ಮುಳುಗುತ್ತಿದ್ದವನ ಬದುಕಿಸಲು ಹೋಗಿ ಕಲಬುರ್ಗಿಯಲ್ಲಿ ವ್ಯಕ್ತಿ ಸಾವು
ಕಲಬುರ್ಗಿ, ಅಕ್ಟೋಬರ್ 31: ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋಗಿ ತಾವೇ ನೀರಿನಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಕಲಬುರ್ಗಿಯ ಕಾಗಿಣಾ ನದಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಜೇನು ಓಡಿಸಲು ಹೋಗಿ 32ನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು
ಸೇಡಂ ತಾಲೂಕಿನ ಬಿಬ್ಬಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದೆ. ನವೀನ್ ಕುಮಾರ್ ಹಿರೇಮಠ (33) ಮೃತ ದುರ್ದೈವಿಯಾಗಿದ್ದು, ಇವರು ಗುರಮಿಠಕಲ್ ತಾಲೂಕಿನ ನಂದೇಪಲ್ಲಿ ಗ್ರಾಮ ನಿವಾಸಿ. ಯಡಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಇಂದು ನದಿಯಲ್ಲಿ ಈಜಾಡಲು ಹೋಗಿದ್ದ ಬಾಲಕ ಇದ್ದಕ್ಕಿದ್ದಂತೆ ಮುಳುಗುತ್ತಿರುವುದನ್ನು ಕಂಡಾಗ ಆತನನ್ನು ರಕ್ಷಿಸಲು ಹೋಗಿ ಮೂವರು ವ್ಯಕ್ತಿಗಳು ನದಿಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ನವೀನ ಕುಮಾರ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಇಲ್ಲಿನ ಮರಳು ಮಾಫಿಯ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ನದಿಯಲ್ಲಿ ಅಕ್ರಮವಾಗಿ ಮರಳು ಬಗೆದು ತಗ್ಗು ಮಾಡಿದ್ದು, ನೀರಿನ ಪ್ರಮಾಣ ತಿಳಿಯುವುದಿಲ್ಲ, ಹೀಗಾಗಿ ಇಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ದೂರಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿ ಶವವನ್ನು ಹೊರತೆಗೆದಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.