ಕಲಬುರಗಿ ವೃದ್ಧ ಕೊರೊನಾದಿಂದ ಮೃತಪಟ್ಟಿಲ್ಲ : ಜಿಲ್ಲಾಧಿಕಾರಿ
ಕಲಬುರಗಿ, ಮಾರ್ಚ್ 11 : ಸೌದಿ ಅರೇಬಿಯಾ ಪ್ರವಾಸ ಮುಗಿಸಿಕೊಂಡು ಹಿಂದಿರುಗಿದ್ದ ವೃದ್ಧ ಮಹ್ಮದ್ ಹುಸೇನ್ ಸಿದ್ದಿಕ್ಕಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದೆ.
Recommended Video
ಬುಧವಾರ ಕಲಬುರಗಿ ನಗರದ ವಾರ್ತಾ ಭವನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಶರತ್ ಬಿ. ಅವರು, "ಮಹ್ಮದ್ ಹುಸೇನ್ ಸಿದ್ದಿಕಿ ಅವರು ಮಾರ್ಚ್ 9 ರಂದು ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರ ಅತಿಯಾಗಿ ಕಾಣಿಸಿದ್ದರಿಂದ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು" ಎಂದರು.
Coronavirus Effect: ಇಟಲಿಯಲ್ಲೇ ಸಿಲುಕಿಕೊಂಡ 100ಕ್ಕೂ ಹೆಚ್ಚು ಭಾರತೀಯರು
"ತದನಂತರ ಅದೇ ದಿನದಂದು ರಾತ್ರಿ ವೈದ್ಯಕೀಯ ಸಲಹೆ ಕಡೆಗಣಿಸಿ ಕುಟುಂಬಸ್ಥರು ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಹೈದರಾಬಾದ್ನ ಕೇರ್ ಹಾಸ್ಪಿಟಲ್ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು" ಎಂದು ಹೇಳಿದರು.
ಕೊರೊನಾ + ಹೈ ಬಿಪಿ = ಸಾವು : ಇದು ಚೀನಿ ವೈದ್ಯರೇ ಹೇಳಿದ ಮಾತು!
"ಸೌದಿ ಅರೇಬಿಯಾ ಪ್ರವಾಸ ಮುಗಿಸಿಕೊಂಡು ಹಿಂದಿರುಗಿದ ಮತ್ತು ವಯೋಸಹಜದಿಂದ ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಕಲಬುರಗಿ ನಗರದ ಮಹ್ಮದ್ ಹುಸೇನ್ ಸಿದ್ದಿಕಿ (76) ಮಾರ್ಚ್ 10 ರಂದು ನಿಧನರಾಗಿದ್ದು, ಕರೋನಾ ವೈರಸ್ನಿಂದ ನಿಧನವಾಗಿದ್ದಾರೆ ಎಂಬುದಕ್ಕೆ ವೈದ್ಯಕೀಯ ವರದಿ ಇನ್ನೂ ದೃಢೀಕರಿಸಿಲ್ಲ" ಎಂದು ಸ್ಪಷ್ಟಪಡಿಸಿದರು.
