ಹಿರಿಯ ಸಾಹಿತಿ ಗೀತಾ ನಾಗಭೂಷಣ್ ವಿಧಿವಶ
ಕಲಬುರಗಿ, ಜೂನ್ 29: ಹಿರಿಯ ಸಾಹಿತಿ ಗೀತಾ ನಾಗಭೂಷಣ್ (78) ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ.
ಕಲಬುರಗಿಯ ಸ್ವಸ್ತಿಕ್ ನಗರದಲ್ಲಿ ವಾಸವಿದ್ದರು, ಭಾನುವಾರ ಸಂಜೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಗೀತಾ ಅವರ ಹೆಸರಲ್ಲಿ ಅನೇಕ ಮೊದಲುಗಳ ದಾಖಲೆಗಳು ಸೃಷ್ಟಿಯಾಗಿವೆ. ಕೇಂದ್ರ ಸಾಹಿತಿ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಅವರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಸಾಹಿತಿಯೂ ಹೌದು.
ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ ಎಂಬ ದಾಖಲೆಯೂ ಇದೆ. ಭಾರತೀಯ ಭಾಷಾ ಪರಿಷತ್ನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿಯೂ ಅವರು.
2010ರಲ್ಲಿ ಗದಗ ನಗರದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಗೀತಾ ನಾಗಭೂಷಣ್ ವಹಿಸಿದ್ದರು. 1942, ಮಾರ್ಚ್ 25ರಂದು ಕಲಬುರ್ಗಿಯ ಸಾವಳಗಿ ಗ್ರಾಮದಲ್ಲಿ ಜನಸಿದ ಗೀತಾ ನಾಗಭೂಷಣ್ ಅವರು 27 ಕಾದಂಬರಿಗಳನ್ನ ಬರೆದಿದ್ದಾರೆ. ಅವರ 'ಬದುಕು' ಕಾದಂಬರಿಗೆ ಕೇಂದ್ರ ಸಾಹಿತಿ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 50 ಸಣ್ಣ ಕಥೆಗಳು ಮತ್ತು 12 ನಾಟಕ ಕೃತಿಗಳನ್ನೂ ಅವರು ರಚಿಸಿದ್ದಾರೆ.