ಕಲಬುರಗಿಯಲ್ಲಿ ಮತ್ತೆ ಆರೆಂಜ್ ಅಲರ್ಟ್ ಘೋಷಣೆ
ಕಲಬುರಗಿ, ಅಕ್ಟೋಬರ್ 19: ಜಿಲ್ಲೆಯಲ್ಲಿ ನಿನ್ನೆಯಿಂದ ತುಸು ಬಿಡುವು ಕೊಟ್ಟಿದ್ದ ಮಳೆ ಮತ್ತೆ ಬಿರುಸು ಪಡೆದುಕೊಳ್ಳುತ್ತಿದ್ದು, ಇಂದು ಮತ್ತೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ವಾರದಿಂದೀಚೆಗೆ ಕಲಬುರಗಿ ಜಿಲ್ಲೆಯಲ್ಲಿ ಅಬ್ಬರದ ಮಳೆ ಸುರಿದಿದೆ. ಮಳೆಯಿಂದಾಗಿ ಭೀಮಾ ನದಿ ಪ್ರವಾಹ ತಲೆದೋರಿ ಜನರು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಮಳೆ ಶುರುವಾದ ಮೊದಲ ದಿನಗಳಲ್ಲಿ ಜಿಲ್ಲೆಯ ಕಾಗಿಣಾ, ಭೀಮಾ ನದಿ ಸೇರಿ ಹಳ್ಳಕೊಳ್ಳಗಳು ತುಂಬಿ ಹರಿದಿದ್ದವು. ಇದರಿಂದ ಹೆಚ್ಚಿನ ಮಟ್ಟದಲ್ಲಿ ಬೆಳೆಗಳು ನಾಶವಾಗಿದ್ದವು. ನಂತರ ಪ್ರವಾಹ ಪರಿಸ್ಥಿತಿ ಏರ್ಪಟ್ಟು ಬದುಕೇ ಅಸ್ತವ್ಯಸ್ತವಾಗಿದೆ.
ಕಲಬುರಗಿ ಪ್ರವಾಹ; ರಕ್ಷಣಾ ಕಾರ್ಯಕ್ಕೆ ಸೇನೆ ನಿಯೋಜನೆ
ಮಹಾರಾಷ್ಟ್ರದಿಂದ ಹರಿದು ಬಂದ ಅಧಿಕ ಮಟ್ಟದ ನೀರಿನಿಂದ ಭೀಮಾ ನದಿ ಪ್ರವಾಹಕ್ಕೆ ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಕಲಬುರಗಿ ತಾಲೂಕಿನ 150ಕ್ಕೂ ಅಧಿಕ ಗ್ರಾಮಗಳು ಜಲಾವೃತವಾಗಿವೆ. ಜನರ ನೆರವಿಗೆ ಕಾಳಜಿ ಕೇಂದ್ರಗಳನ್ನೂ ತೆರೆಯಲಾಗಿದೆ. ನಿನ್ನೆಯಿಂದಷ್ಟೇ ಮಳೆಯ ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಕಂಡಿತ್ತು. ಇದೀಗ ಮತ್ತೆ ಮಳೆಯಾಗುತ್ತಿದ್ದು, ಜನರಲ್ಲಿ ಆತಂಕ ತುಂಬಿಕೊಂಡಿದೆ. ಜಿಲ್ಲಾಡಳಿತವೂ ಜನರ ರಕ್ಷಣೆಗೆ ಸಜ್ಜಾಗಿ ಅಗತ್ಯ ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿದೆ.
ಹವಾಮಾನ ಇಲಾಖೆ ಇನ್ನೂ ನಾಲ್ಕು ದಿನ ಜಿಲ್ಲೆಯಲ್ಲಿ ಮಳೆ ಸುರಿಯಲಿದೆ ಎಂಬ ಮಾಹಿತಿಯನ್ನು ನೀಡಿದ್ದು, ಆರೆಂಜ್ ಅಲರ್ಟ್ ಅನ್ನು ಘೋಷಿಸಲಾಗಿದೆ.