳಿಗೆ, ಪತ್ರಕರ್ತರಿಗೆ, ಕೇವಲ ಅವಶ್ಯಕ ಸೇವಾ ವ್ಯಾಪ್ತಿಯೊಳಪಡುವ ಇಲಾಖೆಗಳು ಹಾಗೂ ಸರಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತೋರಿಸಿ ಇವರು ಪೆಟ್ರೋಲ್ ಪಡೆಯಬಹುದೆಂದು ಸೂಚಿಸಿದ್ದಾರೆ. ಸುದ್ದಿ ತಿಳಿಯುತ್ತಿದಂತೆ ಜನರು ಪೆಟ್ರೋಲ್ ತುಂಬಿಸಿಕೊಳ್ಳಲು ಮುಗಿಬಿದ್ದ ದೃಶ್ಯ ನಿನ್ನೆ ಕಂಡುಬಂದಿತ್ತು.
ತಳ್ಳುವ ಗಾಡಿ ಮೂಲಕ ತರಕಾರಿ: ಈಗಾಗಲೇ ನಗರದ ತರಕಾರಿ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ, ಪ್ರತಿ ವಾರ್ಡ್ ಗಳಿಗೆ ತಳ್ಳುವ ಗಾಡಿ ಮೂಲಕ ತರಕಾರಿ ಸರಬರಾಜು ಮಾಡಲಾಗ್ತಿದೆ ಎಂದು ಮಾಹಿತಿ ನೀಡಿದ್ದಾರೆ ಜಿಲ್ಲಾಧಿಕಾರಿ. 144 ಸೆಕ್ಷನ್ ನಿಷೇಧಾಜ್ಞೆ ಮಧ್ಯೆ ಅನಗತ್ಯವಾಗಿ ಓಡಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.