ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರ ವಿಡಿಯೋ ವೈರಲ್!
ಬೆಂಗಳೂರು, ಅ. 17: ಪ್ರವಾಹ ಸಂತ್ರಸ್ತರ ನಿರ್ಲಕ್ಷ ಧೋರಣೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೆ ಬಿಜೆಪಿ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ಒಂದೆಡೆ ಡಿಸಿಎಂ ಗೋವಿಂದ ಕಾರಜೋಳ ಅವರು ತಮಗೆ ಕೊರೊನಾ ಆಗಿದ್ದರಿಂದ ಪ್ರವಾಹ ಪೀಡಿತ ಉಸ್ತುವಾರಿ ಜಿಲ್ಲೆ ಕಲಬುರಗಿಗೆ ಹೋಗಿಲ್ಲ ಎಂದಿದ್ದರು. ಆದರೆ ಆರೋಗ್ಯ ಸರಿಯಿಲ್ಲ ಎಂದು ನೆಪ ಹೇಳಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಕೂಡ ನನ್ನ ಮೇಲೆ ಸುಖಾಸುಮ್ಮನೇ ಅಪಪ್ರಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ನನಗೆ ಆರೋಗ್ಯ ಸರಿಯಿರದ ಕಾರಣ ಹೈದರಾಬಾದ್ಗೆ ತೆರಳಿದ್ದೆ. ಇದೀಗ ಕಲಬುರಗಿಗೆ ಬರುತ್ತಿದ್ದೇನೆ. ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯ ಬಗ್ಗೆ ಅಧಿಕಾರಿಗಳ ಸಂಪರ್ಕದಲ್ಲಿದ್ದೆ ಎಂಬ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರ ಹೇಳಿಕೆ ವಿಡಿಯೋ ಇದೀಗ ವೈರಲ್ ಆಗಿದೆ.
ನಮ್ಮ ಸರಕಾರ ಯಾವತ್ತೂ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತದೆ. ಜಿಲ್ಲೆಯ ಸಂಸದರು ಕಾಣೆಯಾಗಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ನಾನೀಗ ಕಲಬುರಗಿಗೆ ಬರುತ್ತಿದ್ದೇನೆ ಎಂದು ಸಂಸದ ಡಾ. ಉಮೇಶ್ ಜಾಧವ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇರುವಾಗ ಸಂಸದರು ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಜನರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಆ ಆರೋಪಕ್ಕೆ ಸ್ವತಃ ವಿಡಿಯೋ ಮಾಡಿ ಡಾ. ಉಮೇಶ್ ಜಾಧವ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.