ದಲಿತರೇ ಮುಖ್ಯಮಂತ್ರಿಯಾಗಲಿ ಎಂದು ನಾನು ಹೇಳಿಲ್ಲ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ, ಜನವರಿ 18 : ದಲಿತರೇ ಮುಖ್ಯಮಂತ್ರಿಯಾಗಬೇಕು ಎಂದು ನಾನು ಯಾವತ್ತೂ ಹೇಳಿಲ್ಲ, ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಗುರುವಾರ ಮಾತನಾಡಿದ ಅವರು, ದಲಿತರೇ ಮುಖ್ಯಮಂತ್ರಿಯಾಗಲಿ ಎಂದು ನಾನು ಹೇಳಿಲ್ಲ, ಎಲ್ಲರಿಗೂ ಮುಖ್ಯಮಂತ್ರಿಯಾಗುವ ಆಸೆ ಇರುತ್ತದೆ, ಅದು ಸಹಜ , ಸಿಎಂ ಆಗೋ ಕನಸು ಇದುವರೆಗೆ ನನಗೆ ಬಿದ್ದಿಲ್ಲ. ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಈ ಚುನಾವಣೆ ನಮ್ಮ ಕ್ಯಾಪ್ಟನ್ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರಿಗೆ ನಮ್ಮ ಭಾಗದ ಕನಿಷ್ಟ ಸಂಸ್ಕೃತಿ ಕೂಡ ಇಲ್ಲ, ಶಿಸ್ತಿನ ಪಕ್ಷದವರಾದ ಇವರ ಅಶಿಸ್ತು ಎಂತಹದ್ದು ಎಂದು ತೋರಿಸುತ್ತದೆ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಇವರದು ಅದೇನು ಕೊಡುಗೆ ಇದೆ ಎಂದು ಮೊದಲು ಹೇಳಲಿ, ಕೌಶಲ್ಯಾಭಿವೃದ್ಧಿ ಸಚಿವರಾದ ಅವರು ಎಷ್ಟು ಕಂಪನಿಗಳನ್ನು ತಂದಿದ್ದಾರೆ.
ನಾನು ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ನಾಲ್ಕು ಕಂಪನಿಗಳನ್ನು ತಂದಿದ್ದೆ ಇವರು ಮನುವಾದದ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಇವರು ಸಂವಿಧಾನ ಬದಲಾವಣೆ ಮಾಡೋದಕ್ಕೆ ಆಯ್ಕೆಯಾಗಿದ್ದಾರೆ ಎಂದು ಹೆಗಡೆಯವರ ವಿರುದ್ಧ ಗುಡುಗಿದರು.