ಕೆಲವೇ ಕ್ಷಣಗಳಲ್ಲಿ ಪಂಚಭೂತಗಳಲ್ಲಿ ಲೀನರಾಗಲಿರುವ ಧರಂ ಸಿಂಗ್
ಕಲಬುರ್ಗಿ, ಜುಲೈ 28: ನಿನ್ನೆ(ಜುಲೈ 27) ನಿಧನರಾದ ಕರ್ನಾಟಕದ 17 ನೇ ಮುಖ್ಯಮಂತ್ರಿಯಾಗಿದ್ದ ಎನ್. ಧರಂ ಸಿಂಗ್ ಅವರ ಅಂತ್ಯಸಂಸ್ಕಾರ ಇನ್ನು ಕೆಲವೇ ಕ್ಷಣಗಳಲ್ಲಿ ನೆರವೇರಲಿದ್ದು, ಅಜಾತಶತ್ರು ಧರಂ ಸಿಂಗ್ ಪಂಚಭೂತಗಳಲ್ಲಿ ಲೀನರಾಗಲಿದ್ದಾರೆ.
ಹುಟ್ಟೂರಾದ ನೆಲೋಗಿಯಲ್ಲಿಯೇ ಇಂದು ಸಂಜೆ ಧರಂಸಿಂಗ್ ಅಂತ್ಯಕ್ರಿಯೆ
ಇಂದು ಕಲಬುರ್ಗಿಯ ಅವರ ಹುಟ್ಟೂರಾದ ನೇಲೋಗಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಬೀದರ್, ಕಲಬುರ್ಗಿ ಸೇರಿದಂತೆ ಹೈದರಾಬಾದ್ ಕರ್ನಾಟಕ ಭಾಗದ ಸಾವಿರಾರು ಜನರು ಧರಂ ಸಿಂಗ್ ಅವರ ಅಂತಿಮ ದರ್ಶನ ಪಡೆದರು.
ನಿನ್ನೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ 80 ವರ್ಷದ ಧರಂ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜವನ್ನು ಸುತ್ತಿ ಹುಟ್ಟೂರಿಗೆ ಕೊಂಡೊಯ್ಯಲಾಯಿತು.
ಬೆಂಗಳೂರಿನಿಂದ ಬೀದರ್ ಗೆ ಹೆಲಿಕಾಪ್ಟರ್ ಮೂಲಕ ಕೊಡೊಯ್ದು, ನಂತರ ಬೀದರ್ ನಿಂದ ಕಲಬುರ್ಗಿಗೆ ರಸ್ತೆ ಮಾರ್ಗವಾಗಿ ಅವರ ಪಾರ್ಥಿವ ಶರೀರ ಕೊಂಡೊಯ್ಯಲಾಯ್ತು.ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯುತ್ತಿದ್ದ ವಾಹನವನ್ನು ಅವರ ಅಭಿಮಾನಿಗಳಲ್ಲೂ ಅಲ್ಲಲ್ಲಿ ತಡೆದು, ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದು, ಅಶ್ರುತರ್ಪಣ ನೀಡಿದರು.
ಧರಂ ಸಿಂಗ್ ಅವರ ನೆಚ್ಚಿನ ಗೆಳೆಯರೂ, ಸಹೋದ್ಯೋಗಿಯೂ ಆಗಿದ್ದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪತ್ನಿ ರಾಧಾಬಾಯಿ ಅವರೊಂದಿಗೆ ಜೇವರ್ಗಿಗೆ ತೆರಳಿ ಧರಂ ಸಿಂಗ್ ಪತ್ನಿ ಪ್ರಭಾವತಿ ಮತ್ತು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ನಿನ್ನೆ(ಜುಲೈ 27) ಮಾಧ್ಯಮಗಳು, ಧರಂ ಸಿಂಗ್ ರೊಂದಿಗಿನ ಒಡನಾಟದ ಬಗ್ಗೆ ಕೇಳಿದಾಗ ಬಿಕ್ಕಿ ಬಿಕ್ಕಿ ಅತ್ತಿದ್ದ ಖರ್ಗೆ ಅವರು, ಇಂದು ಸಹ ತಮ್ಮ ಸ್ನೇಹಿತನ ಪಾರ್ಥಿವ ಶರೀರ ಕಂಡು ಮತ್ತೊಮ್ಮೆ ಬಿಕ್ಕಿದರು.
ಇನ್ನು ಕೆಲವೇ ಕ್ಷಣ ಗಳಲ್ಲಿ ಪಂಚಭೂತಗಳಲ್ಲಿ ಲೀನರಾಗುವ ಧರಂ ಸಿಂಗ್ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದ್ದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.