ಒಂದು ದೇಶ ಒಂದು ಚುನಾವಣೆ: ಖರ್ಗೆ ಅವರ ವಿರೋಧಗಳೇನು?
ಕಲಬುರಗಿ, ಜೂನ್ 24: ಬಿಜೆಪಿ ಕೇಂದ್ರದಲ್ಲಿ ಸತತ ಎರಡನೇ ಬಾರಿ ಅಧಿಕಾರಕ್ಕೆ ಬರುತ್ತಿದ್ದಂತೆ ದೇಶದಾದ್ಯಂತ ಏಕಕಾಲದಲ್ಲಿ ಚುನಾವಣೆಯ ಮಾತು ಮತ್ತೆ ಚಾಲ್ತಿಗೆ ಬಂದಿದೆ. ಈಗಾಗಲೇ ಮೋದಿ ನೇತೃತ್ವದಲ್ಲಿ ಸರ್ವ ಪಕ್ಷದ ಸಭೆಯೂ ನಡೆದಿದೆ.
ಆದರೆ ಮೋದಿ ಅವರ ನೇತೃತ್ವದ ಸರ್ವ ಪಕ್ಷ ಸಭೆಗೆ ಕೆಲವು ಪಕ್ಷಗಳು ಗೈರಾಗುವ ಮೂಲಕ ಬಿಜೆಪಿಯ ಏಕಕಾಲದಲ್ಲಿ ಚುನಾವಣೆ ಮಾಡುವ ಯೋಜನೆಗೆ ಅಸಮ್ಮತಿ ಸೂಚಿಸಿವೆ. ಕಾಂಗ್ರೆಸ್ ಸಹ ಈ ಬಗ್ಗೆ ಆಸಕ್ತಿ ತೋರಿಲ್ಲ.
ಕುಮಾರಸ್ವಾಮಿ ಅಚಾನಕ್ ಭೇಟಿ ಬಗ್ಗೆ ಮಾಹಿತಿ ನೀಡಿದ ಖರ್ಗೆ
ಈಗ ಮಾಜಿ ಸಂಸದ, ಸಚಿವ ಮಲ್ಲಿಕಾರ್ಜುನ ಖರ್ಗೆ ಮೋದಿ ಅವರು 'ಏಕಕಾಲದಲ್ಲಿ ಚುನಾವಣೆ' ಬಗ್ಗೆ ತಮಗೆ ಇರುವ ವಿರೋಧಗಳನ್ನು ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿರುವ ಅವರು, ಕೇಂದ್ರ ಸರ್ಕಾರವು ಏಕಕಾಲದಲ್ಲಿ ಎಂಎಲ್ಎ, ಎಂಪಿ ಚುನಾವಣೆಯನ್ನು ಮಾಡುತ್ತೇವೆ ಎನ್ನುತ್ತದೆ. ಆದರೆ ಇತ್ತೀಚೆಗೆ ಮುಕ್ತಾಯವಾದ ಲೋಕಸಭೆ ಚುನಾವಣೆಯನ್ನು ಮೂರು ತಿಂಗಳ ಮಾಡಿದೆ ಎಂದು ಹೇಳಿದರು.
ಕುತೂಹಲಕ್ಕೆ ಕಾರಣವಾದ ಮಲ್ಲಿಕಾರ್ಜುನ ಖರ್ಗೆ ದೆಹಲಿ ಭೇಟಿ
ತಮಿಳುನಾಡಿನಲ್ಲಿ ಒಂದು ಫೇಸ್, ಉತ್ತರ ಪ್ರದೇಶದಲ್ಲಿ ಏಳು ಫೇಸ್, ಕರ್ನಾಟಕದಲ್ಲಿ ಎರಡು ಫೇಸ್ ಹೀಗೆ ನಿಮಗೆ ಬೇಕಾದಷ್ಟು ಹಂತದಲ್ಲಿ ಚುನಾವಣೆ ಮಾಡ್ತೀರಿ, ಆದರೆ ಈಗ ನೋಡಿದರೆ ಏಕಕಾಲದಲ್ಲಿ ಚುನಾವಣೆ ಎಂದು ಹೇಳುತ್ತಿದ್ದೀರಿ ಎಂದು ಅವರು ಹೇಳಿದರು.
ಕೇಂದ್ರವನ್ನು ಪ್ರಶ್ನೆ ಮಾಡಿದ ಖರ್ಗೆ
ಯಾವುದಾದರೂ ರಾಜ್ಯದಲ್ಲಿ ಸರ್ಕಾರ ರಚನೆಯಾದ ಒಂದು ವರ್ಷದಲ್ಲಿ ವಿಧಾನಸಭೆ ವಿಸರ್ಜನೆ ಆದರೆ, ಮತ್ತೆ ಚುನಾವಣೆ ನಡೆಯಲು ನಾಲ್ಕು ವರ್ಷ ಕಾಯಬೇಕಾಗುತ್ತಾ? ಎಂದು ಖರ್ಗೆ ಕೇಂದ್ರವನ್ನು ಪ್ರಶ್ನಿಸಿದ್ದಾರೆ.
ಜನರನ್ನು ದಾರಿ ತಪ್ಪಿಸಲು ಸುದ್ದಿ ಹಬ್ಬಿಸುತ್ತದೆ ಬಿಜೆಪಿ
ಜನರನ್ನು ದಾರಿ ತಪ್ಪಿಸಲು ಹೊಸ ಹೊಸ ಸುದ್ದಿಗಳನ್ನು ಹರಿಬಿಡುವುದು ಕೇಂದ್ರ ಸರ್ಕಾರದ ಕೆಲಸವಾಗಿದೆ ಎಂದ ಖರ್ಗೆ, ಕೇಂದ್ರವು ಇವಿಎಂ ಬಗ್ಗೆ ಸರ್ವ ಪಕ್ಷಗಳ ಸಭೆ ನಡೆಸಿದ್ದರೆ ಉತ್ತಮವಿತ್ತು ಎಂದು ಸಲಹೆ ನೀಡಿದರು.
ಒಂದು ದೇಶ, ಒಂದು ಚುನಾವಣೆ: ಮಾರಕವೇ? ಪೂರಕವೇ?
'ಇವಿಎಂ ಚಿಪ್ ತಯಾರಿಸುವ ದೇಶದಲ್ಲಿಯೇ ಬ್ಯಾಲೆಟ್ ಬಳಸುತ್ತಾರೆ'
ಪ್ರಪಂಚದಲ್ಲಿ ಎಲ್ಲೂ ಇವಿಎಂ ಅನ್ನು ಮತದಾನಕ್ಕೆ ಬಳಸುತ್ತಿಲ್ಲ, ಇವಿಎಂ ನ ಚಿಪ್ ತಯಾರಿಸುವ ದೇಶದಲ್ಲಿಯೇ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸುತ್ತಾರೆ ಎಂದು ಖರ್ಗೆ ಹೇಳಿದರು.
'ರಾಹುಲ್ ರಾಜೀನಾಮೆ ನೀಡಿದರೆ ಕಾಂಗ್ರೆಸ್ಗೆ ತೊಂದರೆ'
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜೀನಾಮೆ ಸುದ್ದಿಯ ಬಗ್ಗೆ ಮಾತನಾಡಿದ ಖರ್ಗೆ ಅವರು, ರಾಹುಲ್ ಗಾಂಧಿ ಹೊರತಾಗಿ ಇನ್ನಾರೆ ಪಕ್ಷದ ಅಧ್ಯಕ್ಷರಾದರೂ ಸಹ ಕಾಂಗ್ರೆಸ್ಗೆ ತೊಂದರೆ ಆಗುತ್ತದೆ ಹಾಗಾಗಿ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿ ಎಂದು ಮನವೊಲಿಸುತ್ತೇವೆ ಎಂದು ಖರ್ಗೆ ಅವರು ಹೇಳಿದರು.