'ಮೋದಿ ವರ್ಚಸ್ಸನ್ನು ಕಡಿಮೆ ಮಾಡಿದ ಪ್ರಿಯಾಂಕಾ ರಾಜಕೀಯ ಪ್ರವೇಶ'
ಕಲಬುರಗಿ, ಜನವರಿ 26: ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ನೇಮಕವಾದ ಹಿನ್ನೆಲೆಯಲ್ಲಿ ಪ್ರಧಾನಿ ವರ್ಚಸ್ಸು ಕಡಿಮೆಯಾದಂತಿದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಕಲಬುರಗಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ನಿಧಾನವಾಗಿ ಬಿಜೆಪಿಯಿಂದ ಹಿಂದ ಸರಿಯುತ್ತಿದ್ದಾರೆ , ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬಂದಿದ್ದರಿಂದ ಯುವಕರಲ್ಲಿ ಹೊಸ ಉತ್ಸಾಹ ಮೂಡಿದೆ ಬಿಜೆಪಿಗೆ ಭಯ ಆರಂಭವಾಗಿದೆ ಎಂದರು.
ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ
ಪ್ರಿಯಾಂಕಾ ಬಂದಿರುವುದರಿಂದ ಬಿಜೆಪಿ ಅವರಿಗೆ ಭಯ ಪ್ರಾರಂಭವಾಗಿದೆ. ಉಮೇಶ್ ಜಾಧವ್ಗೆ ಮಂತ್ರಿ ಸ್ಥಾನ ತಪ್ಪಲು ಖರ್ಗೆ ಕಾರಣ ಎನ್ನುವ ಆರೋಪವಿದೆ. ಆರೋಪ ಮಾಡುವವರು ಮಾಡಲಿ, ನನ್ನ ಬಗ್ಗೆ ಮಾತನಾಡುವವರು ಆಡಲಿ. ನಾನು ಐವತ್ತು ವರ್ಷ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ. ಬೇರೆಯವರ ಟೀಕೆ ಸ್ವಾಗತ ಎಂದು ಹೇಳಿದರು.
ಜಗತ್ತಿನಲ್ಲಿ ಬರವಣಿಗೆಯಲ್ಲಿರುವ ಸಂವಿಧಾನ ಎಲ್ಲಿಯೂ ಇಲ್ಲ. ನಮ್ಮ ಸಂವಿಧಾನ ಇಡಿ ಜಗತ್ತಿಗೆ ಮಾದರಿಯಾಗಿದೆ. ಆದರೆ, ಸಂವಿಧಾನಕ್ಕೆ ಚ್ಯುತಿ ತರುವ ಕೆಲಸ ಈಗ ನಡೆಯುತ್ತಿದೆ. ಸಂವಿಧಾನದಲ್ಲಿ ಇರದಿರುವ ಅಂಶಗಳನ್ನು ತಗೆದುಕೊಂಡು ಕಾನೂನು ಜಾರಿಗೊಳಿಸುವ ಯತ್ನ ನಡೆದಿದೆ.
ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗಬೇಕೆಂದು ಕೇಂದ್ರವನ್ನು ಒತ್ತಾಯಿಸಿದ್ದೆವು. ಈ ಹಿಂದೆ ಕೂಡ ಕರ್ನಾಟಕ ಸರ್ಕಾರದಿಂದ, ಸಂಸದರಿಂದ ಮನವಿ ಮಾಡಿದ್ದೆವು. ಆದರೆ, ಬಿಜೆಪಿ ಸರ್ಕಾರ ಯಾವುದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ತಮಗೆ ಬೇಕಾದಂತಹ ವ್ಯಕ್ತಿಗಳಿಗೆ ಪುರಸ್ಕಾರ ದೊರೆತಿದೆ ಎಂದು ದೂರಿದರು.