ಆಪರೇಷನ್ ಕಮಲ ಆಡಿಯೋ: ಯಡಿಯೂರಪ್ಪ ಪ್ರಕರಣ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ
ಕಲಬುರ್ಗಿ, ಜನವರಿ 28: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ 'ಆಪರೇಷನ್ ಕಮಲ' ಆಡಿಯೋ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ನ ಕಲಬುರ್ಗಿ ನ್ಯಾಯಪೀಠ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದೆ. ಜನಪ್ರತಿನಿಧಿಗಳ ಪ್ರಕರಣಗಳ ವಿಚಾರಣೆಗಾಗಿಯೇ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಹೀಗಾಗಿ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸುತ್ತಿರುವುದಾಗಿ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಹೇಳಿದರು.
ನೀವು ಸಿಎಂ, ಯಾರು ವಾರೆಂಟ್ ಹೊರಡಿಸುತ್ತಾರೆ?: ಯಡಿಯೂರಪ್ಪಗೆ ಸುಪ್ರೀಂಕೋರ್ಟ್ ಪ್ರಶ್ನೆ
'ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಮ್ಮ ತಂದೆಯ ಕಡೆಯಿಂದ ಆಮಿಷವೊಡ್ಡಲಾಗಿತ್ತು' ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಅವರ ಮಗ ಶರಣಗೌಡ ಪಾಟೀಲ ಕಂದಕೂರ ದೂರು ಸಲ್ಲಿಸಿದ್ದರು. ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿತ್ತು. ತಡೆಯಾಜ್ಞೆ ತೆರವುಗೊಳಿಸುವಂತೆ ಶರಣಗೌಡ ಅವರು ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿ ಅರ್ಜಿಯು ಬುಧವಾರ ವಿಚಾರಣೆಗೆ ಬಂದಿತ್ತು. ಆದರೆ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠವು ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿತು ಎಂದು ವಕೀಲ ವಿಲಾಸಕುಮಾರ್ ತಿಳಿಸಿದ್ದಾರೆ.
ಆಪರೇಷನ್ ಆಡಿಯೋ ಪ್ರಕರಣ ದಾಖಲಾದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ದೇವದುರ್ಗದ ಅತಿಥಿ ಗೃಹಕ್ಕೆ ತಮ್ಮನ್ನು ಕರೆಸಿಕೊಂಡು ಚುನಾವಣೆಯ ಖರ್ಚಿಗಾಗಿ 10 ಕೋಟಿ ರೂ ಮತ್ತು ಸಚಿವ ಸ್ಥಾನದ ಆಮಿಷವೊಡ್ಡಿ ತಮ್ಮ ತಂದೆ ಕಡೆಯಿಂದ ರಾಜೀನಾಮೆ ಕೊಡಿಡುವಂತೆ ಒತ್ತಡ ಹೇರಿದ್ದರು ಎಂದು ಶರಣಗೌಡ ಆರೋಪಿಸಿದ್ದಾರೆ. ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ್, ಹಾಸನ ಶಾಸಕ ಪ್ರೀತಂ ಗೌಡ, ಪತ್ರಕರ್ತ ಮರಮಕಲ್ ಅವರ ವಿರುದ್ಧ ಕೂಡ ಪ್ರಕರಣ ದಾಖಲಾಗಿವೆ.