'ಕೊರೊನಾ' ಮೂಲಕ ಜೀವನ ಸತ್ಯ ಹೇಳಿದ 'ಅನಾಮಿಕ'
ಮಾರ್ಗದ ಮಧ್ಯೆ ನಿಧನ
"ವೃದ್ಧನನ್ನು ಹೈದರಾಬಾದ್ ಆಸ್ಪತ್ರೆಗೆ ದಾಕಲು ಮಾಡಲಾಗಿತ್ತು. ಅಲ್ಲಿಯೂ ಗುಣಮುಖರಾಗದ ಕಾರಣ ಕುಟುಂಬಸ್ಥರು ಆಸ್ಪತ್ರೆಯಿಂದ ಮಾರ್ಚ್ 10 ರಂದು ಮಧ್ಯಾಹ್ನ ಕಲಬುರಗಿಗೆ ಕರೆದುಕೊಂಡು ಬರುವಾಗ ಮಾರ್ಗಮಧ್ಯದಲ್ಲಿಯೇ ರೋಗಿ ನಿಧನ ಹೊಂದಿದ್ದಾರೆ. ಕೆಮ್ಮು, ಜ್ವರದಿಂದ ವ್ಯಕ್ತಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾದ ಕೂಡಲೇ ಇದನ್ನು ಶಂಕಿತ ಕೊರೋನಾ ವೈರಸ್ ಎಂದು ಭಾವಿಸಿಕೊಂಡು ಮಾರ್ಚ್ 9 ರಂದೇ ವ್ಯಕ್ತಿಯ ಗಂಟಲು ದ್ರವ್ಯ ಸ್ಯಾಂಪಲ್ ಪಡೆದು ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ ವರದಿ ಬಂದಿಲ್ಲ" ಎಂದು ಶರತ್ ಬಿ. ಹೇಳಿದರು.
ಯಾವುದೇ ಲಕ್ಷಣಗಳು ಕಂಡುಬಂದಿಲ್ಲ
"ಇನ್ನು ನಿಧನ ಹೊಂದಿದ ವ್ಯಕ್ತಿ ಕುಟುಂಬಸ್ಥರು ಮತು ಸಂಬಂಧಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಇದುವರೆಗೆ ಅವರ ಕುಟುಂಬದ ಸದಸ್ಯರಲ್ಲಿ ಶಂಕಿತ ಕೊರೋನಾ ವೈರಸ್ನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜನರು ಆತಂಕಗೊಳ್ಳಬೇಡಿ
"ಕಲಬುರಗಿ ಜಿಲ್ಲೆಯ ಜನರು ಆತಂಕಕ್ಕೊಳಗಾಬೇಡಿ. ಜಿಲ್ಲೆಯಲ್ಲಿ ಕೊರೋನಾ ವೈರಸ್ ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಜರ್ ಎಲ್ಲರೂ ಬಳಸುವ ಅವಶ್ಯಕತೆಯಿಲ್ಲ. ಅದೂ ವೈದ್ಯಕೀಯ ವೃತ್ತಿಪರರು ಸುರಕ್ಷತಾ ದೃಷ್ಠಿಯಿಂದ ಬಳಕೆ ಮಾಡಿಕೊಳ್ಳುತ್ತಾರೆ. ರೋಗ ನಿರೋಧಕ ಶಕ್ತಿ ಕಮ್ಮಿಯಿರುವ ವ್ಯಕ್ತಿಗಳು ಇದನ್ನು ಬಳಸಬಹುದಾಗಿದೆ" ಎಂದು ಜಿಲ್ಲಾಧಿಕಾರಿಗಳಿ ಹೇಳಿದರು.
ಸುರಕ್ಷತಾ ಕ್ರಮ ವಹಿಸಿ
"ಕರೋನಾ ವೈರಸ್ ಸೊಂಕು ಹರಡದಂತೆ ಸುರಕ್ಷತಾ ಕ್ರಮವಾಗಿ ಹ್ಯಾಂಡ್ ಶೇಕ್ ಮಾಡಬಾರದು, ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವಾಗ ಅಂತರ ಕಾಯ್ದುಕೊಳ್ಳುವುದು, ಕೆಮ್ಮು, ನೆಗಡಿ, ಶೀತವಾದಾಗ ಕರವಸ್ತ್ರ ಕಡ್ಡಾಯವಾಗಿ ಬಳಸಬೇಕು. ಕೆಮ್ಮು, ನೆಗಡಿ, ತೀವ್ರ ಜ್ವರದ ಲಕ್ಷಣ ಕಾಣಿಸಿದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯಬೇಕು" ಎಂದು ಶರತ್ ಬಿ. ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡರು.